ಕರ್ನಾಟಕ

karnataka

ಬಡ್ತಿಗಾಗಿ ಸುದೀರ್ಘ ಹೋರಾಟ: ಸುಪ್ರೀಂಕೋರ್ಟ್​ನಲ್ಲಿ ಸಿಕ್ತು ಆರ್​ಬಿಐ ವಿಶೇಷಚೇತನ ನೌಕರನಿಗೆ ಪರಿಹಾರ

By

Published : Jul 22, 2023, 7:18 PM IST

ಆರ್​ಬಿಐನ ವಿಶೇಷಚೇತನ ನೌಕರರೊಬ್ಬರಿಗೆ ಬಡ್ತಿ ಪರಿಹಾರ ನೀಡಿದ ಸುಪ್ರೀಂಕೋರ್ಟ್​ ಆದೇಶಿಸಿದೆ. ಮಾನದಂಡಗಳು ಸಮನಾಗಿರುವಾಗ ಸಾಮಾಜಿಕ ನ್ಯಾಯವನ್ನು ಭದ್ರಪಡಿಸಲು ನ್ಯಾಯಾಲಯಗಳು ದುರ್ಬಲ ವರ್ಗ ಪರವಾಗಿ ಒಲವು ತೋರಬೇಕೆಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

courts-shouldnt-remain-mute-and-dumb-on-violations-by-employers-sc-grants-relief-to-rbi-employee-with-50-percent-disability
ಬಡ್ತಿಗಾಗಿ ಸುದೀರ್ಘ ಹೋರಾಟ: ಸುಪ್ರೀಂ ಕೋರ್ಟ್​ನಲ್ಲಿ ಸಿಕ್ತು ಆರ್​ಬಿಐ ವಿಶೇಷಚೇತನ ನೌಕರನಿಗೆ ಪರಿಹಾರ

ನವದೆಹಲಿ:ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ (ಆರ್​ಬಿಐ)ದ ವಿಶೇಷಚೇತನ ನೌಕರರೊಬ್ಬರು ಸುದೀರ್ಘ ಹೋರಾಟ ಮಾಡಿ ತಮ್ಮ ಸೇವಾ ಪ್ರಯೋಜನಗಳನ್ನು ಪಡೆಯವಲ್ಲಿ ಸಫಲರಾಗಿದ್ದಾರೆ. 2006ರಿಂದ ಅವರು ಬಯಸುತ್ತಿರುವ ಸೇವಾ ಪ್ರಯೋಜನವನ್ನು ಪಡೆಯಲು ದೇಶದ ಸರ್ವೋಚ್ಛ ನ್ಯಾಯಾಲಯ ಪರಿಹಾರ ನೀಡಿದೆ.

ಆರ್​ಬಿಐ ನೌಕರರಾದ ಎ.ಕೆ. ನಾಯರ್ ಎಂಬುವರು ಶೇ.50ರಷ್ಟು ಅಂಗವೈಕಲ್ಯದೊಂದಿಗೆ ಪೋಲಿಯೊ ನಂತರದ ಅಂಗಾಂಗಗಳ ಪಾರ್ಶ್ವವಾಯುದಿಂದ ಬಳುತ್ತಿದ್ದಾರೆ. ಒಂದೆರಡು ವರ್ಷಗಳಲ್ಲಿ ನಿವೃತ್ತರಾಗುತ್ತಿರುವ ನಾಯರ್, ಆರ್‌ಬಿಐನಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಬಡ್ತಿ ಪಡೆಯಲು ಸುಮಾರು ಎರಡು ದಶಕಗಳ ಕಾಲ ಕಠಿಣ ಹೋರಾಟ ನಡೆಸಿದ್ದಾರೆ.

