ಕರ್ನಾಟಕ

karnataka

ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದ ಡೆಂಘೀ: ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ದೇಣಿಗೆ ನೀಡಿದ ರಾಜ್ಯಪಾಲ

By ETV Bharat Karnataka Team

Published : Oct 3, 2023, 12:49 PM IST

ಪಶ್ಚಿಮ ಬಂಗಾಳದ ಜನಸಾಮಾನ್ಯರ ಡೆಂಘೀ ಚಿಕಿತ್ಸಾ ವೆಚ್ಚವನ್ನು ಭರಿಸುವ ಉದ್ದೇಶಕ್ಕಾಗಿ ರಾಜ್ಯಪಾಲ ಸಿ.ವಿ. ಆನಂದ​ ಬೋಸ್ ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ.

Governor CV Ananda Bose donates one month salary to attend to rising Dengue cases in west bengal
ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದ ಡೆಂಗ್ಯೂ: ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ದೇಣಿಗೆ ನೀಡಿದ ರಾಜ್ಯಪಾಲ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಡೆಂಘೀ ಹಾವಳಿ ಹೆಚ್ಚಾಗಿದೆ. ಹೀಗಾಗಿ ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಮೌಲ್ಯಮಾಪನ ಮಾಡಿ ರಾಜ್ಯಪಾಲ ಸಿ.ವಿ. ಆನಂದ​ ಬೋಸ್ ಕೆಲ ದಿನಗಳ ಹಿಂದೆ ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದರು. ಇದೀಗ ಪಶ್ಚಿಮ ಬಂಗಾಳದಾದ್ಯಂತ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳನ್ನು ನಿಭಾಯಿಸಲು ಅವರು ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ.

ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ರಾಜ್ಯಪಾಲರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ ಎಂದು ರಾಜ್ಯಭವನದ ಮೂಲಗಳು ಹೇಳಿವೆ. ಹಣದ ಮೊತ್ತದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಪ್ರಸ್ತುತ ದೇಶದಲ್ಲಿ ರಾಜ್ಯಪಾಲರು ವಿವಿಧ ಭತ್ಯೆ ಮತ್ತು ಸೌಲಭ್ಯಗಳ ಜೊತೆಗೆ ಮಾಸಿಕ ಸಂಭಾವನೆಯಾಗಿ ಸುಮಾರು 3.5 ಲಕ್ಷ ರೂ. ಪಡೆಯುತ್ತಿದ್ದಾರೆ. ಇಷ್ಟೇ ಮೊತ್ತದ ಹಣವನ್ನು ರಾಜ್ಯಪಾಲ ಸಿ.ವಿ. ಆನಂದ​ ಬೋಸ್ ಅವರು ಸಿಎಂ ಪರಿಹಾರ ನಿಧಿಗೆ ಇದೇ ನೀಡಿದ್ದಾರೆ. ಈ ದೇಣಿಗೆಯನ್ನು ಪಶ್ಚಿಮ ಬಂಗಾಳದ ಸಾಮಾನ್ಯ ಜನರ ಡೆಂಘೀ ಚಿಕಿತ್ಸಾ ವೆಚ್ಚವನ್ನು ಭರಿಸುವ ಉದ್ದೇಶಕ್ಕಾಗಿ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಕಳೆದ ಕೆಲವು ತಿಂಗಳಲ್ಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್​ ಅವರು ಸತತವಾಗಿ ಅನೇಕ ನಗದು ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ದುರ್ಗಾ ಪೂಜೆಯ ನೆನಪಿಗಾಗಿ 108 ಜನರಿಗೆ 'ದುರ್ಗಾ ಭಾರತ ಸಮ್ಮಾನ್' ಎಂದು ಪ್ರಶಸ್ತಿ ಘೋಷಿಸಿದ್ದಾರೆ. ಇದಕ್ಕಾಗಿ ರಾಜಭವನವು ವಿವಿಧ ಕ್ಷೇತ್ರಗಳ ಗಣ್ಯರಿಂದ ಅರ್ಜಿಗಳ ಆಹ್ವಾನಿಸಲಾಗಿತ್ತು. ಪ್ರಶಸ್ತಿಗಾಗಿ ಸಮಾಜ ಸೇವಕರು ಹಾಗೂ ಅಥವಾ ಸಂಸ್ಥೆಗಳು ಸೆಪ್ಟೆಂಬರ್‌ ತಿಂಗಳೊಳಗೆ ಇಮೇಲ್ ಮೂಲಕ ಸಲ್ಲಿಸಲು ಸೂಚಿಸಲಾಗಿತ್ತು.

ಈ ಪ್ರಶಸ್ತಿಗಳನ್ನು ಒಂದು ಲಕ್ಷ ರೂ. ಮೊತ್ತದ ದುರ್ಗಾ ಭಾರತ ಪರಮ ಸಮ್ಮಾನ್, 50 ಸಾವಿರ ರೂ. ಮೊತ್ತದ ದುರ್ಗಾ ಭಾರತ್ ಸಮ್ಮಾನ್ ಹಾಗೂ 25 ಸಾವಿರ ರೂ. ಮೊತ್ತದ ದುರ್ಗಾ ಭಾರತ ಪ್ರಶಸ್ತಿ ಎಂದು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ರಾಜ್ಯಪಾಲರು ಈ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಶಸ್ತಿಗಳನ್ನು ನೀಡಲು ರಾಜ್ಯಪಾಲರಿಗೆ ಅವಕಾಶ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಜೊತೆಗೆ ಪ್ರಶಸ್ತಿಯ ಆರ್ಥಿಕ ಸಂಪನ್ಮೂಲಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ರಾಜ್ಯಪಾಲರು ಇಂತಹ ಪ್ರಶಸ್ತಿಗಳು ಅಥವಾ ಉಪಕ್ರಮಗಳ ಮೂಲಕ ಅಗತ್ಯ ಇರುವವರಿಗೆ ಹಣಕಾಸಿನ ನೆರವು ನೀಡಬಹುದು. ಇದರಲ್ಲಿ ರಾಜ್ಯ ಸರ್ಕಾರ ಅಥವಾ ರಾಜ್ಯ ಸಚಿವ ಸಂಪುಟದ ಅನುಮತಿ ಅಗತ್ಯವಿಲ್ಲ. ಬ್ರಿಟಿಷರ ಕಾಲದಿಂದಲೂ ಈ ಎಲ್ಲ ಕ್ಷೇತ್ರಗಳಲ್ಲಿ ಹಣ ವಿನಿಯೋಗಿಸಲು ರಾಜ್ಯಪಾಲರ ಬೊಕ್ಕಸದಲ್ಲಿ ಅಪಾರ ಪ್ರಮಾಣದ ಹಣವಿದೆ. ಇದನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರವನ್ನು ಅವಲಂಬಿಸುವ ಅಗತ್ಯವಿಲ್ಲ ಎಂದು ರಾಜಭವನದ ಮೂಲಗಳು ಹೇಳಿಕೊಂಡಿವೆ.

ಇದನ್ನೂ ಓದಿ:ಉಪಕುಲಪತಿಗಳ ರಾಜೀನಾಮೆ: ಪಶ್ಚಿಮಬಂಗಾಳ ಸರ್ಕಾರದ ವಿರುದ್ಧ ಹೋರಾಡಲು ರಾಜ್ಯಪಾಲರ ಪ್ರತಿಜ್ಞೆ

ABOUT THE AUTHOR

...view details