ಮುಂಬೈ:ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವ ಶಿವಸೇನೆ ಪರ್ಯಾಯ ಸರ್ಕಾರಕ್ಕೆ ಕಸರತ್ತು ನಡೆಸಿದೆ. ಈ ನಡುವೆ, ಎನ್ಸಿಪಿ ಹಾಗೂ ಕಾಂಗ್ರೆಸ್ ತಾವು ಪ್ರತಿಪಕ್ಷದಲ್ಲೇ ಕೂಡುತ್ತೇವೆ ಎಂದು ಸ್ಪಷ್ಟಪಡಿಸಿವೆ.
ಆದಾಗ್ಯೂ ಎನ್ಸಿಪಿ ಸದಸ್ಯರೊಬ್ಬರು ಪರೋಕ್ಷವಾಗಿ ಶಿವಸೇನೆಯೊಂದಿಗೆ ಮೈತ್ರಿ ಸುಳಿವು ನೀಡಿದ್ದಾರೆ. ಈ ಮಧ್ಯೆ, ಬಿಜೆಪಿ ಮತ್ತೊಮ್ಮೆ ಶಿವಸೇನೆ ಜೊತೆ ಮಾತುಕತೆ ಸಿದ್ಧ ಎಂದು ಘೋಷಿಸಿದೆ.
ಮಾತುಕತೆಗೆ ಬಾಗಿಲು ಸದಾ ತೆರೆದಿರುತ್ತೆ ಎಂದು ಶಿವಸೇನೆಗೆ ಆಹ್ವಾನ ನೀಡಿರುವುದಾಗಿ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲ ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿರುವ ಬಿಜೆಪಿ ನಾಯಕರು, ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ನೀಡುವ ಬಗ್ಗೆ ಚರ್ಚೆ ಸಾಧ್ಯವಿಲ್ಲ. ಇದರಲ್ಲಿ ಯಾವುದೇ ರಾಜಿಯೂ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಆದರೆ, ಸಚಿವ ಸ್ಥಾನದ ಹಂಚಿಕೆ ಬಗ್ಗೆ ಸಂಪೂರ್ಣ ಮಾತುಕತೆಗೆ ತಾವು ಸಿದ್ದ ಎಂದು ಹೇಳಿದ್ದಾರೆ.
ಇನ್ನೊಂದಡೆ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನ ಶೀವಸೇನಾ ನಾಯಕ ಸಂಜಯ್ ರಾವುತ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಮಾತುಕತೆ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.