ಕರ್ನಾಟಕ

karnataka

ಮಧ್ಯಪ್ರದೇಶ ಪೊಲೀಸರಿಗೆ 'ಫಿಟ್ನೆಸ್ ಗುರಿ'; 100 ಠಾಣೆಗಳಲ್ಲಿ ಮಿನಿ ಜಿಮ್‌, ವಿಶ್ರಾಂತಿ ಕೊಠಡಿ

By ETV Bharat Karnataka Team

Published : Oct 1, 2023, 6:27 PM IST

ಮಧ್ಯಪ್ರದೇಶದ ಹೆಚ್ಚಿನ ಸಂಖ್ಯೆಯ ಪೊಲೀಸರು ಕೆಲಸ ನಿರ್ವಹಿಸಲು ಅನರ್ಹರು ಮತ್ತು ಅವರು ಅನೇಕ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಫಿಟ್‌ನೆಸ್
ಫಿಟ್‌ನೆಸ್

ಭೋಪಾಲ್ (ಮಧ್ಯಪ್ರದೇಶ): ನಿಯಮಿತ ಮತ್ತು ಕಡ್ಡಾಯ ದೈಹಿಕ ತರಬೇತಿ ಸೇರಿದಂತೆ ರಾಜ್ಯದ ಪೊಲೀಸ್ ಸಿಬ್ಬಂದಿಯ ಫಿಟ್‌ನೆಸ್ ಸುಧಾರಿಸಲು ಅಸ್ಸಾಂ ಸರ್ಕಾರ ಹಲವಾರು ಕ್ರಮಗಳನ್ನು ಘೋಷಿಸಿದ ತಿಂಗಳುಗಳ ನಂತರ, ಮಧ್ಯಪ್ರದೇಶ ಸರ್ಕಾರ ಕೂಡ ತಮ್ಮ ರಾಜ್ಯದ ಪೊಲೀಸರು ಕೆಲಸದ ಅವಶ್ಯಕತೆಗಳನ್ನು ಪೂರೈಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದೆ.

ರಾಜ್ಯದಲ್ಲಿ ಪೊಲೀಸರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಠಿಣ ದೈಹಿಕ ವ್ಯಾಯಾಮದ ದೈನಂದಿನ ಕಟ್ಟುಪಾಡುಗಳನ್ನು ಅನುಸರಿಸಲು ಮುಂದಾಗಿದೆ. ಈ ಹಂತದ ಭಾಗವಾಗಿ 100 ಪೊಲೀಸ್ ಠಾಣೆಗಳಲ್ಲಿ ಮಿನಿ ಜಿಮ್‌ಗಳು ಮತ್ತು ‘ಸ್ಲೀಪಿಂಗ್ ರೂಂ’ಗಳನ್ನು ತೆರೆಯಲಾಗುತ್ತಿದೆ. ಪೊಲೀಸ್ ಠಾಣೆಯಿಂದಲೇ ಉತ್ತಮ ವ್ಯಕ್ತಿಯನ್ನು ಆರಿಸಿ ತರಬೇತುದಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಪೊಲೀಸರು ತೀವ್ರವಾಗಿ ದಣಿದಿದ್ದಲ್ಲಿ ವಿಶ್ರಾಂತಿ ಕೊಠಡಿಗಳಲ್ಲಿ ಸ್ವಲ್ಪ ನಿದ್ರೆ ಮಾಡುವ ಮೂಲಕವೂ ಸುಧಾರಿಸಿಕೊಳ್ಳಬಹುದಾಗಿದೆ.

