ಕರ್ನಾಟಕ

karnataka

ರಾಜ್ಯ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಆರ್​ಬಿಐನ ಮಾಜಿ ಗವರ್ನರ್ ವೆಂಕಟರಾಮನ್ ನಿಧನ

By ETV Bharat Karnataka Team

Published : Nov 18, 2023, 11:05 PM IST

1990-92ರ ಅವಧಿಯಲ್ಲಿ ಆರ್​ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದ ಎಸ್​.ವೆಂಕಟರಾಮನ್ ಅವರು ನಿಧನ ಹೊಂದಿದ್ದಾರೆ.

Former RBI Governor S Venkitaramanan passes away
ಆರ್​ಬಿಐನ ಮಾಜಿ ಗವರ್ನರ್ ವೆಂಕಟರಾಮನ್ ನಿಧನ

ಚೆನ್ನೈ (ತಮಿಳುನಾಡು): ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್​ಬಿಐ)ನ ಮಾಜಿ ಗವರ್ನರ್ ಎಸ್​.ವೆಂಕಟರಾಮನ್ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕರ್ನಾಟಕ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

ವೆಂಕಟರಾಮನ್ ಅವರು ಭಾರತೀಯ ಆಡಳಿತ ಸೇವೆ (ಐಎಎಸ್​)ಯ ಅಧಿಕಾರಿಯಾಗಿದ್ದರು. ಆರ್‌ಬಿಐ ಗವರ್ನರ್ ಹುದ್ದೆ ವಹಿಸಿಕೊಳ್ಳುವ ಮುನ್ನ ಅವರು ಹಣಕಾಸು ಕಾರ್ಯದರ್ಶಿಯಾಗಿ ಮತ್ತು ಬಳಿಕ ಕರ್ನಾಟಕ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 1990ರ ಡಿಸೆಂಬರ್​ನಿಂದ 1992ರ ಡಿಸೆಂಬರ್​ವರೆಗೆ ಆರ್‌ಬಿಐಯಲ್ಲಿ ವೆಂಕಟರಾಮನ್ ಸೇವೆ ಸಲ್ಲಿಸಿದ್ದರು.

ವೆಂಕಟರಾಮನ್ ಅವರ ನಿಧನದ ಬಗ್ಗೆ ಹಾಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಂತಾಪ ಸೂಚಿಸಿದ್ದಾರೆ. ಆರ್‌ಬಿಐನ ಮಾಜಿ ಗವರ್ನರ್ ಎಸ್.ವೆಂಕಟರಮಣನ್ ಅವರ ನಿಧನದ ಬಗ್ಗೆ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದ ಅವರು, ಸಾರ್ವಜನಿಕ ಸೇವಕರಾಗಿದ್ದರು. ಬಿಕ್ಕಟ್ಟಿನ ಅವಧಿಯಲ್ಲಿ ಅವರು ಅಪಾರ ಕೊಡುಗೆಗಳನ್ನು ನೀಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಶಕ್ತಿಕಾಂತ ದಾಸ್ ಪೋಸ್ಟ್​ ಮಾಡಿದ್ದಾರೆ.

ಮತ್ತೊಂದೆಡೆ, ಆರ್‌ಬಿಐ ಸಹ ತನ್ನ ವೆಬ್‌ಸೈಟ್‌ನಲ್ಲಿ ವೆಂಕಟರಾಮನ್ ನಿಧನದ ಬಗ್ಗೆ ಪ್ರಕಟಿಸಿದೆ. ವೆಂಕಟರಾಮನ್ ಅವರ ಅಧಿಕಾರಾವಧಿಯಲ್ಲಿ ದೇಶವು ಬಾಹ್ಯ ವಲಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಿತು. ಈ ಸಮಯದಲ್ಲಿ ಅವರ ಚಾಣಾಕ್ಷತದಿಂದ ಕಾರ್ಯ ನಿರ್ವಹಿಸಿದ್ದರು. ರೂಪಾಯಿ ಅಪಮೌಲ್ಯೀಕರಣಕ್ಕೆ ಒಳಗಾದ ಅವರ ಅವಧಿಯಲ್ಲಿ ಭಾರತವು ಐಎಂಎಫ್‌ನ ಸ್ಥಿರೀಕರಣ ಕಾರ್ಯಕ್ರಮ ಅಳವಡಿಸಿಕೊಂಡಿತ್ತು. ಜೊತೆಗೆ ಆರ್ಥಿಕ ಸುಧಾರಣೆಗಳ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು ಎಂದು ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪೋಸ್ಟ್​ ​ಮಾಡಿ, ಭಾರತದ ಅತ್ಯಂತ ಪ್ರತಿಭಾವಂತ ನಾಗರಿಕ ಸೇವಕರಲ್ಲಿ ಒಬ್ಬರಾದ, ವಿಶೇಷವಾಗಿ ಹಣಕಾಸು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದ ಎಸ್​.ವೆಂಕಟರಾಮನ್ ತಮ್ಮ 92ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. 1990-92ರ ಅವಧಿಯಲ್ಲಿ ನಮ್ಮ ಆರ್ಥಿಕ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ವೆಂಕಟರಾಮನ್ ಅವರು ಆರ್​ಬಿಐ ಗವರ್ನರ್ ಆಗಿದ್ದರು. ಇದಲ್ಲದೆ, ವೆಂಕಟರಮಣನ್ ಅವರು ಕೈಗಾರಿಕಾ ಅಭಿವೃದ್ಧಿ ಮತ್ತು ಇಂಧನ ವಲಯಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವೆಂಕಟರಾಮನ್ ಅವರು ಸಿ.ಸುಬ್ರಮಣ್ಯಂ ಅವರ ಪ್ರಮುಖ ಸಹಾಯಕರಾಗಿದ್ದರು. ಅವರು 60ರ ದಶಕದ ಮಧ್ಯಭಾಗದಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು ಮೂರು ದಶಕಗಳ ನಮ್ಮ ಒಡನಾಟದ ಬಗ್ಗೆ ನನಗೆ ಅನೇಕ ಅಚ್ಚುಮೆಚ್ಚಿನ ನೆನಪುಗಳಿವೆ. ಈ ಒಡನಾಟದಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ABOUT THE AUTHOR

...view details