ಕರ್ನಾಟಕ

karnataka

ಹೊಸ ಬದುಕಿನ ಖುಷಿಯಲ್ಲಿದ್ದ ಮದುಮಗ ಹಠಾತ್ ಸಾವು: ಮರಣದ ಮನೆಯಾಯ್ತು ಮದುವೆ ಮನೆ

By

Published : Jun 16, 2021, 12:52 PM IST

ಮದುವೆ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ವರ ಮೃತಪಟ್ಟಿದ್ದಾನೆ. ಮದುಮಗನ ಹಠಾತ್ ಸಾವಿನಿಂದ ಸಂತಸದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿದೆ. ಬಿಹಾರದ ಪಾಟ್ನಾ ಬಳಿಕ ಈ ದುರ್ಘಟನೆ ನಡೆದಿದೆ.

Groom dies due to Eclectic Shock
ಮದುಮಗ ಹಠಾತ್ ಸಾವು

ಪಾಟ್ನಾ(ಬಿಹಾರ): ವಿಧಿಯಾಟ ಬಲ್ಲವರಿಲ್ಲ. ನಾವು ಊಹಿಸಿರದ ರೀತಿಯಲ್ಲಿ ಕೆಲವು ದುರ್ಘಟನೆಗಳು ನಮ್ಮೆಲ್ಲ ಸಂತಸಕ್ಕೆ ಕ್ಷಣಮಾತ್ರದಲ್ಲಿ ಕೊಳ್ಳಿ ಇಡಬಹುದು. ಅಂತಹದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ.

ಸಂತೋಷದಿಂದ ಇರಬೇಕಾಗಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಅಷ್ಟಕ್ಕೂ ಇಲ್ಲಿ ಆಗಿರುವ ದುರ್ಘಟನೆ ಏನಪ್ಪ ಅಂದ್ರೆ, ಮದುವೆ ಮನೆಯಲ್ಲಿ ವರನೇ ವಿದ್ಯುತ್ ತಗುಲಿ ಮೃತಪಟ್ಟಿರುವುದು.

ಬಿಹಾರದ ರಾಜಧಾನಿ ಪಾಟ್ನಾ ಸಮೀಪದ ಬಿಹ್ತಾ ಪೊಲೀಸ್​ ಠಾಣಾ ವ್ಯಾಪ್ತಿಯ ದರಿಯಾಪುರ ಗ್ರಾಮದಲ್ಲಿ ಈ ದುರಂತ ಘಟಿಸಿತು. ಮದುವೆಗಿಂತ ಎರಡು ದಿನ ಮೊದಲು ನಡೆಯುವ ತಿಲಕ್ ಕಾರ್ಯಕ್ರಮದ ಬಳಿಕ ಮದುವೆ ಗಂಡು ವಿದ್ಯುತ್ ಶಾಕ್​ಗೆ ಬಲಿಯಾಗಿದ್ದಾನೆ. ಗ್ರಾಮದ ಪ್ರಭಾ ಪಾಸ್ವಾನ್ ಎಂಬವರ ಮಗ ಜಿತೇಂದ್ರ ಕುಮಾರ್​​ ( 24 ) ಮೃತಪಟ್ಟ ವರ. ಈತನ ಮದುವೆ ಜೂನ್​ 18 ರಂದು ನಡೆಯಬೇಕಿತ್ತು.

ಅದಕ್ಕೂ ಮೊದಲು, ನಡೆಯುವ ತಿಲಕ್ ಕಾರ್ಯಕ್ರಮವನ್ನು ಜೂನ್ 15 ರಂದು ಆಯೋಜಿಸಲಾಗಿತ್ತು. ನಿಗದಿಯಂತೆ ಕುಟುಂಬಸ್ಥರು, ಸ್ನೇಹಿತರು ಬಂದು ವರ ಜಿತೇಂದ್ರ ಕುಮಾರ್​ಗೆ ತಿಲಕ ಇಟ್ಟು ನವ ಜೀವನಕ್ಕೆ ಶುಭ ಕೋರಿದ್ದರು.

ಆದರೆ, ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಗಾಳಿ, ಮಳೆ ಶುರುವಾಗಿತ್ತು. ಪರಿಣಾಮ ವಿದ್ಯುತ್​ ತಂತಿಯೊಂದು ತುಂಡಾಗಿ ವರ ಜಿತೇಂದ್ರ ಕುಮಾರ್ ಮೇಲೆ ಬಿದ್ದಿದೆ. ವಿದ್ಯುತ್ ಶಾಕ್​​ನಿಂದ ಕುಸಿದುಬಿದ್ದ ಜಿತೇಂದ್ರನನ್ನು ಸಂಬಂಧಿಕರು ಆಸ್ಪತ್ರೆಗೆ ಕೊಂಡಯೊಯ್ದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಶೋಕದಲ್ಲಿ ಮುಳುಗಿದ ಗ್ರಾಮ: ಮದುವೆ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆಯವರಿಗೆ ವರ ಜಿತೇಂದ್ರನ ಹಠಾತ್ ಮರಣ ಬರ ಸಿಡಿಲಿನಂತೆ ಬಡಿದಿದೆ. ಇಡೀ ದಿನ ಸಂತದಲ್ಲಿ ಇದ್ದ ಮನೆ ಮೌನವಾಗಿದೆ. ಮದುಮಗನ ಸಾವಿನಿಂದ ಕೇವಲ ಮನೆಯವರು ಮಾತ್ರವಲ್ಲದೆ, ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

ವಿದ್ಯುತ್ ಇಲಾಖೆಯ ವಿರುದ್ಧ ಆಕ್ರೋಶ:ಶಿಥಿಲಗೊಂಡಿದ್ದ ವಿದ್ಯುತ್ ತಂತಿಯನ್ನು ಬದಲಾಯಿಸದ ಕಾರಣ, ಅದು, ಮುರಿದು ಬಿದ್ದು ಜಿತೇಂದ್ರ ಕುಮಾರ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಕುಟುಂಬಸ್ಥರು ಮತ್ತು ಗ್ರಾಮಸ್ಥರು ವಿದ್ಯುತ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂತಿ ಬದಲಾಯಿಸಿದ್ದರೆ, ದುರ್ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.

ದರಿಯಾಪುರ ಗ್ರಾಮದಲ್ಲಿ ತಿಲಕ ಕಾರ್ಯಕ್ರಮಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಕಾರಣದಿಂದ ವರ ಮೃತಪಟ್ಟಿದ್ದಾನೆ. ಪ್ರಾಥಮಿಕ ತನಿಖೆಯ ಬಳಿಕ ಮೃತದೇಹವನ್ನು ಉಪವಿಭಾಗ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಲಿಖಿತ ದೂರು ಸ್ವೀಕರಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹ್ತಾ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಅವಧೇಶ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details