ಕರ್ನಾಟಕ

karnataka

ಛತ್ತೀಸ್​ಗಢ ವಿಪಕ್ಷ ನಾಯಕನಾಗಿ ಚರಣ್ ದಾಸ್ ಮಹಂತ್ ಆಯ್ಕೆ, ರಾಜ್ಯಾಧ್ಯಕ್ಷರಾಗಿ ದೀಪಕ್ ಬೈಜ್ ಮುಂದುವರಿಕೆ

By ETV Bharat Karnataka Team

Published : Dec 16, 2023, 10:19 PM IST

ಛತ್ತೀಸ್​ಗಢದಲ್ಲಿ ಸೋಲಿನ ಬಳಿಕ ಕಾಂಗ್ರೆಸ್​ ನಾಯಕತ್ವ ಬದಲಾವಣೆ ಮಾಡಿದೆ. ದೀಪಕ್ ಬೈಜ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದರೂ, ಚರಣ್ ದಾಸ್ ಮಹಂತ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಛತ್ತೀಸ್​ಗಢ ವಿಪಕ್ಷ ನಾಯಕನಾಗಿ ಚರಣ್ ದಾಸ್ ಮಹಂತ್
ಛತ್ತೀಸ್​ಗಢ ವಿಪಕ್ಷ ನಾಯಕನಾಗಿ ಚರಣ್ ದಾಸ್ ಮಹಂತ್

ರಾಯ್‌ಪುರ:ಛತ್ತೀಸ್​ಗಢದಲ್ಲಿ ಈಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡು ಸರ್ಕಾರ ಕಳೆದುಕೊಂಡ ಕಾಂಗ್ರೆಸ್​, ಮರು ಹೋರಾಟ ನಡೆಸಲು ತನ್ನ ನಾಯಕರನ್ನು ಬದಲಿಸುವ ಕಾರ್ಯಕ್ಕೆ ಕೈ ಹಾಕಿದೆ. ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಚರಣ್ ದಾಸ್ ಮಹಂತ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಶನಿವಾರ ನೇಮಕ ಮಾಡಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಶನಿವಾರ ಈ ಆದೇಶ ಹೊರಡಿಸಿದ್ದು, ರಾಜ್ಯದ ಸಿಎಲ್‌ಪಿ ನಾಯಕರಾಗಿ ಚರಣ್ ದಾಸ್ ಮಹಂತ್ ಅವರನ್ನು ತಕ್ಷಣಕ್ಕೆ ಜಾರಿಯಾಗುವಂತೆ ನೇಮಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ 35 ಕಾಂಗ್ರೆಸ್ ಶಾಸಕರು ಸಭೆ ಸೇರಿದ್ದರು. ಅಲ್ಲಿ ಶಾಸಕಾಂಗ ಪಕ್ಷ (ಸಿಎಲ್‌ಪಿ)ದ ನಾಯಕನನ್ನು ಆಯ್ಕೆ ಮಾಡುವ ಅಧಿಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುವ ಒಂದು ಸಾಲಿನ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ಇಂದು ಸಿಎಲ್‌ಪಿ ನಾಯಕರಾಗಿ ಚರಣ್ ದಾಸ್ ಮಹಂತ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.

ರಾಜ್ಯಾಧ್ಯಕ್ಷರ ಮುಂದುವರಿಕೆ:ಬುಡಕಟ್ಟು ನಾಯಕ, ಬಸ್ತಾರ್‌ನ ಹಾಲಿ ಸಂಸದ ದೀಪಕ್ ಬೈಜ್ ಅವರು ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮೊದಲು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡಿತು. ಇದರ ನಂತರ ಸೋಲಿನ ಹೊಣೆಯನ್ನು ಅವರ ಮೇಲೆ ಹೊರಿಸುವ ಪ್ರಯತ್ನಗಳ ಹೊರತಾಗಿಯೂ, ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವ ಅವಕಾಶ ಪಡೆದುಕೊಂಡಿದ್ದಾರೆ.

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ ಮಹಂತ್ ಅವರನ್ನು ಛತ್ತೀಸ್‌ಗಢ ವಿಧಾನಸಭೆಯ ಸ್ಪೀಕರ್ ಆಗಿ ನೇಮಿಸಲಾಗಿತ್ತು. ಇದರ ನಂತರ ಲೋಕಸಭೆಗೆ ಸ್ಪರ್ಧಿಸಿ ಕೊರ್ಬಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 15 ನೇ ಲೋಕಸಭೆ ಚುನಾವಣೆಯಲ್ಲಿ ಮಹಂತ್ ಅವರು ಛತ್ತೀಸ್‌ಗಢದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದರು. ಅವರು 1998 ರಲ್ಲಿ ಮೊದಲ ಬಾರಿಗೆ ಸಂಸತ್​ ಸದಸ್ಯರಾಗಿ ಆಯ್ಕೆಯಾದರು. ಬಳಿಕ 1999 ಮತ್ತು 2009 ರಲ್ಲಿ ಮರು ಆಯ್ಕೆಯಾದರು. ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಛತ್ತೀಸ್​ಗಢ ಕಾಂಗ್ರೆಸ್​ ರಾಜ್ಯಾಧ್ಯಕ್ಷ ದೀಪಕ್ ಬೈಜ್ ಅವರು 2019 ರಲ್ಲಿ ಛತ್ತೀಸ್‌ಗಢದ ಬಸ್ತಾರ್‌ನಿಂದ ಸಂಸತ್​ ಸದಸ್ಯರಾಗಿ ಆಯ್ಕೆಯಾದರು. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರಕೋಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶ ಚುನಾವಣೆಯಲ್ಲಿ ಹೀನಾಯ ಸೋಲು; ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಕಮಲನಾಥ್​ ರಾಜೀನಾಮೆ

ABOUT THE AUTHOR

...view details