ಕರ್ನಾಟಕ

karnataka

ಲೋಕಸಭಾ ಸ್ಪೀಕರ್ ಭೇಟಿ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

By

Published : Apr 4, 2023, 7:26 PM IST

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭೇಟಿಯಾದರು.

Former Prime Minister HD DeveGowda  Lok Sabha Speaker Om Birla
ದೇವೇಗೌಡರು "Furrows in a field : The unexplored life of H.D. Deve Gowda" ಪುಸ್ತಕದ ಪ್ರತಿಯನ್ನು ಓಂ ಬಿರ್ಲಾ ಅವರಿಗೆ ನೀಡಿದರು

ನವದೆಹಲಿ:ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿವಾಸದಲ್ಲಿ ಭೇಟಿ ಮಾಡಿದರು.

ದೇವೇಗೌಡರು "Furrows in a field : The unexplored life of H.D. Deve Gowda" ಪುಸ್ತಕದ ಪ್ರತಿಯನ್ನು ಓಂ ಬಿರ್ಲಾ ಅವರಿಗೆ ನೀಡಿದರು. ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಪ್ರಸ್ತುತತೆಯ ಹಲವಾರು ವಿಷಯಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ದೇವೇಗೌಡರು ಹೇಳಿದ್ದೇನು?:ಬರಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ, ತೃತೀಯ ರಂಗ ಮುಂತಾದ ವಿಷಯಗಳ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದರು. ಕಾಂಗ್ರೆಸ್ ಪಕ್ಷ ಮೊದಲಿಗೆ ತನ್ನ ಮನೆಯನ್ನು ಸರಿಯಾಗಿಟ್ಟುಕೊಳ್ಳಲಿ ಎಂದು ದೇವೇಗೌಡರು ಹೇಳಿದ್ದರು. ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಂವಾದದಲ್ಲಿ ದೇವೇಗೌಡರು ಹಲವಾರು ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದರು.

ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಮೈತ್ರಿಯ ಸಾಧ್ಯತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದರು. ಕಾಂಗ್ರೆಸ್ ಪಕ್ಷವೊಂದೇ ದೇಶದ ಏಕೈಕ ವಿರೋಧ ಪಕ್ಷವಲ್ಲ ಎಂದು ಅವರು ತಿಳಿಸಿದ್ದರು. ಕರ್ನಾಟಕದಾದ್ಯಂತ ನಮ್ಮ ಪಕ್ಷ (ಜೆಡಿಎಸ್​) ಉತ್ತಮ ಸಾಧನೆ ಮಾಡಲಿದೆ. ಎರಡು ರಾಷ್ಟ್ರೀಯ ಪಕ್ಷಗಳತ್ತ ಮಾತ್ರ ನೋಡುತ್ತಿರುವ ಬಹಳಷ್ಟು ಜನರಿಗೆ ಆಶ್ಚರ್ಯವಾಗಲಿದೆ. ನಾವು ವಿಭಜಕ ಅಜೆಂಡಾಕ್ಕಾಗಿ ಮತ ಕೇಳುತ್ತಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ಮತ್ತು ಅಭಿವೃದ್ಧಿ ದೃಷ್ಟಿಯ ಪಂಚರತ್ನ ಕಾರ್ಯಕ್ರಮದ ಹೆಸರಿನಲ್ಲಿ ನಾವು ಮತ ಕೇಳುತ್ತಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತೇವೆ. ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ನಮ್ಮ ನಾಯಕ ಎಚ್ ಡಿ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸವನ್ನು ಮುಗಿಸಿದ್ದಾರೆ. ಅವರಿಗೆ ಸಿಕ್ಕಿರುವ ಪ್ರತಿಕ್ರಿಯೆ ಅಗಾಧವಾಗಿದೆ. ನಮ್ಮ ಪಕ್ಷದ ಕಾರ್ಯತಂತ್ರವು ತುಂಬಾ ಸರಳವಾಗಿದೆ. ಅದೇನೆಂದರೆ- ಕಠಿಣ ಪರಿಶ್ರಮ ಮಾಡಿ ಮತ್ತು ಜನರೊಂದಿಗೆ ಪ್ರಾಮಾಣಿಕವಾಗಿರಿ, ಅವರನ್ನು ದೂಷಿಸಬೇಡಿ ಮತ್ತು ಅವರನ್ನು ವಿಭಜಿಸಬೇಡಿ ಎಂದು ಅವರು ಹೇಳಿದ್ದರು.

ನಾವು ಒಂದೇ ಪ್ರದೇಶಕ್ಕೆ ಸೀಮಿತ ಅನ್ನುವುದು ರಾಷ್ಟ್ರೀಯ ಪಕ್ಷಗಳ ಕುತಂತ್ರ- ಹೆಚ್​ ಡಿ ದೇವೇಗೌಡ.. ನಾವು ಒಂದೇ ಪ್ರದೇಶಕ್ಕೆ ಸೀಮಿತವಾಗಿದ್ದೇವೆ ಎಂಬುದು ರಾಷ್ಟ್ರೀಯ ಪಕ್ಷಗಳ ಕುತಂತ್ರದ ಪ್ರಚಾರವಾಗಿದೆ. ನಾವು ಯಾವಾಗಲೂ ರಾಜ್ಯಾದ್ಯಂತ ಮತ್ತು ಸಮುದಾಯಗಳಿಂದ ಶಾಸಕರನ್ನು ಹೊಂದಿದ್ದೇವೆ. ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯಾರಾದರೂ 1999ರಿಂದ ಶಾಸಕರು ಮತ್ತು ಕ್ಷೇತ್ರಗಳ ಪಟ್ಟಿಯನ್ನು ಪರಿಶೀಲಿಸಬೇಕು. ಹೌದು, ಮೈಸೂರು ಭಾಗವು ನಮಗೆ ಗರಿಷ್ಠ ಬೆಂಬಲ ನೀಡಿದೆ ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಯಶಸ್ವಿಯಾಗಲಿದ್ದೇವೆ. ಸಚಿವ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಹುದ್ದೆಗಳಲ್ಲಿದ್ದು, ನಾನು ಎಲ್ಲರ ಏಳಿಗೆಗಾಗಿ ಕೆಲಸ ಮಾಡಿದ್ದೇನೆ. ನಾನು ಎಂದಿಗೂ ಪ್ರದೇಶಗಳ ನಡುವೆ ಭೇದಭಾವ ಮಾಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಹರಡುತ್ತಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಸುಳ್ಳನ್ನು ಎದುರಿಸಲು ನಾನು ಎಂದಿಗೂ ದುಬಾರಿ ಪಿಆರ್ ಏಜೆನ್ಸಿಗಳನ್ನು ನೇಮಿಸಿಕೊಂಡಿಲ್ಲ. 60 ವರ್ಷಗಳಿಂದ ನನ್ನನ್ನು ಬೆಳೆಸಿದ ದೇವರಿಗೆ ಮತ್ತು ಜನರಿಗೆ ಸತ್ಯ ತಿಳಿದಿದೆ ಎಂದಿದ್ದರು.

ಇದನ್ನೂ ಓದಿ:ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ.. ಟಿಕೆಟ್​ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

ABOUT THE AUTHOR

...view details