ಕರ್ನಾಟಕ

karnataka

ಕೃಷಿ, ಚರಕ ಮತ್ತು ಗ್ರಾಮ ಸ್ವರಾಜ್ಯ; ಬಾಪೂಜಿ ವಿಚಾರಧಾರೆ

By

Published : Oct 2, 2020, 5:33 PM IST

ಆಧುನಿಕ ಜೀವನಶೈಲಿ ಮತ್ತು ಕೆಲಸದ ಸಂಸ್ಕೃತಿಯನ್ನು ಒಪ್ಪದ ಗಾಂಧೀಜಿ ಕೃಷಿ, ಚರಕ ಮತ್ತು ಗ್ರಾಮ ಸ್ವರಾಜ್ಯಗಳೇ ಉತ್ತಮ ಜೀವನಕ್ಕೆ ಅಡಿಪಾಯ ಎಂದು ಹೇಳುತ್ತಿದ್ದರು.

Gandhiji's views on Indian Agriculture and Farmers
Gandhiji's views on Indian Agriculture and Farmers

ಭಾರತದ ಕೃಷಿ ಕ್ಷೇತ್ರ ಹಾಗೂ ರೈತರ ಬಗ್ಗೆ ಮಹಾತ್ಮ ಗಾಂಧೀಜಿಯವರ ನಿಲುವು ಅತ್ಯಂತ ಸ್ಪಷ್ಟವಾಗಿತ್ತು. ಇಡೀ ಭಾರತ ದೇಶವೇ ರೈತನ ಗುಡಿಸಲಿನಲ್ಲಿದೆ ಎಂದು ಅವರು ಹೇಳುತ್ತಿದ್ದರು. ಭಾರತದ ಕೃಷಿ ಹಾಗೂ ರೈತಾಪಿ ವರ್ಗದ ಬಗ್ಗೆ ಗಾಂಧೀಜಿಯವರ ವಿಚಾರಧಾರೆ ಏನಿದ್ದವು ಎಂಬುದನ್ನು ಸ್ಥೂಲವಾಗಿ ನೋಡೋಣ.

ಕೃಷಿ ಭೂಮಿಯು ಓರ್ವ ವ್ಯಕ್ತಿ ಅಥವಾ ಒಂದು ಸರ್ಕಾರದ ಒಡೆತನದಲ್ಲಿರಬಾರದು. ಕೃಷಿ ಭೂಮಿಯು ಸ್ಥಳೀಯ ಜನತೆಯ ಸಮುದಾಯದ ಸಹಭಾಗಿತ್ವದಲ್ಲಿರಬೇಕು. ಕೃಷಿ ಭೂಮಿಯು ಏಕಸ್ವಾಮ್ಯತೆ ಅಥವಾ ವ್ಯಕ್ತಿ ಸ್ವಾಮ್ಯತೆಯನ್ನು ಹೊಂದಿರಕೂಡದು. ಓರ್ವ ರೈತನು ತಾನು ಹಾಗೂ ತನ್ನ ಕುಟುಂಬಸ್ಥರು ಸೇರಿಕೊಂಡು ಉತ್ತುವಷ್ಟು ಭೂಮಿಯನ್ನು ಹೊಂದಿರಬೇಕೆಂದು ಪ್ರತಿಪಾದಿಸಿದ್ದರು.

ಭಾರತವು ಕೃಷಿಕನ ಗುಡಿಸಲಿನಲ್ಲಿದೆ. ಈ ದೇಶದ ನೇಕಾರನ ಕೌಶಲದಿಂದ ಭಾರತ ದೇಶವು ವಿಶ್ವಮಾನ್ಯವಾಗಿದೆ. ಹೀಗಾಗಿ ನಾನೊಬ್ಬ ರೈತ ಹಾಗೂ ನೇಕಾರ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಗಾಂಧೀಜಿ ಬರೆದಿದ್ದಾರೆ.

ಯಾವುದೇ ರೈತನಾದರೂ ಮೊದಲಿಗೆ ತನ್ನ ಅಗತ್ಯಗಳನ್ನು ಪೂರೈಸುವಷ್ಟು ಬೆಳೆ ಬೆಳೆದುಕೊಳ್ಳುವುದರತ್ತ ಗಮನಹರಿಸಬೇಕು. ಹೀಗೆ ಮಾಡಿದಲ್ಲಿ ಮಾರುಕಟ್ಟೆ ಕುಸಿತವಾದಾಗಲೂ ಆತನಿಗೆ ಅಷ್ಟೊಂದು ನಷ್ಟ ಸಂಭವಿಸುವುದಿಲ್ಲ ಎಂದು ಗಾಂಧೀಜಿ ನಂಬಿದ್ದರು.

