ಕರ್ನಾಟಕ

karnataka

ಅಮೆರಿಕದ ಟೆಕ್ಸಾಸ್​ನಲ್ಲಿ ಅಪಘಾತ; ಆಂಧ್ರ ಶಾಸಕರ ಕುಟುಂಬದ ಐವರು ಸಾವು

By ETV Bharat Karnataka Team

Published : Dec 27, 2023, 3:40 PM IST

ಅಮೆರಿಕದ ಟೆಕ್ಸಾಸ್​ನಲ್ಲಿ ನಡೆದ ಕಾರು ಅಪಘಾತದಲ್ಲಿ ಆಂಧ್ರ ಪ್ರದೇಶದ ಶಾಸಕ ಪೊನ್ನಡ ಸತೀಶ ಕುಟುಂಬದ ಐವರು ಸಾವಿಗೀಡಾಗಿದ್ದಾರೆ.

Five people from Andhra Pradesh    died on the spot in a road accident in USA Texas
Five people from Andhra Pradesh died on the spot in a road accident in USA Texas

ಹೈದರಾಬಾದ್:ಅಮೆರಿಕದ ಟೆಕ್ಸಾಸ್​ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಆಂಧ್ರಪ್ರದೇಶದ ಐವರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಅಮಲಾಪುರಂ ನಗರದವರಾಗಿದ್ದು, ಇವರೆಲ್ಲರೂ ಮುಮ್ಮಿಡಿವರಂ ಕ್ಷೇತ್ರದ ವೈಎಸ್​ಆರ್​ಸಿಪಿ ಶಾಸಕ ಪೊನ್ನಡ ಸತೀಶ ಅವರ ನಿಕಟ ಸಂಬಂಧಿಗಳು ಎಂದು ತಿಳಿದು ಬಂದಿದೆ.

ಪೊನ್ನಡ ನಾಗೇಶ್ವರ ರಾವ್, ಅವರ ಪತ್ನಿ ಸೀತಾ ಮಹಾಲಕ್ಷ್ಮಿ, ಮಗಳು ನವೀನಾ ಗಂಗಾ ಹಾಗೂ ಮೊಮ್ಮಗ ಮತ್ತು ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಳಿಯ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಸಕರ ಕುಟುಂಬದ ಮೂಲಗಳ ಪ್ರಕಾರ, ಅವರ ಚಿಕ್ಕಪ್ಪ ಮತ್ತು ಕುಟುಂಬದವರು ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದರು. ಕ್ರಿಸ್ಮಸ್ ಪ್ರವಾಸದ ನಂತರ ಟೆಕ್ಸಾಸ್​ನಿಂದ ಅಟ್ಲಾಂಟಾಗೆ ಮರಳುವಾಗ ಡಿಸೆಂಬರ್ 26 ರಂದು ಸಂಜೆ 4 ಗಂಟೆಗೆ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ರಾಂಗ್ ಸೈಡಿನಲ್ಲಿ ಟ್ರಕ್ ಬಂದು ಇವರ ಕಾರಿಗೆ ಅಪ್ಪಳಿಸಿದೆ ಎಂದು ಶಾಸಕರು ಹೇಳಿದ್ದಾರೆ. ಟ್ರಕ್ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಶಾಸಕ ಸತೀಶ ತಿಳಿಸಿದ್ದಾರೆ.

ಅಪಘಾತದಲ್ಲಿ ಇಬ್ಬರು ಹೋಂ ಗಾರ್ಡ್​ ಜವಾನರ ಸಾವು: ಮೊಹಾಲಿಯ ದೇರಬಸ್ಸಿ ಪಟ್ಟಣದ ಬರ್ವಾಲಾ ರಸ್ತೆಯಲ್ಲಿ ಬುಧವಾರ ಮುಂಜಾನೆ ಕ್ಯಾಂಟರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪಂಜಾಬ್ ಹೋಮ್ ಗಾರ್ಡ್ ಜವಾನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕ್ಯಾಂಟರ್ ವಶಪಡಿಸಿಕೊಂಡಿದ್ದಾರೆ. ಮೃತರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ನಡೆಯಲಿದೆ.

ಮೃತರನ್ನು ಜಸ್ಮೇರ್ ಸಿಂಗ್ (52) ಮತ್ತು ಹರಿ ಸಿಂಗ್ (54) ಎಂದು ಗುರುತಿಸಲಾಗಿದೆ ಎಂದು ದೇರಬಸ್ಸಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್​ಪಿ) ಡಾ. ದರ್ಪಣ್ ಅಹ್ಲುವಾಲಿಯಾ ತಿಳಿಸಿದ್ದಾರೆ. ಇಬ್ಬರು ಯೋಧರು ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 1.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

ಸರಣಿ ಅಪಘಾತ-ಓರ್ವ ಸಾವು: ದಟ್ಟ ಮಂಜಿನಿಂದಾಗಿ ಲಕ್ನೋ-ಆಗ್ರಾ ಎಕ್ಸ್ ಪ್ರೆಸ್ ವೇಯಲ್ಲಿ ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ಹಲವಾರು ವಾಹನಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಿಂದಾಗಿ ಬಸ್ ಪ್ರಯಾಣಿಕನೊಬ್ಬ ಸಾವನ್ನಪ್ಪಿದ್ದು, ಇತರ 14 ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಉನ್ನಾವೊದ ಬಂಗರ್​ಮೋ ಕೋತ್ವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಹೈಬತ್ಪುರ ಗ್ರಾಮದ ಬಳಿ 240ನೇ ಮೈಲಿಗಲ್ಲಿನ ಬಳಿ ಈ ಅಪಘಾತ ಸಂಭವಿಸಿದ್ದು, ಎಕ್ಸ್​ಪ್ರೆಸ್ ವೇಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಇದನ್ನೂ ಓದಿ: ಐಟಿ ವಲಯದ ನೇಮಕಾತಿ ಶೇ 8 ರಿಂದ 10ರಷ್ಟು ಹೆಚ್ಚಳ ಸಾಧ್ಯತೆ: ವರದಿ

ABOUT THE AUTHOR

...view details