ಕರ್ನಾಟಕ

karnataka

ಒಂಬತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ಒಂದು ವಿಪತ್ತು: ಉದಯನಿಧಿ ಸ್ಟಾಲಿನ್

By ETV Bharat Karnataka Team

Published : Dec 23, 2023, 9:37 PM IST

ಕೇಂದ್ರ ಹಣಕಾಸು ಸಚಿವರು ತಮಿಳುನಾಡಿನ ಪ್ರವಾಹವನ್ನು ವಿಪತ್ತು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

Etv Bharatbjp-nine-and-half-years-rule-was-a-disaster-says-tamilunadu-minister-udayanidhi-stalin
ಒಂಬತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತವು ಒಂದು ವಿಪತ್ತು: ಉದಯನಿಧಿ ಸ್ಟಾಲಿನ್

ಚೆನ್ನೈ(ತಮಿಳುನಾಡು): "ಕೇಂದ್ರದಲ್ಲಿನ ಒಂಬತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತವು ಒಂದು ವಿಪತ್ತು" ಎಂದು ಸಚಿವ ಉದಯನಿಧಿ ಸ್ಟಾಲಿನ್ ಟೀಕಿಸಿದ್ದಾರೆ. ಶನಿವಾರ ಪ್ರವಾಹ ಪೀಡಿತ ತಮಿಳುನಾಡಿಗೆ ಪರಿಹಾರ ಬಿಡುಗಡೆ ಸಂಬಂಧ ಮಾತನಾಡಿದ ಅವರು, "ನಾನು ಮತ್ತೊಮ್ಮೆ ಗೌರವಾನ್ವಿತ ಕೇಂದ್ರ ಹಣಕಾಸು ಸಚಿವರನ್ನು ಕೇಳುತ್ತೇನೆ, ನಾನು ನನಗಾಗಿ ಪರಿಹಾರವನ್ನು ಕೇಳುತ್ತಿಲ್ಲ. ನಾನು ಜನರಿಗೋಸ್ಕರ ಕೇಳುತ್ತಿದ್ದೇನೆ. ಏಕೆಂದರೆ ಜನರು ದೊಡ್ಡ ವಿಪತ್ತನ್ನು ಎದುರಿಸಿದ್ದಾರೆ. ಕೇಂದ್ರ ಹಣಕಾಸು ಸಚಿವರು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿನ ಪ್ರವಾಹವನ್ನು ವಿಪತ್ತು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ತಮಿಳುನಾಡಿನ ಜನರು ಇದನ್ನು ಅರಿತುಕೊಳ್ಳಬೇಕು" ಎಂದು ಹೇಳಿದರು.

"ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಆಗಮಿಸಿದ್ದ ಕೇಂದ್ರ ಸಮಿತಿ, ಪ್ರವಾಹದ ಸಮಯದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿತ್ತು. ಆದರೆ, ಕೇಂದ್ರ ಹಣಕಾಸು ಸಚಿವರು ರಾಜಕೀಯವಾಗಿ ಯೋಚಿಸುತ್ತಾರೆ. ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ತಿರುವಳ್ಳೂರು, ತೂತುಕುಡಿ ಮತ್ತು ತಿರುನೆಲ್ವೇಲಿಯ ಜನರು ಪ್ರವಾಹದಿಂದ ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಜಲಾವೃತಗೊಂಡಿರುವ ಕೆಲವು ಸ್ಥಳಗಳಲ್ಲಿ ನೀರು ಇನ್ನೂ ಕಡಿಮೆಯಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಮತ್ತೊಮ್ಮೆ ಗೌರವಯುತವಾಗಿ ಪರಿಹಾರ ನೀಡುವಂತೆ ಕೇಳುತ್ತೇನೆ"ಎಂದರು.

ಯಾರಪ್ಪನ ಮನೆಯ ಹಣ ಕೇಳುತ್ತಿಲ್ಲ ಎಂಬ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ನಾನು ಅಸಭ್ಯವಾಗಿ ಏನು ಹೇಳಿದೆ?, ತಂದೆ ಕೆಟ್ಟ ಪದವೇ?" ಎಂದು ಪ್ರಶ್ನಿಸಿದ್ದಾರೆ. ಹವಾಮಾನ ಇಲಾಖೆ ಸರಿಯಾದ ಮಾಹಿತಿ ನೀಡಿದ್ದರೂ ತಮಿಳುನಾಡು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ ಎಂಬ ಕೇಂದ್ರ ಹಣಕಾಸು ಸಚಿವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, "ನಾನು ಇದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಚೆನ್ನೈ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹವನ್ನು ತಡೆಗಟ್ಟಲು ತಮಿಳುನಾಡು ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ" ಎಂದು ಹೇಳಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?:ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು, "ಚುನಾಯಿತ ಪ್ರತಿನಿಧಿಗಳು ತಮಗೆ ಸಲ್ಲಬೇಕಾದ ಗೌರವಕ್ಕೆ ಅರ್ಹರು. ಉದಯನಿಧಿ ಸ್ಟಾಲಿನ್​ ಅವರು, ಸಾಹಿತ್ಯ ಕೌಶಲ್ಯಕ್ಕೆ ಹೆಸರುವಾಸಿಯಾದ ವ್ಯಕ್ತಿಯ ಮೊಮ್ಮಗ (ದಿವಂಗತ ಎಂ ಕರುಣಾನಿಧಿ). ಜವಾಬ್ದಾರಿಯುತ ಸ್ಥಾನವನ್ನು ಹೊಂದಿರುವ ವ್ಯಕ್ತಿ, ಮಾತನಾಡುವಾಗ ಪದಗಳ ಮೇಲೆ ನಿಯಂತ್ರಣವನ್ನು ಹೊಂದಿರಬೇಕು. ನನಗೆ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ 'ತಂದೆಯ ಆಸ್ತಿ' ಇತ್ಯಾದಿಗಳ ಬಗ್ಗೆ ಮಾತನಾಡಲು ರಾಜಕೀಯದಲ್ಲಿ ಅವಕಾಶವಿಲ್ಲ ಎಂದು ಅವರು ಅರಿತುಕೊಳ್ಳಬೇಕು" ಎಂದು ತಿರುಗೇಟು ನೀಡಿದ್ದರು.

ಇದನ್ನೂ ಓದಿ:6 ವರ್ಷಗಳ ಕಾಲ ಬರಿಗಾಲಲ್ಲೇ ಓಡಾಡಿದ ಮಧ್ಯಪ್ರದೇಶದ ಬಿಜೆಪಿ ನಾಯಕ: ಕಾರಣ ಏನು ಗೊತ್ತಾ?

ABOUT THE AUTHOR

...view details