ಕರ್ನಾಟಕ

karnataka

ಉಗ್ರರ ದಾಳಿಯಿಂದ ಯೋಧನ ಉಳಿಸಿ, ತನ್ನ ಪ್ರಾಣ ಬಿಟ್ಟ 'ಕೆಂಟ್​'..ಸೇನೆಯಿಂದ ಹುತಾತ್ಮ ಶ್ವಾನಕ್ಕೆ ಸಲಾಂ

By ETV Bharat Karnataka Team

Published : Sep 13, 2023, 9:17 PM IST

Updated : Sep 13, 2023, 9:30 PM IST

ಸೇನಾ ಶ್ವಾನ ಕೆಂಟ್ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಪ್ರಾಣ ತೆತ್ತು ಹುತಾತ್ಮವಾಗಿದೆ. 5 ವರ್ಷಗಳಿಂದ ಅದು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿತ್ತು. ಕೆಂಟ್​ ನಿಧನಕ್ಕೆ ಸೇನೆ ತೀವ್ರ ಸಂತಾಪ ಸೂಚಿಸಿದೆ.

ಉಗ್ರರ ದಾಳಿಗೆ ಸೇನಾ ಶ್ವಾನ ಸಾವು
ಉಗ್ರರ ದಾಳಿಗೆ ಸೇನಾ ಶ್ವಾನ ಸಾವು

ರಾಜೌರಿ (ಜಮ್ಮು ಮತ್ತು ಕಾಶ್ಮೀರ):ಭಾರತೀಯ ಸೇನೆಯಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅತಿ ಚುರುಕಿನ ಸೇನಾ ಶ್ವಾನ ಕೆಂಟ್, ಮಂಗಳವಾರ ಉಗ್ರರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದೆ. ತನ್ನ ಹ್ಯಾಂಡ್ಲರ್​(ಜೊತೆಗಿರುವ ಯೋಧ)ನನ್ನು ಗುಂಡಿನ ದಾಳಿಯಲ್ಲಿ ರಕ್ಷಿಸಲು ಹೋಗಿ ತಾನು ಪ್ರಾಣ ತ್ಯಾಗ ಮಾಡಿದೆ. ಕೆಂಟ್​ ನಿಧನಕ್ಕೆ ಸೇನೆ ಸಂತಾಪ ಸೂಚಿಸಿದೆ.

ಹೆಣ್ಣು ಶ್ವಾನವಾಗಿದ್ದ ಕೆಂಟ್​, ಅತಿ ಕ್ಲಿಷ್ಟಕರವಾದ ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು. ಮಂಗಳವಾರ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಉಗ್ರರು ಅಡಗಿದ್ದ ಮಾಹಿತಿ ತಿಳಿದು ದಾಳಿ ನಡೆಸಿದ್ ಭದ್ರತಾ ಪಡೆಗಳೊಂದಿಗೆ ಬಂದಿದ್ದ ಕೆಂಟ್​ ಉಗ್ರರ ಜಾಡು ಪತ್ತೆ ಹಚ್ಚುತ್ತಿತ್ತು. ಈ ವೇಳೆ ಉಗ್ರರು ನಡೆಸಿದ ದಾಳಿಯಲ್ಲಿ ಗುಂಡುಗಳು ತಾಕಿ ಸ್ಥಳದಲ್ಲೇ ಸಾವನ್ನಪ್ಪಿದೆ. ಸೇನಾ ಶ್ವಾನ ದಳದಲ್ಲಿ ಕೆಂಟ್​ 5 ವರ್ಷಗಳಿಂದ ಕಾರ್ಯಾಚರಣೆಯಲ್ಲಿತ್ತು. ಉಳಿದೆಲ್ಲ ಶ್ವಾನಗಳಿಗಿಂತ ಇದು ತುಂಬಾ ಚುರುಕಾದ ಮತ್ತು ಅತಿ ವೇಗವಾದ ನಾಯಿಯಾಗಿತ್ತು. ಈವರೆಗೂ 8 ಕಾರ್ಯಾಚರಣೆಗಳಲ್ಲಿ ಇದು ಭಾಗಿಯಾಗಿ ಉಗ್ರರ ಜಾಡನ್ನು ಪತ್ತೆ ಮಾಡಿತ್ತು.

ವಿಡಿಯೋ ಹಂಚಿಕೊಂಡ ಸೇನೆ :ಕೆಂಟ್​ ಶ್ವಾನ ಈ ಹಿಂದೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ವಿಡಿಯೋವನ್ನು ಸೇನೆ ಹಂಚಿಕೊಂಡಿದೆ. ಉಗ್ರರ ಜಾಡು ಪತ್ತೆಯ ಜೊತೆಗೆ ಯೋಧರನ್ನು ಎಚ್ಚರಿಸುವ ಕೆಲಸವನ್ನೂ ಶ್ವಾನ ಮಾಡುತ್ತಿತ್ತು. ಟ್ರ್ಯಾಕರ್ ನಾಯಿಯಾಗಿ ತರಬೇತಿ ಪಡೆದ ಕೆಂಟ್ ಸೇನಾ ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗಿತ್ತು.