ಇದಕ್ಕಾಗಿ ಗೃಹ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ಪೊಲೀಸರಲ್ಲಿ ಒತ್ತಡ ಹೆಚ್ಚುತ್ತಿರುವ ಘಟನೆಗಳು ನಡೆಯುತ್ತಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಪೊಲೀಸರನ್ನು ಹೇಗೆ ಸದೃಢವಾಗಿಡಬೇಕು ಮತ್ತು ಒತ್ತಡ ಮುಕ್ತವಾಗಿಡಬೇಕು ಎಂಬುದರ ಕುರಿತು ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಇದಕ್ಕಾಗಿ ರಾಜ್ಯದ ಪೊಲೀಸ್ ಠಾಣೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ರಾಜ್ಯದಲ್ಲಿರುವ ಹೆಚ್ಚಿನ ಸಂಖ್ಯೆಯ ಪೊಲೀಸರು ಅನರ್ಹರು ಮತ್ತು ಅವರು ಅನೇಕ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ನಗರ ಪ್ರದೇಶಗಳಿಂದ ದೂರವಿರುವ ಪೊಲೀಸ್ ಠಾಣೆಗಳಲ್ಲಿ ಈ ಉಪಕ್ರಮವು ಮೊದಲು ಪ್ರಾರಂಭವಾಗುತ್ತದೆ ಮತ್ತು ಹಲವಾರು ತಿಂಗಳುಗಳ ಕಾಲ ತಮ್ಮ ಮನೆಗಳಿಂದ ದೂರವಿರುವ ಪೊಲೀಸರಲ್ಲಿ ಈ ಸಮಸ್ಯೆ ಕಂಡುಬಂದಿದೆ.

ಅನೇಕ ಹೊಸ ಕಾನ್‌ಸ್ಟೆಬಲ್‌ಗಳು ತಾಲೀಮಿಗೆ ಹೋಗಲು ಆಸಕ್ತಿ ತೋರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ನಗರ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ಜಿಮ್‌ಗಳಿವೆ. ಈಗ ದೂರದ ಪೊಲೀಸ್ ಠಾಣೆಗಳಲ್ಲಿ ಇವುಗಳನ್ನು ಆರಂಭಿಸುವ ಅಗತ್ಯವಿದೆ. ಒಂಬತ್ತು ವರ್ಷಗಳ ಹಿಂದೆ ಯೋಜನೆಯೊಂದನ್ನು ಪ್ರಾರಂಭಿಸಲಾಯಿತು ಮತ್ತು ಯೋಜನೆಯು ಇಲ್ಲಿಯವರೆಗೆ ನಗರಕ್ಕೆ ಸೀಮಿತವಾಗಿತ್ತು. ರಾಜ್ಯದ ಪ್ರತಿ 10 ಪೊಲೀಸ್ ಠಾಣೆಗಳ ನಡುವೆ ಒಂದು ಜಿಮ್ ತೆರೆಯಲು ಒಂಬತ್ತು ವರ್ಷಗಳ ಹಿಂದೆ ಸರ್ಕಾರ ನಿರ್ಧರಿಸಿತ್ತು ಎಂದರು.

ಪೊಲೀಸ್ ಠಾಣೆಗಳಲ್ಲಿ ಶುದ್ಧ ಆಹಾರದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಯನ್ನು ಅಂದಿನ ಗೃಹ ಸಚಿವ ದಿವಂಗತ ಬಾಬುಲಾಲ್ ಗೌರ್ ಸಿದ್ಧಪಡಿಸಿದ್ದರು. ರಾಜ್ಯದ ಬಹುತೇಕ ಪೊಲೀಸರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಗೌರ್ ಹೇಳಿದ್ದರು. ಅವರ ಪ್ರಕಾರ, ಪೊಲೀಸ್ ಸಿಬ್ಬಂದಿ ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. ಆದ್ದರಿಂದ, ಅವರು ಫಿಟ್ ಆಗಿರಲು ನಿಯಮಿತ ವ್ಯಾಯಾಮದ ಅಗತ್ಯವಿದೆ ಎಂದಿದ್ದರು.

ಇದನ್ನೂ ಓದಿ:ವ್ಯಾಯಾಮ ಮಾಡಲು ಜಿಮ್​ಗೆ ಹೋಗಬೇಕು ಎಂದೇನಿಲ್ಲ; ಮನೆಯಲ್ಲೇ ಸೆಟ್​ ಮಾಡಿ ಅದೇ ರೀತಿಯ ವಾತಾವರಣ

ABOUT THE AUTHOR

...view details