ನಾಯರ್ ಬಡ್ತಿಗೆ ಅರ್ಹತೆ ಪಡೆಯಲು ಮೂರು ಅಂಕಗಳ ಕೊರತೆಯನ್ನು ಹೊಂದಿದ್ದರು. ಇತ್ತೀಚೆಗೆ ಸುಪ್ರೀಂಕೋರ್ಟ್,​ ಸಂವಿಧಾನದ 142ನೇ ವಿಧಿ ಅಡಿ ನಾಯರ್‌ ಅವರಿಗೆ ಬಡ್ತಿಯಲ್ಲಿ ಮೀಸಲಾತಿಯ ಪ್ರಯೋಜನವನ್ನು ವಿಸ್ತರಿಸಲು ಆರ್‌ಬಿಐಗೆ ನಿರ್ದೇಶಿಸಿದೆ. ಸಾಮಾಜಿಕ ನ್ಯಾಯವನ್ನು ಭದ್ರಪಡಿಸುವ ಸವಾಲನ್ನು ಎದುರಿಸಲು ದುರ್ಬಲ ವರ್ಗವು ಬಲಿಷ್ಠ ವರ್ಗದೊಂದಿಗೆ ಹೋರಾಟದಲ್ಲಿ ತೊಡಗಿರುವಾಗ ಮತ್ತು ಮಾನದಂಡಗಳು ಸಮನಾಗಿರುವಾಗ ನ್ಯಾಯವನ್ನು ಖಾತ್ರಿಪಡಿಸಲು ಕಾನೂನಿನ ನ್ಯಾಯಾಲಯಗಳು ದುರ್ಬಲ ವರ್ಗ ಪರವಾಗಿ ಒಲವು ತೋರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಏನಿದು ಪ್ರಕರಣ?: ಎ.ಕೆ. ನಾಯರ್ ಅವರು 1990ರ ಸೆಪ್ಟೆಂಬರ್​ 27ರಂದು ಕಾಯಿನ್/ನೋಟ್ ಎಕ್ಸಾಮಿನರ್, ಗ್ರೇಡ್-II/ಗುಮಾಸ್ತರಾಗಿ ವಿಶೇಷಚೇತನರಿಗೆ ಕಾಯ್ದಿರಿಸಿದ ಖಾಲಿ ಹುದ್ದೆಗೆ ಭರ್ತಿಯಾಗಿವ ಮೂಲಕ ಆರ್​ಬಿಐ ಸೇವೆಗೆ ಸೇರಿದ್ದರು. 2003ರ ಪ್ಯಾನಲ್ ವರ್ಷಕ್ಕಾಗಿ ಆಲ್ ಇಂಡಿಯಾ ಮೆರಿಟ್ ಪರೀಕ್ಷೆಯಲ್ಲಿ ಅವರು ಭಾಗವಹಿಸಿದ್ದರು. ಈ ಪರೀಕ್ಷೆಯನ್ನು 2004ರ ಏಪ್ರಿಲ್​ 26 ಮತ್ತು ಜುಲೈ 3ರ ನಡುವೆ ಆರ್​ಬಿಐ ನಡೆಸಿತ್ತು. ವರ್ಗ-I ಹುದ್ದೆಗೆ ತನ್ನ ಬಡ್ತಿಯನ್ನು ಪಡೆದುಕೊಳ್ಳಲು ಹಾಗೂ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ವಿಶೇಷಚೇತನರಿಗೆ ಒಂದೇ ಆಗಿದ್ದವು.