ಆಧುನಿಕ ಜೀವನಶೈಲಿ ಮತ್ತು ಕೆಲಸದ ಸಂಸ್ಕೃತಿಯನ್ನು ಒಪ್ಪದ ಗಾಂಧೀಜಿ ಕೃಷಿ, ಚರಕ ಮತ್ತು ಗ್ರಾಮ ಸ್ವರಾಜ್ಯಗಳೇ ಉತ್ತಮ ಜೀವನಕ್ಕೆ ಅಡಿಪಾಯ ಎಂದು ಹೇಳುತ್ತಿದ್ದರು.

ನಮ್ಮ ರೈತರು ಯಾವಾಗಲೂ ಸಾವಯವ ಕೃಷಿಯನ್ನೇ ಮಾಡಬೇಕು. ರೈತನೊಬ್ಬ ತನ್ನ ಜೀವನಕ್ಕೆ ಬೇಕಾಗುವಷ್ಟು ಬೆಳೆ ಬೆಳೆದು ಗೌರವದ ಜೀವನಕ್ಕೆ ಸಾಕಾಗುವಷ್ಟು ಭೂಮಿಯನ್ನು ಹೊಂದಿರಬೇಕೆಂಬುದು ಬಾಪೂಜಿಯ ನಿಲುವಾಗಿತ್ತು.

ಕೃಷಿ ಕಾರ್ಯದಲ್ಲಿ ಬಳಸುವ ವಸ್ತುಗಳು ಕಾರ್ಮಿಕ ಮೂಲದಿಂದ ಬಂದಂಥವಾಗಿರಬೇಕು, ಕೃಷಿ ಕಾರ್ಯಕ್ಕೆ ಸೂಕ್ತವಾಗಿರಬೇಕು ಹಾಗೂ ಪರಿಸರ ಸ್ನೇಹಿಯಾಗಿರಬೇಕು ಎಂದು ಅವರು ಹೇಳುತ್ತಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶದಲ್ಲಿ ಬಹುದೊಡ್ಡ ಕೃಷಿ ಸುಧಾರಣಾ ಕ್ರಾಂತಿಯನ್ನು ಮಾಡಬೇಕೆಂಬುದು ಬಾಪೂಜಿಯ ಕನಸಾಗಿತ್ತು. ಹೀಗಾಗಿಯೇ ಅವರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕೃಷಿಕರ, ಭೂರಹಿತರ ಪರವಾಗಿ ಹಾಗೂ ಜಮೀನ್ದಾರರ ವಿರುದ್ಧವಾಗಿ ಯಾವುದೇ ಹೋರಾಟಕ್ಕೆ ಕರೆ ಕೊಟ್ಟಿರಲಿಲ್ಲ. ಒಂದು ಬಾರಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭೂರಹಿತ ಕೃಷಿಕರನ್ನು ಸಂಘಟಿಸಿ ಅವರನ್ನು ಸಬಲೀಕರಣಗೊಳಿಸುವ ವಿಚಾರ ಗಾಂಧೀಜಿಯವರದಾಗಿತ್ತು.

ಸಂಪೂರ್ಣ ಸ್ವರಾಜ್ಯ ಎಂಬ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ಕೃಷಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿತ್ತು. ಎಲ್ಲ ಅಭಿವೃದ್ಧಿಗೂ ಕೃಷಿಯೇ ಮೂಲ ಎಂಬುದು ಅವರ ಮಂತ್ರವಾಗಿತ್ತು. ಕೃಷಿಗೆ ಉತ್ತೇಜನ ನೀಡುವ ಹೊಸ ಯೋಜನೆಗಳನ್ನು ಜಾರಿಗೊಳಿಸುವುದು ಮತ್ತು ದೇಶದ ಜನರಿಗೆ ದಿನನಿತ್ಯ ಬೇಕಾಗುವ ವಸ್ತುಗಳನ್ನು ಗುಡಿ ಕೈಗಾರಿಕೆಗಳ ಮೂಲಕ ಉತ್ಪಾದಿಸುವುದು ಹಾಗೂ ಆ ಮೂಲಕ ಬೃಹತ್ ಸಂಖ್ಯೆಯಲ್ಲಿ ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸುವುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು.

ABOUT THE AUTHOR

...view details