ಕರ್ನಾಟಕ

karnataka

ವಿಧಾನಸಭೆ ಚುನಾವಣೆಯಲ್ಲಿ ನಾವು ತಾತ್ಕಾಲಿಕ ಹಿನ್ನಡೆ ಅನುಭವಿಸಿದ್ದೇವೆ : ಕಾಂಗ್ರೆಸ್​ ಅಧ್ಯಕ್ಷ ಖರ್ಗೆ

By ETV Bharat Karnataka Team

Published : Dec 3, 2023, 7:03 PM IST

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ತೆಲಂಗಾಣ ಹೊರತು ಪಡಿಸಿ ಕಾಂಗ್ರೆಸ್​ ಇತರ ಮೂರು ರಾಜ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಸಂಬಂಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

Etv Bharat
Etv Bharat

ನವದೆಹಲಿ :ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ತೆಲಂಗಾಣ ಹೊರತುಪಡಿಸಿ ಇತರ ಮೂರು ರಾಜ್ಯಗಳಲ್ಲಿ ಸೋಲು ಕಂಡಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಪಕ್ಷ ಪ್ರದರ್ಶನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ, ಸಂಸದ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಹುಲ್​ ಗಾಂಧಿ, ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಜನಾದೇಶವನ್ನು ವಿನಯದಿಂದ ಸ್ವೀಕರಿಸುತ್ತೇವೆ. ನಮ್ಮ ಸಿದ್ಧಾಂತದ ಹೋರಾಟವನ್ನು ಮುಂದುವರಿಸುತ್ತೇವೆ. ತೆಲಂಗಾಣ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರಜಲ ತೆಲಂಗಾಣ ಮಾಡುವ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಚುನಾವಣೆಗೆ ಶ್ರಮಿಸಿದ ಹಾಗೂ ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ತೆಲಂಗಾಣ ಜನತೆಯಿಂದ ಜನಾದೇಶ ಪಡೆದಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಜೊತೆಗೆ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ಮೂರು ರಾಜ್ಯಗಳಲ್ಲಿ ನಮ್ಮ ಸಾಧನೆ ನಿರಾಶದಾಯಕವಾಗಿರುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಅದೇ ಸಂಕಲ್ಪದೊಂದಿಗೆ, ಮತ್ತೆ ಈ ಮೂರು ರಾಜ್ಯಗಳಲ್ಲಿ ನಮ್ಮನ್ನು ಪುನರ್​ ನಿರ್ಮಿಸಲು ಮತ್ತು ಪುನರುಜ್ಜೀವನಗೊಳಿಸುವ ನಮ್ಮ ಬಲವಾದ ಸಂಕಲ್ಪದೊಂದಿಗೆ ಮುನ್ನಡೆಯುತ್ತೇವೆ.

ಈ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಪ್ರಚಾರವನ್ನು ನಡೆಸಿತ್ತು. ನಮ್ಮ ಲಕ್ಷಾಂತರ ಕಾರ್ಯಕರ್ತರ ಶ್ರಮವನ್ನು ನಾನು ಗುರುತಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ. ನಾವು ನಮ್ಮ ತಾತ್ಕಾಲಿಕ ಹಿನ್ನಡೆಗಳನ್ನು ನಿವಾರಿಸಿಕೊಂಡು ಇಂಡಿಯಾ ಒಕ್ಕೂಟದ ಪಕ್ಷಗಳೊಂದಿಗೆ ಮುಂಬರುವ ಲೋಕಸಭೆ ಚುನಾವಣೆಗೆ ಸಂಪೂರ್ಣ ಸಿದ್ಧತೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ 64 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತರೂಢ ಬಿಆರ್​ಎಸ್​ 39 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ 9 ಸ್ಥಾನ ಮತ್ತು ಎಐಎಂಐಎಂ 7 ಸ್ಥಾನ, ಇತರರು 1 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ ತನ್ನ ಆಡಳಿತದ ಹಿಡಿತದಲ್ಲಿದ್ದ ರಾಜಸ್ಥಾನ ಹಾಗೂ ಛತ್ತೀಸ್​ಗಢ ರಾಜ್ಯಗಳನ್ನು ಈ ಚುನಾವಣೆಯಲ್ಲಿ ಕಳೆದುಕೊಂಡಿದೆ.

ಇದನ್ನೂ ಓದಿ :ತೆಲಂಗಾಣದಲ್ಲಿ ಬಿಆರ್​ಎಸ್​ ಹಿನ್ನಡೆ ಬಗ್ಗೆ ನಿರಾಶೆ; ಕಾಂಗ್ರೆಸ್​ಗೆ ಅಭಿನಂದಿಸಿದ ಕೆಟಿಆರ್​

ABOUT THE AUTHOR

...view details