ಕರ್ನಾಟಕ

karnataka

ವಿಶೇಷ ಅಂಕಣ: ಕೊರೊನಾ ಮಹಾಮಾರಿಯಂತೆ, ಹಕ್ಕಿ ಜ್ವರದ ವಿರುದ್ದ ಹೋರಾಡುವ ಸಮಯ..

By

Published : Jan 15, 2021, 11:20 PM IST

ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿರುವ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೋಳಿಯಂತಹ ಪಕ್ಷಿಗಳನ್ನು ಕೊಲ್ಲುವುದು ಹಾಗೂ ಮೃತ ಪಕ್ಷಿಗಳನ್ನು ವೈಜ್ಞಾನಿಕವಾಗಿ ಹೂತುಹಾಕುವ ಮೂಲಕ ಹಕ್ಕಿ ಜ್ವರದ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ರಾಜ್ಯಗಳು ಕ್ರಮ ಕೈಗೊಳ್ಳುವುದನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಹಕ್ಕಿ ಜ್ವರದ ಸಂಭವನೀಯ ಅಪಾಯಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಖುದ್ದಾಗಿ ಎಲ್ಲಾ ಮುಖ್ಯಮಂತ್ರಿಗಳನ್ನು ಎಚ್ಚರಿಸಿದ್ದಾರೆ.

bird-flu-potential-dangers-steps-in-india
ಹಕ್ಕಿ ಜ್ವರದ ವಿರುದ್ದ ಹೋರಾಡುವ ಸಮಯ

ಹೈದರಾಬಾದ್​:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಈಗಾಗಲೇ ಹದಗೆಟ್ಟಿದೆ. ಹಕ್ಕಿ ಜ್ವರ ಅದನ್ನು ಇನ್ನಷ್ಟು ವಿಷಮಗೊಳಿಸುತ್ತಿದೆ. ಹಕ್ಕಿ ಜ್ವರ ದೇಶದ ಒಟ್ಟು 10 ರಾಜ್ಯಗಳಲ್ಲಿ ಈಗಾಗಲೇ ಸಾರ್ವಜನಿಕವಾಗಿ ಹರಡುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಡೀ ದೇಶ ತನ್ನ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸುತ್ತಿರುವ ಈ ಸಮಯದಲ್ಲಿ ಇದು ಮತ್ತೊಂದು ಆತಂಕಕಾರಿ ಬೆಳವಣಿಗೆಯಾಗಿ ಹೊರಹೊಮ್ಮಿದೆ.

ವಲಸೆ ಹಕ್ಕಿಗಳು ತಂದಿರುವ ಈ ಹಕ್ಕಿ ಜ್ವರದ ವೈರಸ್‌ನಿಂದಾಗಿ ರಾಜಸ್ಥಾನದಲ್ಲಿ ಕಾಗೆಗಳು ಮತ್ತು ಹದ್ದುಗಳು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದು, ಈ ಮೃತ ಹಕ್ಕಿಗಳ ದೇಹದಲ್ಲಿ ಹಕ್ಕಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ. ಈ ವಿಚಾರವನ್ನು ಭೋಪಾಲ್‌ನ ರಾಷ್ಟ್ರೀಯ ಪ್ರಾಣಿ ಪ್ರಯೋಗಾಲಯವು ಡಿಸೆಂಬರ್ 31, 2020 ರಂದು ದೃಢಪಡಿಸಿದೆ. ಇಂದೋರ್, ಗುಜರಾತ್, ದೆಹಲಿ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಗೆ ಯಾವುದೇ ಸಮಯದಲ್ಲಿ ಹಕ್ಕಿ ಜ್ವರವು ಹರಡುವ ಅಪಾಯ ತಲೆದೋರಿದೆ.

ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿರುವ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೋಳಿಯಂತಹ ಪಕ್ಷಿಗಳನ್ನು ಕೊಲ್ಲುವುದು ಹಾಗೂ ಮೃತ ಪಕ್ಷಿಗಳನ್ನು ವೈಜ್ಞಾನಿಕವಾಗಿ ಹೂತುಹಾಕುವ ಮೂಲಕ ಹಕ್ಕಿ ಜ್ವರದ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ರಾಜ್ಯಗಳು ಕ್ರಮ ಕೈಗೊಳ್ಳುವುದನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಹಕ್ಕಿ ಜ್ವರದ ಸಂಭವನೀಯ ಅಪಾಯಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಖುದ್ದಾಗಿ ಎಲ್ಲಾ ಮುಖ್ಯಮಂತ್ರಿಗಳನ್ನು ಎಚ್ಚರಿಸಿದ್ದಾರೆ.