ಅರಣ್ಯ ಪ್ರದೇಶದಲ್ಲಿ ದಟ್ಟವಾದ ಪೊದೆಗಳ ನಡುವೆಯೂ ನುಗ್ಗುತ್ತಿದ್ದ ಕೆಂಟ್​, ಶೋಧ ಕಾರ್ಯಾಚರಣೆಯಲ್ಲಿ ತನ್ನ ಸಹ ಸೈನಿಕರನ್ನು ನಿರ್ಭಯವಾಗಿ ಮುನ್ನಡೆಸುತ್ತಿತ್ತು. ಎತ್ತರದ ಪ್ರದೇಶ, ಕಠಿಣ ಕಣಿವೆಗಳು ಇದ್ದರೂ ಕೆಂಟ್​ ಅಲ್ಲಿಗೆ ತೆರಳಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿತ್ತು. ಯೋಧರಿಗೆ ಅಪಾಯವಿದೆ ಎಂದು ಕಂಡುಬಂದಲ್ಲಿ ಅದು ಬೊಗಳಿ ಎಚ್ಚರಿಕೆ ರವಾನಿಸುತ್ತಿತ್ತು. ತನ್ನ ತಂಡದ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡ ನಂತರ, ಕೆಂಟ್ ಮುಂದಿನ ಕಾರ್ಯಾಚರಣೆಗೆ ಅಣಿಯಾಗುತ್ತಿತ್ತು.

ಕೆಂಟ್ ಶ್ವಾನದ ನಿಸ್ವಾರ್ಥ ಸೇವೆ ಮತ್ತು ಅಕಾಲಿಕ ಮರಣ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ವೇದನೆ ಉಂಟು ಮಾಡಿತು. ನಾಯಿಯ ಉನ್ನತ ತ್ಯಾಗಕ್ಕೆ ಗೌರವ ಮತ್ತು ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಹುತಾತ್ವರನ್ನು ಗೌರವಿಸುವ ವೇದಿಕೆಯಾದ ಲೆಸ್ಟ್ ವಿ ಫರ್ಗೆಟ್ ಇಂಡಿಯಾ ಕೂಡ ಕೆಂಟ್‌ಗೆ ಗೌರವವನ್ನು ಸಲ್ಲಿಸಿದೆ. ರಾಷ್ಟ್ರಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಮೂಕಪ್ರಾಣಿಗೆ ಸಲಾಂ ಎಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂತಾಪ:ಕೆಂಟ್​ ಶ್ವಾನದ ಸಾವಿನ ಸುದ್ದಿ ಹರಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ. 21 ಆರ್ಮಿ ಡಾಗ್ ಯೂನಿಟ್​ನ ಧೈರ್ಯವಂತ ಶ್ವಾನ ಕೆಂಟ್​ ಉಗ್ರರ ಕಾರ್ಯಾಚರಣೆ ವೇಳೆ ನಿಧನವಾಗಿದ್ದು, ಅದರ ಸೇವೆ ಮತ್ತು ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು ಶ್ವಾಘನೀಯ ಎಂದು ಮೆಚ್ಚುಗೆ ವ್ಯಕ್ತವಾಗಿದೆ.

ವಾಯುಯಾನ ಮಾಜಿ ಮಹಾನಿರ್ದೇಶಕರಾಗಿದ್ದ ಲೆಫ್ಟಿನೆಂಟ್ ಜನರಲ್ ಪಿಆರ್ ಕುಮಾರ್ ಅವರು, ಕೆಂಟ್‌ ಶ್ವಾನಕ್ಕೆ ಗೌರವ ಸಲ್ಲಿಸಿದ್ದು, 'ವೀರ ಯೋಧ' ಎಂದು ಉಲ್ಲೇಖಿಸಿದ್ದಾರೆ. ಕೆಂಟ್​ ನಿನಗೆ ಪ್ರಣಾಮಗಳು. ಕರ್ತವ್ಯದ ಮಿತಿಯನ್ನು ಮೀರಿ ಸೇವೆ ಸಲ್ಲಿಸಿದ್ದೀರಿ. ಒಂದೆ ಸೈನಿಕ ಮತ್ತು ಇನ್ನೊಂದಡೆ ನಿನ್ನ ಕೋರೆಹಲ್ಲು ಸೈನ್ಯದ ಬಲ. ದೇಶ ಸೇವೆ ವೇಳೆ ಪ್ರಾಣ ತ್ಯಾಗ ಮಾಡಿದ ನೀನು ಅಜರಾಮರ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಸೇನೆಯ ಕರ್ನಲ್, ಮೇಜರ್ ಸೇರಿ ಮೂವರು ಹುತಾತ್ಮ

Last Updated :Sep 13, 2023, 9:30 PM IST

ABOUT THE AUTHOR

...view details