ಕರ್ನಾಟಕ

karnataka

ಹಿಂದಿ ಹೃದಯಭಾಗದ ರಾಜ್ಯಗಳನ್ನು 'ಗೋಮೂತ್ರ ರಾಜ್ಯಗಳು' ಎಂದು ಕರೆದ ಡಿಎಂಕೆ ಸಂಸದ!

By ETV Bharat Karnataka Team

Published : Dec 5, 2023, 11:03 PM IST

DMK MP calls Hindi heartland states as Gaumutra States: ಹಿಂದಿ ಹೃದಯಭಾಗದ ರಾಜ್ಯಗಳನ್ನು ''ಗೋಮೂತ್ರ ರಾಜ್ಯಗಳು'' ಎಂದು ಕರೆದು ತಮಿಳುನಾಡಿನ ಡಿಎಂಕೆ ಸಂಸದ ಡಿ.ಎನ್‌.ವಿ.ಸೆಂಥಿಲ್‌ಕುಮಾರ್ ವಿವಾದ ಸೃಷ್ಟಿಸಿದ್ದಾರೆ.

Etv Bharat
Etv Bharat

ನವದೆಹಲಿ:ತಮಿಳುನಾಡಿನ ಡಿಎಂಕೆ ಸಂಸದ ಡಿ.ಎನ್‌.ವಿ.ಸೆಂಥಿಲ್‌ಕುಮಾರ್ ಹೇಳಿಕೆಯೊಂದು ವಿವಾದ ಹುಟ್ಟುಹಾಕಿದೆ. ಹಿಂದಿ ಹೃದಯಭಾಗದ ರಾಜ್ಯಗಳನ್ನು ''ಗೋಮೂತ್ರ ರಾಜ್ಯಗಳು'' ಎಂದು ಹೇಳಿದ್ದು, ಇಲ್ಲಿ ಮಾತ್ರ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತದೆ ಮತ್ತು ದಕ್ಷಿಣ ಭಾರತದಲ್ಲಿ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸೆಂಥಿಲ್‌ಕುಮಾರ್ ಕ್ಷಮೆಯಾಚಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಎನ್‌ವಿ ಸೆಂಥಿಲ್‌ಕುಮಾರ್, ''ಹಿಂದಿ ರಾಜ್ಯಗಳು ಎಂದರೆ, ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳು ಎಂದು ಕರೆಯುವ ರಾಜ್ಯಗಳಲ್ಲಿ ಮಾತ್ರ ಚುನಾವಣೆಗಳನ್ನು ಗೆಲ್ಲುವುದು ಬಿಜೆಪಿಯ ಶಕ್ತಿಯಾಗಿದೆ ಎಂದು ಈ ದೇಶದ ಜನರು ಯೋಚಿಸಬೇಕು'' ಎಂದು ಹೇಳಿದ್ದಾರೆ. ಇತ್ತೀಚಿಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಡಿಎಂಕೆ ಸಂಸದ ಈ ಹೇಳಿಕೆ ನೀಡಿದ್ದಾರೆ.

ಮುಂದುವರೆದು, "ನೀವು (ಬಿಜೆಪಿ) ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಏನಾಗುತ್ತದೆ ಎಂಬುದರ ಎಲ್ಲ ಫಲಿತಾಂಶಗಳನ್ನು ನೀವು ನೋಡುತ್ತೀರಿ. ನಾವು ಅಲ್ಲಿ ತುಂಬಾ ಬಲಶಾಲಿಯಾಗಿದ್ದೇವೆ. ಈ ಎಲ್ಲ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವ ಆಯ್ಕೆಯನ್ನು ನೀವು ಹೊಂದಿದ್ದರೆ ನಾವು ಆಶ್ಚರ್ಯಪಡುವುದಿಲ್ಲ. ಇದರಿಂದ ನೀವು ಪರೋಕ್ಷ ಅಧಿಕಾರಕ್ಕೆ ಬರಬಹುದು. ಏಕೆಂದರೆ, ನೀವು ಅಲ್ಲಿಗೆ ಕಾಲಿಡುವ ಮತ್ತು ಎಲ್ಲ ದಕ್ಷಿಣದ ರಾಜ್ಯಗಳ ಮೇಲೆ ಹಿಡಿತ ಸಾಧಿಸುವ ಕನಸು ಕಾಣಲು ಸಹ ಸಾಧ್ಯವಿಲ್ಲ'' ಎಂದಿದ್ದಾರೆ.

ಸೆಂಥಿಲ್‌ಕುಮಾರ್ ಈ ಹೇಳಿಕೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ''ನಮ್ಮ ಉತ್ತರ ಭಾರತದ ಸ್ನೇಹಿತರನ್ನು ಪಾನಿಪುರಿ ಮಾರಾಟಗಾರರು, ಶೌಚಾಲಯ ಕಟ್ಟುವವರು ಇತ್ಯಾದಿ ಎಂದು ಕರೆದು... ಈಗ ಐ.ಎನ್.​ಡಿ.ಐ.ಎ. ಮೈತ್ರಿಕೂಟದ ಡಿಎಂಕೆ ಸಂಸದ, ಗೋಮೂತ್ರದ ಟೀಕೆ ಮಾಡಿದ್ದಾರೆ. ಡಿಎಂಕೆಯ ದುರಾಡಳಿತದಿಂದಾಗಿ ಚೆನ್ನೈ ಮುಳುಗುತ್ತಿದೆ. ಡಿಎಂಕೆಯ ದುರಹಂಕಾರವೇ ಅವರ ಪತನಕ್ಕೂ ಪ್ರಮುಖ ಕಾರಣವಾಗಲಿದೆ'' ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ, ''ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಇತ್ತೀಚಿನವರೆಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎಂಬುದನ್ನು ಡಿಎಂಕೆ ಸಂಸದರು ಬಹುಶಃ ಮರೆತಿದ್ದಾರೆ'' ಎಂದು ಅಣ್ಣಾಮಲೈ ಕುಟುಕಿದ್ದಾರೆ.

''ಹೃದಯ ರಾಜ್ಯಗಳ ಭಾರತೀಯರನ್ನು ಅವಮಾನಿಸಿದ ಈ ಡಿಎಂಕೆ ವ್ಯಕ್ತಿಯನ್ನು ಐ.ಎನ್.​ಡಿ.ಐ.ಎ. ಮೈತ್ರಿಕೂಟದ ನಾಯಕ ರಾಹುಲ್ ಗಾಂಧಿ ಒಪ್ಪುತ್ತಾರೆಯೇ?. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಎಷ್ಟು ದಿನ ಭಾರತೀಯರನ್ನು ಅವಮಾನಿಸುತ್ತವೆ?'' ಎಂದು ಮಾಜಿ ಸಚಿವ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ನನ್ನ ಹೇಳಿಕೆ ತಿರುಚಿ ದೇಶವೇ ಮಾತನಾಡುವ ಹಾಗೆ ಮಾಡಿತು: ಉದಯನಿಧಿ ಸ್ಟಾಲಿನ್​​

ABOUT THE AUTHOR

...view details