ಇಲ್ಲಿಯವರೆಗೆ ಹಕ್ಕಿ ಜ್ವರ ಪತ್ತೆಯಾಗದ ರಾಜ್ಯಗಳು ಸಹ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ. ಹಕ್ಕಿ ಜ್ವರದಿಂದಾಗಿ ಈ ಹಿಂದೆ, 2006 ಮತ್ತು 2018ರ ನಡುವೆ ಸುಮಾರು 83 ಲಕ್ಷ ಪಕ್ಷಿಗಳನ್ನು ಕೊಂದು ಹೂಳಲಾಗಿತ್ತು. ಅದೇ ಮಾದರಿಯನ್ನು ಈ ಸಲವೂ ಅನುಸರಿಸಲು ಆಡಳಿತ ಯಂತ್ರ ಸಜ್ಜಾಗಿದೆ. ಅದಾಗ್ಯೂ ಕುಕ್ಕುಟ ಉದ್ಯಮ ಇದರಿಂದ ತೊಂದರೆಗೆ ಒಳಗಾಗದಂತೆ ಕಾಳಜಿ ವಹಿಸಬೇಕಿದೆ.

ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗೆ ಕೋವಿಡ್-19 ಭಾರೀ ಹೊಡೆತ ನೀಡಿದೆ. ಸಾಂಕ್ರಾಮಿಕ ರೋಗವು ಚಾಲ್ತಿಯಲ್ಲಿದ್ದಾಗ್ಯೂ ಕೃಷಿ ಕ್ಷೇತ್ರವೊಂದೇ ಅದಕ್ಕೆ ಅಳುಕದೇ ಮುನ್ನುಗ್ಗುತ್ತಿರುವ ಏಕೈಕ ವಲಯ. ಆದರೆ, ಹಕ್ಕಿ ಜ್ವರವು ಈ ವಲಯದ ಮೇಲೂ ಪರಿಣಾಮ ಬೀರುತ್ತದೆ. ಕೃಷಿ ಸಚಿವಾಲಯದ ಅಂದಾಜಿನ ಪ್ರಕಾರ ದೇಶದಲ್ಲಿ ಅಂದಾಜು 73 ಕೋಟಿ ಕುಕ್ಕುಟಗಳಿವೆ. ಮಾರಕ ವೈರಸ್‌ನಿಂದ ಅವುಗಳನ್ನು ರಕ್ಷಿಸುವುದು ಗ್ರಾಮೀಣ ಆರ್ಥಿಕತೆಗೆ ಬಹಳ ಅವಶ್ಯಕ.

