ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ದಿನದಿಂದಲೂ ರೋಚಕ ತಿರುವುಗಳೊಂದಿಗೆ ನಾಟಕೀಯ ಬೆಳವಣಿಗೆಗಳೂ ನಡೆಯುತ್ತಿದೆ. ಮಹಾವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಏಕನಾಥ ಶಿಂದೆ ಗುಂಪು ತಮ್ಮನ್ನು ಅಪಹರಿಸಿ ಸೂರತ್ಗೆ ಕರೆದೊಯ್ದರು ಎಂದು ಶಿವಸೇನೆಯ ಶಾಸಕ ನಿತಿನ್ ದೇಶಮುಖ್ ಆರೋಪಿಸಿದ್ದರು. ಆದರೀಗ ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್ ದೇಶಮುಖ್ ಇರುವ ಫೋಟೋಗಳು ಬಿಡುಗಡೆಯಾಗಿವೆ.
ಶಿವಸೇನೆಯ ಪ್ರಬಲ ನಾಯಕರಾದ ಏಕನಾಥ ಶಿಂದೆ ನೇತೃತ್ವದ ಬಂಡಾಯ ಗುಂಪು ಮುಂಬೈ ಬಿಟ್ಟು ಗುಜರಾತ್ನ ಸೂರತ್ಗೆ ಹೋಗಿ ಬೀಡುಬಿಟ್ಟಿತ್ತು. ಆದರೆ, 24 ಗಂಟೆಗಳಲ್ಲಿ ಈ ಗುಂಪಿನಲ್ಲಿದ್ದ ಶಾಸಕರಾದ ಕೈಲಾಸ್ ಪಾಟೀಲ್ ಮತ್ತು ನಿತಿನ್ ದೇಶಮುಖ್ ಮುಂಬೈಗೆ ಮರಳಿ ಬಂದಿದ್ದರು.
ನಂತರ ಮುಂಬೈನಲ್ಲಿ ಮಾತನಾಡಿದ್ದ ನಿತಿನ್ ದೇಶಮುಖ್, ನನ್ನನ್ನು ಸೋಮವಾರ-ಮಂಗಳವಾರ ನಡುವಿನ ರಾತ್ರಿ ಅಪಹರಿಸಿ ಸೂರತ್ನಲ್ಲಿರುವ ಬಂಡಾಯ ಶಾಸಕರ ಗುಂಪಿನ ಜೊತೆ ಸೇರಿಸಿದರು. ನಾನು ಹೋಟೆಲ್ನಿಂದ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಪ್ಪಿಸಿಕೊಂಡು ಹೊರಬಂದೆ ಎಂದು ಹೇಳಿಕೆ ಕೊಟ್ಟಿದ್ದರು.
ಇದನ್ನೂ ಓದಿ:'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್: ದಿಢೀರ್ ಸಭೆ ಕರೆದ ಕಾಂಗ್ರೆಸ್-ಎನ್ಸಿಪಿ
ನಿತಿನ್ ದೇಶಮುಖ್ ಈ ಹೇಳಿಕೆ ನೀಡಿದ ಮುಂದಿನ 24 ಗಂಟೆಯೊಳಗೆ ಏಕನಾಥ ಶಿಂದೆ ಗುಂಪು ನಿತಿನ್ ದೇಶಮುಖ್ ವಿರುದ್ಧ ಫೋಟೋ ಆಸ್ತ್ರ ಬಳಸಿದೆ. ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್ ದೇಶಮುಖ್ ವಿಮಾನ ಏರುವ ಹಾಗೂ ವಿಮಾನದಲ್ಲಿ ಕುಳಿತುಕೊಂಡಿರುವ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ ದೇಶಮುಖ್, ನನ್ನನ್ನು ಬಲವಂತವಾಗಿಯೇ ಸೂರತ್ಗೆ ಕರೆದುಕೊಂಡು ಹೋಗಲಾಗಿತ್ತು. ನಾನು ತಪ್ಪಿಸಿಕೊಂಡು ಓಡಿ ಬರಲು ಯತ್ನಿಸಿದಾಗ ಸೂರತ್ ಪೊಲೀಸರು ಹಿಡಿದುಕೊಂಡರು. ನನಗೆ ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ ವೈದ್ಯರು ನನಗೆ ಎದೆನೋವೆಂದು ಹೇಳಿದ್ದರು. ನಮ್ಮ ಮೇಲೆ 300-400 ಪೊಲೀಸರು ಕಣ್ಣಿಟ್ಟಿದ್ದರು ಎಂದು ಪುರುಚ್ಚರಿಸಿದ್ದಾರೆ.
ಅಲ್ಲದೇ, ನಾವು ಸೂರತ್ಗೆ ತಲುಪಿದ ತಕ್ಷಣವೇ ಸರ್ಕಾರದ ವಿರುದ್ಧ ಪಿತೂರಿ ನಡೆಯುತ್ತಿರುವುದು ನಮ್ಮ ಅರಿವಿಗೆ ಬಂತು. ಹೀಗಾಗಿ ನನಗಿಂತ ಮೊದಲು ಶಾಸಕ ಪ್ರಕಾಶ ಅಬಿತ್ಕರ್ ಬಂಡಾಯ ಗುಂಪಿನಿಂದ ಬೇರ್ಪಡಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:'ಏಕನಾಥ ಬಂಡಾಯ ಗುಂಪಿನಿಂದ ಅಪಹರಣ': ಮುಂಬೈಗೆ ಮರಳಿದ 'ಶಿವಸೈನಿಕರು' ಹೇಳಿದ್ದು ರೋಚಕ ಕಥೆ!