ಕರ್ನಾಟಕ

karnataka

ನಕಲಿ ಜಾತಿ ಪ್ರಮಾಣಪತ್ರಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್​ಸಿ/ಎಸ್​ಟಿ ಯುವಕರಿಂದ ನಗ್ನ ಪ್ರತಿಭಟನಾ ಮೆರವಣಿಗೆ

By

Published : Jul 18, 2023, 8:15 PM IST

ಛತ್ತೀಸ್​ಗಢದ ರಾಯಪುರದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ವಿಚಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಯುವಕರು ನಗ್ನ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

fake caste certificates issue: SCST youths hold nude protest in Raipur
ನಕಲಿ ಜಾತಿ ಪ್ರಮಾಣಪತ್ರಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್​ಸಿ/ಎಸ್​ಟಿ ಯುವಕರಿಂದ ನಗ್ನ ಪ್ರತಿಭಟನಾ ಮೆರವಣಿಗೆ

ರಾಯಪುರ (ಚತ್ತೀಸ್​ಗಢ): ನಕಲಿ ಜಾತಿ ಪ್ರಮಾಣಪತ್ರಗಳ ಮೇಲೆ ಸರ್ಕಾರಿ ಉದ್ಯೋಗ ಪಡೆದು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್​ಸಿ-ಎಸ್​ಟಿ)ದ ಸುಮಾರು 50 ಯುವಕರು ನಗ್ನ ಪ್ರತಿಭಟನಾ ಮೆರವಣಿಗೆ ನಡೆಸಿರುವ ಘಟನೆ ಛತ್ತೀಸ್​ಗಢದ ರಾಜಧಾನಿ ರಾಯಪುರದಲ್ಲಿ ಮಂಗಳವಾರ ನಡೆದಿದೆ. ಸಂಪೂರ್ಣ ಬೆತ್ತಲಾಗಿ ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಯುವಕರು ಹೊರ ಹಾಕಿದ್ದಾರೆ.

ಜಾತಿ ಪ್ರಮಾಣ ಪತ್ರ ನೀಡಿಕೆ ಕುರಿತು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಯುವಕರು ಮುಖ್ಯ ರಸ್ತೆಗಳ ಮೂಲಕವೇ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೆಲವು ಯುವಕರು ಘೋಷಣಾ ಫಲಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಮತ್ತೆ ಕೆಲವರು ಅದೇ ಫಲಕಗಳಿಂದ ತಮ್ಮ ದೇಹವನ್ನು ಮುಚ್ಚಿಕೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಯುವಕರ ಗುಂಪು ಈ ರೀತಿಯಾಗಿ ನಡುರಸ್ತೆಯಲ್ಲಿ ಬೆತ್ತಲೆಯಾಗಿ ಪ್ರತಿಭಟನೆ ಹೋಗುತ್ತಿರುವುದನ್ನು ಕಂಡು ದಾರಿ ಮಧ್ಯೆಯಲ್ಲಿದ್ದ ಜನತೆ ಬೆಚ್ಚಿ ಬಿದ್ದಿದ್ದಾರೆ. ಪ್ರತಿಭಟನಾಕಾರ ಯುವಕರು ಘೋಷಣೆಗಳನ್ನು ಕೂಗುತ್ತಾ ವಿಧಾನಸೌಧದ ರಸ್ತೆಯಲ್ಲಿ ಸಾಗಿದ್ದು, ವಿಧಾನಸೌಧದ ಹೊರಗಡೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಎಲ್ಲರನ್ನೂ ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗ್ನ ಪ್ರತಿಭಟನಾ ಮೆರವಣಿಗೆಗೆ ಕಾರಣವೇನು?:ಪ್ರತಿಭಟನಾನಿರತ ಯುವಕರ ಪ್ರಕಾರ, ಛತ್ತೀಸ್​ಗಢ ರಾಜ್ಯ ರಚನೆಯಾದ ನಂತರ ಮೀಸಲಾತಿ ರಹಿತರಿಗೂ ಮೀಸಲಾತಿ ವರ್ಗದಲ್ಲಿ ಉದ್ಯೋಗ ದೊರೆಯುತ್ತಿದೆ. ಸಣ್ಣ ಹುದ್ದೆಯಿಂದ ಹಿಡಿದು ದೊಡ್ಡ ಹುದ್ದೆಯವರೆಗೂ ಇಂಥವರು ಬಹಳಷ್ಟಿದ್ದಾರೆ. ಈ ಕುರಿತ ದೂರಿನ ಆಧಾರದ ಮೇಲೆ ಸರ್ಕಾರವು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿತ್ತು.

ಈ ಸಮಿತಿಯು ನಕಲಿ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು. ಪ್ರಮುಖ ಹುದ್ದೆಗಳಿಂದ ಅಧಿಕಾರಿಗಳು ಮತ್ತು ನೌಕರರನ್ನು ತಕ್ಷಣವೇ ವಜಾಗೊಳಿಸಿ ಆದೇಶ ಹೊರಡಿಸುವಂತೆ ಶಿಫಾರಸು ಮಾಡಿತ್ತು. ಈ ತನಿಖೆ ಬಳಿಕ ನಕಲಿ ಜಾತಿ ಪ್ರಮಾಣಪತ್ರ ನೀಡಿ ಹಲವರಿಗೆ ಉದ್ಯೋಗ ನೀಡಿರುವುದು ಪತ್ತೆಯಾಗಿದ್ದರೂ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಯುವಕರು ಆರೋಪಿಸಿದ್ದಾರೆ.

2000ರಲ್ಲಿ ರಚನೆಯಾದ ಈ ಉನ್ನತ ಮಟ್ಟದ ತನಿಖಾ ಸಮಿತಿಯ ವರದಿ ಪ್ರಕಾರ, ಅಕ್ರಮ ನೇಮಕಕ್ಕೆ ಸಂಬಂಧಿಸಿದ ಒಟ್ಟು 758 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 659 ಪ್ರಕರಣಗಳ ತನಿಖೆ ನಡೆಸಲಾಗಿದ್ದು, 267 ಪ್ರಕರಣಗಳಲ್ಲಿ ಜಾತಿ ಪ್ರಮಾಣಪತ್ರ ನಕಲಿ ಎಂದು ಕಂಡು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2022ರ ಮೇ ತಿಂಗಳಲ್ಲೇ ಈ ಯುವಕರು 10 ದಿನಗಳ ಕಾಲ ಆಮರಣಾಂತ ಉಪವಾಸ ನಡೆಸಿದ್ದರು. ಆದರೆ, ನಕಲಿ ಜಾತಿ ಪ್ರಕರಣದಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಸಮಾಧಾನ ಹಾಗೂ ಆಕ್ರೋಶಗೊಂಡು ಇಂದು ಬೆತ್ತಲೆ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದರು.

ಇದನ್ನೂ ಓದಿ:SC/ST ಸಮುದಾಯದ ಕಟ್​ಆಫ್ ಅಂಕ ಕಡಿತಗೊಳಿಸುವಂತೆ ದೆಹಲಿ ವಿವಿಗೆ ಪತ್ರ ಬರೆದ ಎಎಪಿ ಸಚಿವರು

ABOUT THE AUTHOR

...view details