ಈ ಹಿಂದೆ ಹಕ್ಕಿ ಜ್ವರದ ವೈರಸ್‌ ತನ್ನ 128 ರೂಪಾಂತರಗಳೊಂದಿಗೆ ಅನೇಕ ದೇಶಗಳಲ್ಲಿ ಭೀತಿಯನ್ನು ಹರಡಿತ್ತು. ಕಳೆದ ವರ್ಷ ಡಿಸೆಂಬರ್ 4 ಮತ್ತು ಡಿಸೆಂಬರ್ 24ರ ನಡುವೆ ಒಟ್ಟು 14 ದೇಶಗಳ 74 ಸ್ಥಳಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತು ಎಂದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೇಳಿದೆ. ಹಕ್ಕಿ ಜ್ವರವು ಮನುಷ್ಯರಿಗೆ ಸೋಂಕು ತಗುಲಿಸದಿದ್ದರೂ, ಎಚ್5 ಎನ್1 ರೂಪಾಂತರವು ಮಾನವರಲ್ಲಿ ಸಾಂಕ್ರಾಮಿಕ ಕಾಯಿಲೆಯಾಗಿ ರೂಪಾಂತರಗೊಳ್ಳುವಂಥದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹಕ್ಕಿ ಜ್ವರದ ವಿರುದ್ಧದ ಹೋರಾಟದ ಅಂಗವಾಗಿ, ಸತ್ತ ಕೋಳಿ ಮತ್ತು ಇತರ ಸೋಂಕಿತ ಪಕ್ಷಿಗಳನ್ನು ಕೈಗವಸುಗಳನ್ನು ಧರಿಸದೇ ಬರಿ ಕೈಗಳಿಂದ ಮುಟ್ಟಬಾರದು. ಒಂದು ವೇಳೆ ಪಕ್ಷಿಗಳು ನಿಗೂಢ ಕಾರಣಗಳಿಂದ ಸಾಯುತ್ತಿದ್ದರೆ ಸರಕಾರಿ ಯಂತ್ರವನ್ನು ತಕ್ಷಣವೇ ಜಾಗೃತಗೊಳಿಸಬೇಕು. ರೋಗ ಹರಡುವುದನ್ನು ಪ್ರತಿಬಂಧಿಸಬೇಕೆಂದರೆ ಅಂತಹ ಮುನ್ನೆಚ್ಚರಿಕೆಗಳ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸಬೇಕು. ಹಕ್ಕಿ ಜ್ವರದ ವೈರಸ್‌ ನಿಯಂತ್ರಿಸಲು ಹಾಗೂ ನಿರ್ಮೂಲನೆ ಮಾಡಲು ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರವು ಒತ್ತು ಕೊಟ್ಟು ಹೇಳುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ – ವರ್ಲ್ಡ್‌ ಹೆಲ್ತ್‌ ಆರ್ಗನೈಜೇಶನ್‌) ಮಾಹಿತಿಯ ಪ್ರಕಾರ, 2003 ರಿಂದ ಇಲ್ಲಿಯವರೆಗೆ ಒಟ್ಟು 17 ದೇಶಗಳಲ್ಲಿ 862 ವ್ಯಕ್ತಿಗಳು ಹಕ್ಕಿ ಜ್ವರ ಸೋಂಕಿನಿಂದ ಬಾಧಿತರಾಗಿದ್ದಾರೆ. ಈ ರೀತಿ ಸೋಂಕಿತರಾದವರ ಪೈಕಿ 455 ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕೋವಿಡ್-19 ಜಾಗೃತಿ ಕಾರ್ಯಕ್ರಮಗಳ ಜೊತೆಜೊತೆಗೇ ಹಕ್ಕಿ ಜ್ವರ ಕುರಿತು ಸಹ ರಾಜ್ಯ ಸರ್ಕಾರಗಳು ಜಾಗೃತಿ ಮೂಡಿಸಬೇಕು. ಹಾಗೆ ಮಾಡುವ ಮೂಲಕ ರೂಪಾಂತರಿತ ವೈರಸ್‌ಗಳಿಂದ ಜನರ ಜೀವನವನ್ನು ಅವು ಉಳಿಸಬಹುದು ಹಾಗೂ ಬೃಹತ್‌ ರೂ. 80,000 ಕೋಟಿ ಮೊತ್ತದ ವಹಿವಾಟನ್ನು ಉಳ್ಳ ಕೋಳಿ ಕ್ಷೇತ್ರವನ್ನು ರಕ್ಷಿಸಬಹುದು.

ಕೋಳಿ ಮಾಂಸದ ಸೇವನೆಯಿಂದ ಕೋವಿಡ್-19 ಹರಡುತ್ತಿದೆ ಎಂದು ಈ ಹಿಂದೆ ವದಂತಿಗಳು ಹಬ್ಬಿದ್ದವು. ಇದರಿಂದಾಗಿ ರೂ.7,500 ಕೋಟಿ ನಷ್ಟ ಉಂಟಾಗಿದ್ದು ಕುಕ್ಕುಟ ಉದ್ಯಮವು ಆ ನಷ್ಟದಿಂದ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. 70 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು ಉಷ್ಣತೆಯಲ್ಲಿ ಬೇಯಿಸಿದ ಭಾರತೀಯ ಭಕ್ಷ್ಯಗಳಲ್ಲಿ ವೈರಸ್‌ ಜೀವಂತವಾಗಿರಲು ಸಾಧ್ಯವಿಲ್ಲ ಎಂಬ ಅರಿವನ್ನು ಸಹ ಗ್ರಾಹಕರಲ್ಲಿ ಹರಡಬೇಕಿದೆ.

ಮಾಂಸಾಹಾರಿ ಸೇವನೆಯಲ್ಲಿ ಸುರಕ್ಷಿತ ಅಭ್ಯಾಸಗಳನ್ನು ಅನುಸರಿಸುವುದರಿಂದ ಅಗತ್ಯ ರೋಗ ನಿರೋಧಕ ಶಕ್ತಿಯನ್ನು ಗಳಿಸಬಹುದು. ಹಾಗೆ ತಮ್ಮನ್ನು ತಾವು ಸನ್ನದ್ಧಗೊಳಿಸುವ ಮೂಲಕ ಜನರು ಹಕ್ಕಿ ಜ್ವರ ನಿರ್ಮೂಲನೆಯಲ್ಲಿ ಭಾಗವಹಿಸಬೇಕಿದೆ.

ABOUT THE AUTHOR

...view details