ಕರ್ನಾಟಕ

karnataka

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತ ಬ್ರಿಜ್​ ಭೂಷಣ್‌ಗೆ ಅಯೋಧ್ಯೆ ಸ್ವಾಮೀಜಿಗಳ ಬೆಂಬಲ

By

Published : May 31, 2023, 1:29 PM IST

ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರನ್ನು ಬೆಂಬಲಿಸಿ ಜೂನ್​ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸ್ವಾಮೀಜಿಗಳ ಗುಂಪು ರ‍್ಯಾಲಿ ನಡೆಸಲು ತೀರ್ಮಾನಿಸಿದೆ.

Ayodhya seers to hold rally in support of WFI chief  Brij Bhushan Sharan Singh
ಬ್ರಿಜ್​ ಭೂಷಣ್​ ಬೆಂಬಲಿಸಿ ಅಯೋಧ್ಯೆಯಲ್ಲಿ ಸ್ವಾಮೀಜಿಗಳ ರ‍್ಯಾಲಿ

ಅಯೋಧ್ಯೆ (ಉತ್ತರ ಪ್ರದೇಶ): ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರನ್ನು ಬೆಂಬಲಿಸಿ ಜೂನ್​ 5 ರಂದು ರ‍್ಯಾಲಿ ನಡೆಸುವುದಾಗಿ ಉತ್ತರ ಪ್ರದೇಶದ ಅಯೋಧ್ಯೆ ಸ್ವಾಮೀಜಿಗಳ ಗುಂಪು ಪ್ರಕಟಿಸಿದೆ. ಅಲ್ಲದೇ, ಅನೇಕ ಲೋಪದೋಷದಿಂದ ಕೂಡಿದ ಎಂದು ಹೇಳಲಾಗುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವರು ಲೈಂಗಿಕ ಕಿರುಕುಳದ ಆರೋಪ ಪ್ರಕರಣದಲ್ಲಿ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಬ್ರಿಜ್​ ಭೂಷಣ್​ ಅವರನ್ನು ಬೆಂಬಲಿಸಿ ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಅಯೋಧ್ಯೆಯ ಪ್ರಮುಖರು ಮತ್ತು ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬರುವ ಮುಖಂಡರು ರ‍್ಯಾಲಿ ನಡೆಸುವುದಾಗಿ ಮಹಂತ್ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಇದೇ ವೇಳೆ ಪೋಕ್ಸೋ ಕಾಯ್ದೆಯಲ್ಲಿ ಹಲವು ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳಿವೆ. ಇದರಿಂದ ಇದನ್ನೂ ಕೂಡ ನಾವು ವಿರೋಧಿಸುತ್ತೇವೆ ಎಂದು ಮಹಂತ್ ಹೇಳಿದ್ದಾರೆ. ಮತ್ತೊಂದೆಡೆ, ಬ್ರಿಜ್ ಭೂಷಣ್ ನಿಕಟ ಸಹವರ್ತಿ, ಆಪ್ತ ಸಹಾಯಕ ಸುಭಾಷ್ ಸಿಂಗ್ ಮಾತನಾಡಿ, ದೇಶದ ಹಿರಿಯ ಸಂತರು ಮತ್ತು ದಾರ್ಶನಿಕರು ನೀಡಿದ ಕರೆಯ ಮೇರೆಗೆ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಹರಿದ್ವಾರ, ಕಾಶಿ, ಮಥುರಾ ಮತ್ತು ದೇಶದ ಇತರ ಪುಣ್ಯಕ್ಷೇತ್ರಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣ; ದೆಹಲಿ ಪೊಲೀಸರಿಗೆ ನೋಟಿಸ್​ ಜಾರಿ ಮಾಡಿದ ಹೈಕೋರ್ಟ್​

ಕುಸ್ತಿಪಟುಗಳಿಗೆ ರೈತ ಮುಖಂಡರ ಬೆಂಬಲ: ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಪ್ರಮುಖ ರೈತ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚಿಸಲು ಗುರುವಾರ ಉತ್ತರ ಪ್ರದೇಶದ ಮುಜಾಫರ್‌ನಗರದ ಸೊರಮ್ ಗ್ರಾಮದಲ್ಲಿ ಮಹಾ ಪಂಚಾಯತ್ ನಡೆಯಲಿದೆ ಎಂದು ಬಿಕೆಯು ಮುಖಂಡ ನರೇಶ್ ಟಿಕಾಯತ್ ಹೇಳಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆ ಕುರಿತು ಮುಂದಿನ ಕ್ರಮವನ್ನು ನಿರ್ಧರಿಸಲು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ವಿವಿಧ ಖಾಪ್‌ಗಳ ಹಲವಾರು ಪ್ರತಿನಿಧಿಗಳು ಮತ್ತು ಮುಖ್ಯಸ್ಥರು ಈ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಟಿಕಾಯತ್ ತಿಳಿಸಿದ್ದಾರೆ.

ಮಂಗಳವಾರ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ವಿಳಂಬ ಖಂಡಿಸಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ತಾವು ಗೆದ್ದ ವಿಶ್ವ ಮತ್ತು ಒಲಿಂಪಿಕ್ ಪದಕಗಳನ್ನು ಉತ್ತರಾಖಂಡ್​ನ ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಮಂಗಳವಾರ ಹರಿದ್ವಾರಕ್ಕೂ ತಲುಪಿದ್ದರು. ಆದರೆ ಖಾಪ್ ಮತ್ತು ರೈತ ಮುಖಂಡರು ಕುಸ್ತಿಪಟುಗಳನ್ನು ತಡೆದು ಪದಕಗಳನ್ನು ವಿಸರ್ಜನೆ ಮಾಡದಂತೆ ಮನವರಿಕೆ ಮಾಡಿದ್ದರು. ಸದ್ಯ ಕುಸ್ತಿಪಟುಗಳ ಮನವಿ ಆಲಿಸಲು ಕೇಂದ್ರ ಸರ್ಕಾರಕ್ಕೆ ಐದು ದಿನಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ:ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು: ನಿರ್ಧಾರ ಬದಲಿಸಿ ಸರ್ಕಾರಕ್ಕೆ ಐದು ದಿನಗಳ ಗಡುವು!

ABOUT THE AUTHOR

...view details