ಕರ್ನಾಟಕ

karnataka

ಛತ್ತೀಸ್‌ಗಢದ ಐಎಎಸ್ ಅಧಿಕಾರಿ ರಾನು ಸಾಹು ಬಂಧನ.. ಮೂರು ದಿನಗಳ ಕಾಲ ಇಡಿ ವಶಕ್ಕೆ

By

Published : Jul 22, 2023, 3:54 PM IST

ಛತ್ತೀಸ್‌ಗಢದ ಐಎಎಸ್ ಅಧಿಕಾರಿ ರಾನು ಸಾಹು ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ed-arrests-ias officer ranu-sahu-and-produced-in-special-court-raipur
ಛತ್ತೀಸ್‌ಗಢದ ಐಎಎಸ್ ಅಧಿಕಾರಿ ರಾನು ಸಾಹು ಬಂಧನ... ಮೂರು ದಿನಗಳ ಕಾಲ ಇಡಿ ವಶಕ್ಕೆ

ರಾಯಪುರ (ಛತ್ತೀಸ್‌ಗಢ):ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸ್‌ಗಢದ ಐಎಎಸ್ ಅಧಿಕಾರಿ ರಾನು ಸಾಹು ಅವರನ್ನು ಶನಿವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ. ಇಂದು ವಿಶೇಷ ನ್ಯಾಯಾಲಯವು ರಾನು ಸಾಹು ಅವರನ್ನು ಮೂರು ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿದೆ.

ಛತ್ತೀಸ್‌ಗಢದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಐಎಎಸ್ ಅಧಿಕಾರಿ ರಾನು ಸಾಹು ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ದಾಳಿ ಸಂದರ್ಭದಲ್ಲಿ ಅಕ್ರಮ ಕಲ್ಲಿದ್ದಲು ಸಾಗಣೆ, ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಹಾಗೂ ಸಾರ್ವಜನಿಕ ಆಹಾರ ವಿತರಣೆ (ಪಿಡಿಎಸ್)ಯಲ್ಲಿನ ಭಷ್ಟಾಚಾರ ಆರೋಪ ಪ್ರಕರಣದಲ್ಲಿ ರಾನು ಸಾಹು ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದರ ನಂತರ ಶನಿವಾರ ಇಡಿ ಅಧಿಕಾರಿಗಳು ರಾನು ಸಾಹು ಅವರನ್ನು ಬಂಧಿಸಿದ್ದಾರೆ. ಇಂದು ಇಡಿ ಅಧಿಕಾರಿಗಳ ತಂಡ ಬಂಧಿತ ಐಎಎಸ್​ ಅಧಿಕಾರಿಯನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ, ರಾನು ಸಾಹು ಅವರನ್ನು ಮೂರು ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಅಜಯ್ ಸಿಂಗ್ ರಜಪೂತ್ ಆದೇಶಿಸಿದ್ದಾರೆ.

80 ಜನ ಇಡಿ ಅಧಿಕಾರಿ ತಂಡದ ಕಾರ್ಯಾಚರಣೆ: ಶುಕ್ರವಾರ ಸುಮಾರು 80 ಜನರನ್ನು ಒಳಗೊಂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ರಾಯಪುರ, ಕೊರ್ಬಾ, ಅಂಬಿಕಾಪುರ, ಬಿಲಾಸ್‌ಪುರ, ರಾಜ್‌ನಂದಗಾಂವ್, ರಾಯ್‌ಘರ್‌ನಲ್ಲಿ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಉದ್ಯಮಿಗಳ ನಿವಾಸಗಳ ಮೇಲೆ ದಾಳಿ ಮಾಡಿದ್ದರು.

ರಾಜಧಾನಿ ರಾಯಪುರದಲ್ಲಿ ಇಡಿ ದಾಳಿ ನಡೆಸಿದ ಪ್ರಮುಖ ಸ್ಥಳಗಳ ಪೈಕಿ ರಾಜ್ಯ ಕಾಂಗ್ರೆಸ್ ಖಜಾಂಚಿ ರಾಮ್ ಗೋಪಾಲ್ ಅಗರ್ವಾಲ್ ಅವರ ಅನುಪಮ್ ನಿವಾಸ ಮತ್ತು ಸಿವಿಲ್ ಲೈನ್ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದರು. ಐಎಎಸ್ ಅಧಿಕಾರಿ ರಾನು ಸಾಹು, ಗುತ್ತಿಗೆದಾರ ಸುನಿಲ್ ರಾಮದಾಸ್ ಅಗರ್ವಾಲ್ ಅವರ ಜೋರಾ ಕಚೇರಿ ಮತ್ತು ಮನೆಗಳ ಮೇಲೆ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಇದಲ್ಲದೇ ಕೊರ್ಬಾದಲ್ಲಿರುವ ಮುನ್ಸಿಪಲ್ ಕಮಿಷನರ್ ಪ್ರಭಾಕರ ಪಾಂಡೆ ಅವರ ಅಧಿಕೃತ ನಿವಾಸ ಮತ್ತು ಕಚೇರಿಯಲ್ಲೇ ಇಡಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಐಎಎಸ್ ಅಧಿಕಾರಿ ಬಂಧನ, ಜಿಲ್ಲಾಧಿಕಾರಿ ಮನೆಗೆ ಇಡಿ ಸೀಲ್​

ರಾನು ಸಾಹು ಅವರ ದೇವೇಂದ್ರನಗರದಲ್ಲಿರುವ ಸರ್ಕಾರಿ ನಿವಾಸದಲ್ಲೂ ಇಡಿ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಇದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ರಾನು ಸಾಹು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಹಿಂದೆ ಸಹ ಇಡಿ ದಾಳಿಯಲ್ಲಿ ರಾನು ಸಾಹು ಹೆಸರು ಕೇಳಿ ಬಂದಿತ್ತು. ಆದರೆ, ಆಗ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ರಾನು ಸಾಹು ಪ್ರಸ್ತುತ ಕೃಷಿ ಇಲಾಖೆಯಲ್ಲಿ ನಿರ್ದೇಶಕರಾಗಿದ್ದಾರೆ. ಇದಕ್ಕೂ ಮೊದಲು ಅವರು ರಾಯಗಡ ಜಿಲ್ಲಾಧಿಕಾರಿಯಾಗಿದ್ದರು. ಛತ್ತೀಸ್‌ಗಢದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಎರಡನೇ ಐಎಎಸ್ ಅಧಿಕಾರಿ ರಾನು ಸಾಹು ಆಗಿದ್ದಾರೆ. ಅದಕ್ಕೂ ಮುನ್ನ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಬಂಧನಕ್ಕೊಳಗಾಗಿದ್ದು, ಸದ್ಯ ರಾಯಪುರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಿಲ್ಲಾಧಿಕಾರಿ ಮನೆ ಮೇಲೆ ಇಡಿ ದಾಳಿ

ABOUT THE AUTHOR

...view details