ರಾಯಪುರ (ಛತ್ತೀಸ್ಗಡ):ಛತ್ತೀಸ್ಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 'ಸಂಕಲ್ಪ ಪತ್ರ' ಎಂದು ಹೆಸರಿನ ಪ್ರಣಾಳಿಕೆಯನ್ನು 'ಛತ್ತೀಸ್ಗಡಕ್ಕಾಗಿ ಮೋದಿಜೀ ಗ್ಯಾರಂಟಿ' ಎಂದು ಬಿಜೆಪಿ ಹೇಳಿದೆ. ರೈತರು, ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ದೊಡ್ಡ ಆಶ್ವಾಸನೆಗಳನ್ನು ನೀಡಲಾಗಿದೆ. 500 ರೂ.ಗೆ ಎಲ್ಪಿಸಿ ಸಿಲಿಂಡರ್ ಹಾಗೂ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂಪಾಯಿ ಆರ್ಥಿಕ ನೆರವು ನೀಡುವ ಬಗ್ಗೆ ಕಮಲ ಪಕ್ಷ ಘೋಷಣೆ ಮಾಡಿದೆ.
ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಛತ್ತೀಸ್ಗಢ ಪ್ರತ್ಯೇಕ ರಾಜ್ಯ ರಚಿಸುವುದಾಗಿ ಭರವಸೆ ನೀಡಿದ್ದರು. 2000ರಲ್ಲಿ ಯಾವುದೇ ವಿವಾದವಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ಈಡೇರಿತು. ರಾಜ್ಯದ ಜನತೆಗೆ ಬಿಜೆಪಿ ನೀಡಿದ ಭರವಸೆ ಈಡೇರಿಸಿದೆ. ಇಂದು ಛತ್ತೀಸ್ಗಢದ ಜನರಿಂದ ಲಕ್ಷ ಸಲಹೆಗಳನ್ನು ಆಹ್ವಾನಿಸಿ, ಅದರ ಪ್ರಕಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಇದು ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಕೇವಲ ಪ್ರಣಾಳಿಕೆಯಲ್ಲ, ನಮ್ಮ ಪಾಲಿಗೆ ಅದು ಸಂಕಲ್ಪ ಪತ್ರ ಎಂಬ ದಾಖಲೆ. ಛತ್ತೀಸ್ಗಢ ಪ್ರತ್ಯೇಕ ರಾಜ್ಯ ಸ್ಥಾಪನೆಯ ಉದ್ದೇಶವು ಅಭಿವೃದ್ಧಿಯಿಂದ ವಂಚಿತವಾಗಿರುವ ಪ್ರದೇಶವನ್ನು ಮುಂದೆ ತರುವುದಾಗಿತ್ತು. ರಾಜ್ಯದಲ್ಲಿ 15 ವರ್ಷಗಳ ಕಾಲ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವನ್ನಾಗಿ ಮಾಡಿದೆ ಎಂದು ಹೇಳಿದರು.
ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ನಡೆಸಿದೆ. ಭೂಪೇಶ್ ಬಘೇಲ್ ಆಡಳಿತದಲ್ಲಿ 2 ಸಾವಿರ ಕೋಟಿ ರೂ.ಗಳ ಮದ್ಯ ಹಗರಣ, ಪ್ರಧಾನಮಂತ್ರಿ ಅನ್ನ ಯೋಜನೆಯಲ್ಲಿ ಕೋಟ್ಯಂತರ ಹಗರಣ, ಗೋವಿನ ಸಗಣಿ ಹಗರಣ, 1,300 ಕೋಟಿ ಗೋಥಾನ್, 600 ಕೋಟಿ ಪಿಡಿಎಸ್ ಹಗರಣ, 5,000 ಕೋಟಿ ಮಹಾದೇವ್ ಆಪ್ ಹಗರಣ, ಪಿಎಸ್ ಸಿ ಹಗರಣ, 700 ಕೋಟಿ ಡಿಎಂಎಫ್ ಹಗರಣ ನಡೆಸಲಾಗಿದೆ. ಈ ಬಾರಿ ಜನತೆ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಛತ್ತೀಸ್ಗಢವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.
ಬಿಜೆಪಿಯ ಗ್ಯಾರಂಟಿಯ ಆಶ್ವಾಸನೆಗಳು:
- 3100 ರೂ.ಗೆ ಭತ್ತ ಖರೀದಿ
- ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂ. ಆರ್ಥಿಕ ನೆರವು
- 2 ವರ್ಷಗಳಲ್ಲಿ 1 ಲಕ್ಷ ಖಾಲಿ ಹುದ್ದೆಗಳ ಭರ್ತಿ
- 500 ರೂ.ಗೆ ಎಲ್ಪಿಸಿ ಸಿಲಿಂಡರ್ ವಿತರಣೆ
- 18 ಲಕ್ಷ ಹೊಸ ಮನೆಗಳ ನಿರ್ಮಾಣ
- ಭೂರಹಿತ ಕಾರ್ಮಿಕರಿಗೆ ವಾರ್ಷಿಕ 10000 ರೂ. ನೆರವು
- ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷೆಗಳು
- ಛತ್ತೀಸ್ಗಢ ಲೋಕಸೇವಾ ಆಯೋಗದ ಹಗರಣ ತನಿಖೆ
- ಇನ್ನೋವೇಶನ್ ಹಬ್ ಸ್ಥಾಪನೆ - 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
- 500 ಹೊಸ ಜನೌಷಧಿ ಕೇಂದ್ರಗಳ ಆರಂಭ
- ಡಿಬಿಟಿ ಸಹಾಯದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸೌಲಭ್ಯ
- ಛತ್ತೀಸ್ಗಢದ ಜನತೆಗೆ ರಾಮಲಾಲ ದರ್ಶನಕ್ಕೆ ಯೋಜನೆ