ಇತರ ಷರತ್ತುಗಳನ್ನು ಪೂರೈಸುವುದರ ಹೊರತಾಗಿ ಬಡ್ತಿಗೆ ಅರ್ಹತೆ ಪಡೆಯಲು ನಾಯರ್ 95 ಅಂಕಗಳನ್ನು ಪಡೆಯಬೇಕಾಗಿತ್ತು. 2004ರ ಅಕ್ಟೋಬರ್ 19ರಂದು ಪ್ರಟಕವಾದ ಫಲಿತಾಂಶದಲ್ಲಿ 92 ಅಂಕಗಳನ್ನು ಪಡೆದ ನಾಯರ್​ ಅರ್ಹತಾ ಅಂಕಗಳಿಗಿಂತ ಕೇವಲ ಮೂರು ಅಂಕಗಳನ್ನು ಪಡೆದಿದ್ದರು. ಹೀಗಾಗಿ ಅವರು 2004ರ ಡಿಸೆಂಬರ್ 18ರಂದು ಎಸ್​ಸಿ/ಎಸ್​ಟಿ ವರ್ಗದ ಅಭ್ಯರ್ಥಿಗಳಿಗೆ ಸಮಾನವಾಗಿ ತನಗೆ ಲಭ್ಯವಿರುವ ಸಡಿಲಿಕೆಯ ಪ್ರಯೋಜನವನ್ನು ಕೋರಿ ಮನವಿ ಸಲ್ಲಿಸಿದರು. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ವಿನಂತಿಸಿದ್ದರು. ಆದಾಗ್ಯೂ ಬಡ್ತಿ ಪರೀಕ್ಷೆಗಳಲ್ಲಿ ವಿಶೇಷಚೇತನರಿಗೆ ಗ್ರೇಸ್ ಅಂಕಗಳನ್ನು ವಿಸ್ತರಿಸಲು ಯಾವುದೇ ಅವಕಾಶವಿಲ್ಲ ಎಂದು ಆರ್‌ಬಿಐ ತಿಳಿಸಿತ್ತು.

ಹೀಗಾಗಿ ಎ.ಕೆ. ನಾಯರ್ ಕಾನೂನು ಹೋರಾಟ ಆರಂಭಿಸಿದ್ದರು. ಇದೀಗ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಬಡ್ತಿಯಲ್ಲಿ ಮೀಸಲಾತಿಯ ಪ್ರಯೋಜನವನ್ನು ವಿಸ್ತರಿಸಲು ಆರ್‌ಬಿಐಗೆ ನಿರ್ದೇಶಿಸುವ ಮೂಲಕ ನಾಯರ್ ಅವರಿಗೆ ಪರಿಹಾರ ಕಲ್ಪಿಸಿದೆ.

ದುರ್ಬಲರು ಮತ್ತು ಬಡ ವರ್ಗದವರಿಗೆ ನ್ಯಾಯ ದೊರಕಿಸಿಕೊಡುವುದರಿಂದ ಅವರನ್ನು ಸಮಾಜದ ಉಳಿದವರೊಂದಿಗೆ ಸಮಾನರನ್ನಾಗಿಸಬಹುದು ನ್ಯಾಯ ಪೀಠ ಹೇಳಿದೆ. ಇದೇ ವೇಳೆ, ನಾಯರ್ ಅವರ ರಿಟ್ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನಲ್ಲಿ 2006ರ ಸೆಪ್ಟೆಂಬರ್​ನಲ್ಲಿ ಸಲ್ಲಿಸಿದ ದಿನಾಂಕದಿಂದ ಕಾಲ್ಪನಿಕ ಬಡ್ತಿಯನ್ನು ನೀಡಬೇಕು. 2014ರ ಸೆಪ್ಟೆಂಬರ್ 15ರಂದು ಹೈಕೋರ್ಟ್‌ನ ಆದೇಶದ ಅನುಸರಣೆಗೆ ಕೊನೆಯ ದಿನಾಂಕದಿಂದ ನಿಜವಾದ ಬಡ್ತಿ ಕಲ್ಪಿಸಬೇಕು. ಆರ್‌ಬಿಐ ಮಾದರಿ ಉದ್ಯೋಗದಾತರಾಗಿ, ವಿಕಲಚೇತನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಈ ವಿಷಯದಲ್ಲಿ ತಿಳಿವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಎಂದು ನ್ಯಾಯ ಪೀಠ ಹೇಳಿದೆ.

ಇದನ್ನೂ ಓದಿ:ಭಿಕ್ಷಾಟನೆ ನಿಲ್ಲಿಸಿ ಡೆಲಿವರಿ ಬಾಯ್‌ ಆಗಿ ಬದುಕು ಕಟ್ಟಿಕೊಂಡ ವಿಶೇಷ ಚೇತನ ಯುವಕ

ABOUT THE AUTHOR

...view details