ಕರ್ನಾಟಕ

karnataka

ರಾಜಸ್ಥಾನ ಚುನಾವಣೆ: ನೀತಿ ಸಂಹಿತೆ ಉಲ್ಲಂಘಣೆ ಆರೋಪ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

By ETV Bharat Karnataka Team

Published : Nov 25, 2023, 3:52 PM IST

BJP accuses Rahul Gandhi of Violating Guidelines: ರಾಜಸ್ಥಾನ ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರ 'ಎಕ್ಸ್​' ಖಾತೆ ಅಮಾನತುಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಒತ್ತಾಯಿಸಿದೆ.

BJP accuses Rahul Gandhi of violating poll guidelines in Rajasthan elections
ರಾಜಸ್ಥಾನ ಚುನಾವಣೆ: ನೀತಿ ಸಂಹಿತೆ ಉಲ್ಲಂಘಣೆ ಆರೋಪ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

ನವದೆಹಲಿ:ರಾಜಸ್ಥಾನ ವಿಧಾನಸಭೆಗೆ ಇಂದು ಚುನಾವಣೆ ನಡೆಯುತ್ತಿದೆ. ಮತದಾನದ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಹುಲ್​ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರ 'ಎಕ್ಸ್​' ಖಾತೆ ಅಮಾನತುಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು 199 ಸ್ಥಾನಗಳಿಗೆ ಮತದಾನ ಜರುಗುತ್ತಿದೆ. ಈ ಹಿನ್ನೆಲೆಯಲ್ಲೆ ರಾಹುಲ್​ ಗಾಂಧಿ ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್'​ (ಟ್ವಿಟರ್​) ಖಾತೆಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಆಯ್ಕೆ ಮಾಡಿ ಎಂದು ಪೋಸ್ಟ್​ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಈ ಪೋಸ್ಟ್​ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್​ ಮಾಜಿ ಅಧ್ಯಕ್ಷರಾದ ರಾಹುಲ್ ಚುನಾವಣೆಗೂ ಮುನ್ನ 48 ಗಂಟೆಗಳ ಕಾಲ ಯಾವುದೇ ರೀತಿಯ ಪ್ರಚಾರ ಮಾಡಬಾರದು ಎಂಬ ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ರಾಹುಲ್​ ಗಾಂಧಿ ವಿರುದ್ಧ ಚುನಾವಣಾ ಆಯೋಗದ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಮತ್ತು ಅದರ ಕಾರ್ಯನಿರ್ವಾಹಕರು ಖಾತೆಯನ್ನು ತಕ್ಷಣವೇ ಅಮಾನತುಗೊಳಿಸುವಂತೆ ನಿರ್ದೇಶಿಸಬಹುದು. ಮತದಾನ ಪೂರ್ವದಲ್ಲಿ 48 ಗಂಟೆಗಳ ಬಹಿರಂಗ ಪ್ರಚಾರ ನಿರ್ಬಂಧಿಸುವ ಮಾರ್ಗಸೂಚಿಗಳು ಉಲ್ಲಂಘಿಸದಂತೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಧಕ್ಕೆಯಾಗದಂತೆ ತಡೆಯಲು ತಕ್ಷಣವೇ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಲು ಸೂಚಿಸಬೇಕೆಂದು ಕಮಲ ಪಕ್ಷ ಆಗ್ರಹಿಸಿದೆ. ಅಲ್ಲದೇ, ಗಾಂಧಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಮತ್ತು ಕ್ರಿಮಿನಲ್ ಮೊಕದ್ದಮೆ ಪ್ರಾರಂಭಿಸಲು ಚುನಾವಣಾ ಆಯೋಗವು ರಾಜಸ್ಥಾನದ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದೂ ಒತ್ತಾಯಿಸಿ ಪತ್ರ ಬರೆಯಲಾಗಿದೆ.

ರಾಹುಲ್​ ಗಾಂಧಿ ಪೋಸ್ಟ್​ನಲ್ಲಿ ಏನಿದೆ?:ರಾಜಸ್ಥಾನದಲ್ಲಿ ಮತದಾನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡುವಂತೆ ಜನರಿಗೆ ಕರೆ ನೀಡಿ ಪೋಸ್ಟ್​ ಮಾಡಿರುವ ರಾಹುಲ್ ಗಾಂಧಿ, 'ರಾಜಸ್ಥಾನವು ಉಚಿತ ಚಿಕಿತ್ಸೆ ಆಯ್ಕೆ ಮಾಡುತ್ತದೆ. ರಾಜಸ್ಥಾನವು ಅಗ್ಗದ ಗ್ಯಾಸ್ ಸಿಲಿಂಡರ್ ಆಯ್ಕೆ ಮಾಡುತ್ತದೆ. ರಾಜಸ್ಥಾನವು ಬಡ್ಡಿ ರಹಿತ ಕೃಷಿ ಸಾಲವನ್ನು ಆಯ್ಕೆ ಮಾಡುತ್ತದೆ. ರಾಜಸ್ಥಾನವು ಇಂಗ್ಲಿಷ್ ಶಿಕ್ಷಣ ಆಯ್ಕೆ ಮಾಡುತ್ತದೆ. ರಾಜಸ್ಥಾನವು ಒಪಿಎಸ್ ಆಯ್ಕೆ ಮಾಡಲಿದೆ. ರಾಜಸ್ಥಾನವು ಜಾತಿ ಗಣತಿ ಆಯ್ಕೆ ಮಾಡುತ್ತದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ನಿಮ್ಮ ಮತ ಚಲಾಯಿಸಿ. ಜನರಿಗೆ ಅನುಕೂಲವಾಗುವ ಮತ್ತು ಭರವಸೆಯ ಕಾಂಗ್ರೆಸ್ ಸರ್ಕಾರವನ್ನು ಆರಿಸಿ' ಎಂದು ಹೇಳಿದ್ದಾರೆ.

ಇದನ್ನೂ ಓದಿ:ರಾಜಸ್ಥಾನ ಚುನಾವಣೆ: ಅಶೋಕ್ ಗೆಹ್ಲೋಟ್, ವಸುಂಧರಾ ರಾಜೆ ಸೇರಿ ಗಣ್ಯರಿಂದ ವೋಟಿಂಗ್, ಮಧ್ಯಾಹ್ನದವರೆಗೆ ಶೇ.40.27ರಷ್ಟು ಮತದಾನ

ABOUT THE AUTHOR

...view details