ನವದೆಹಲಿ:2003 ರಲ್ಲಿ ಇದ್ದ ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷವನ್ನು ಮೇಲಕ್ಕೆ ತೆಗೆದುಕೊಂಡು ಬಂದು, ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ಶೈನಿಂಗ್ ಇಂಡಿಯಾ ಕ್ಯಾಂಪೇನ್ ವಿರುದ್ಧ ಜನರನ್ನ ಒಗ್ಗೂಡಿಸುವಲ್ಲಿ ಆಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಯಶಸ್ಸು ಗಳಿಸಿದ್ದಲ್ಲದೇ, ಬಿಜೆಪಿಯನ್ನ ನೆಲಕಚ್ಚುವಂತೆ ಮಾಡಿದ್ದರು.
ಇದೇ ರೀತಿಯ ರಣನೀತಿಯನ್ನು ರೂಪಿಸಲು ಮುಂದಾಗಿರುವ ಕಾಂಗ್ರೆಸ್, ಆಗ ಇಂಡಿಯಾ ಶೈನಿಂಗ್ಸೋಲಿಸಿದಂತೆ ಬಿಜೆಪಿ ಈಗಿನ ನವಭಾರತ ಕ್ಯಾಂಪೇನ್ ವಿರುದ್ಧ ಜನಾಭಿಪ್ರಾಯ ರೂಪಿಸಲು, ಇದೇ ಅಕ್ಟೋಬರ್ 2 ರಿಂದ ಕಾಶ್ಮೀರ- ಕನ್ಯಾಕುಮಾರಿಪಾದಯಾತ್ರೆ ಯೋಜನೆ ರೂಪಿಸಿ ಬಿಜೆಪಿ ವಿರುದ್ಧ ಜನಾಂದೋಲನ ರೂಪಿಸಿದೆ.
ಆಗಿನ ಆಡಳಿತಾರೂಢ ಎನ್ಡಿಎದ ಇಂಡಿಯಾ ಶೈನಿಂಗ್ ಅಭಿಯಾನವನ್ನು ಸೋನಿಯಾ ಗಾಂಧಿ ಪಂಕ್ಚರ್ ಮಾಡಲು ಯಶಸ್ವಿಯಾಗಿದ್ದರು. ಇದಕ್ಕಾಗಿ ಅವರು, ದೇಶಾದ್ಯಂತ ಪ್ರವಾಸ ಕೈಗೊಂಡಿದ್ದರು. ಗ್ರಾಮೀಣ ಭಾರತದ ಜನ ಯಾವ ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನ ದೇಶದ ಜನರಿಗೆ ಮನದಟ್ಟು ಮಾಡಲು ಯಶಸ್ವಿಯಾಗಿದ್ದರು. ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ಫಿನಿಕ್ಸ್ನಂತೆ ಮೇಲೆದ್ದು ಬರುವಂತೆ ಮಾಡಿ, ವಾಜಪೇಯಿ ಸರ್ಕಾರಕ್ಕೆ ಮರ್ಮಾಘಾತವನ್ನೇ ನೀಡಿದ್ದರು. ಈ ವಿಷಯವನ್ನು ಹಿರಿಯ ಕಾಂಗ್ರೆಸ್ ನಾಯಕರು ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
ಭಾರತ ಜೋಡೋ ಯಾತ್ರೆ:ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭಾರತ ಜೋಡೋ ಯಾತ್ರೆ ವೇಳೆ, ಸರ್ಕಾರದ ಆರ್ಥಿಕ ನೀತಿ, ಹೆಚ್ಚುತ್ತಿರುವ ನಿರುದ್ಯೋಗ ಸೇರಿದಂತೆ ಬಿಜೆಪಿ ಸರ್ಕಾರ ವೈಫಲ್ಯಗಳನ್ನು ಜನರಿಗೆ ತೋರಿಸಲು ನಿರ್ಧರಿಸಲಾಗಿದೆ. ದೇಶದ ಜನ ದೊಡ್ಡ ಪ್ರಮಾಣದ ನಿರುದ್ಯೋಗದಿಂದ ಬಳಲಿ ಹೋಗಿದ್ದಾರೆ. ಒಂದೇ ಉದ್ಯೋಗದ ಪ್ರಶ್ನೆಯಾದರೆ ಮತ್ತೊಂದು ಕಡೆ ನಿತ್ಯ ಹೆಚ್ಚುತ್ತಿರುವ ಆಹಾರಧಾನ್ಯಗಳ ಬೆಲೆ ಜನ ಸಾಮಾನ್ಯರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಇನ್ನು ಬಿಜೆಪಿಗರು ದೇಶದ ರಾಜಕೀಯವನ್ನು ಒಡೆದು ಆಳುತ್ತಿದ್ದು, ಇದರಿಂದ ನಾಗರಿಕರು ಬೇಸತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಶಕೀಲ್ ಅಹ್ಮದ್ ಈಟಿವಿ ಭಾರತದೊಂದಿಗೆ ಮಾತನಾಡುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಪಾದಯಾತ್ರೆ ಹೇಗೆಲ್ಲ ಪಕ್ಷವನ್ನು ಪುನಶ್ಚೇತನಗೊಳಿಸುತ್ತೆ?:ರಾಜಸ್ಥಾನದಲ್ಲಿ ನಡೆದ ಚಿಂತನಾ ಸಿಬಿರದಲ್ಲಿ ಕಾಶ್ಮೀರದಿಂದ - ಕನ್ಯಾಕುಮಾರಿವರೆಗೆ ಭಾರತ ಜೋಡೋ ಯಾತ್ರೆ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಶಕೀಲ್ ಅಹ್ಮದ್, ಯಾತ್ರೆಯ ಪ್ರಯೋಜನಗಳ ಪಟ್ಟಿಯನ್ನ ಮಾಡಿದ್ದಾರೆ.
ಜನರು ಈಗಾಗಲೇ ಬಿಜೆಪಿ ನವ ಭಾರತ ಅಭಿಯಾನದ ಸತ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ದೇಶದ ಜನ ಯಾವೆಲ್ಲ ಪ್ರಯೋಜನ ಪಡೆದಿದ್ದಾರೆ, ಆಗಿರುವ ಲಾಭ ಏನು ಹಾಗೂ ಸರ್ಕಾರ ಎಷ್ಟೊಂದು ಸುಳ್ಳು ಹೇಳಿದೆ ಎಂಬ ಬಗ್ಗೆ ನಾವು ಜನರಿಗೆ ತಿಳಿ ಹೇಳುತ್ತಿದ್ದೇವೆ. ಅದನ್ನು ಜನರೂ ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಮತ್ತು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ವಿವರಿಸಿದ್ದಾರೆ.
ಜನ ಬೀದಿಗಿಳಿದರೆ ಬದಲಾವಣೆ ತನ್ನಿಂದ ತಾನೇ ಬರುತ್ತೆ- ಹರಿಪ್ರಸಾದ್:ದೇಶಾದ್ಯಂತ ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ಮುಂದುವರಿದಿವೆ. ಆಂತರಿಕ ಭದ್ರತೆ ಹದಗೆಟ್ಟಿದೆ. ಈ ಹಿಂದೆ ಇಂಡಿಯಾ ಶೈನಿಂಗ್ ಅಭಿಯಾನ ಈಗ ನವ ಭಾರತ ನಿರ್ಮಾಣ ಅಭಿಯಾನಗಳಿಂದ ದೇಶದ ಜನರಿಗೆ ಯಾವುದೇ ಲಾಭವಾಗಿಲ್ಲ ಎಂದು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದರು. ಹರಿಪ್ರಸಾದ್ ಅವರು ಹೇಳುವ ಪ್ರಕಾರ, ಕಾಂಗ್ರೆಸ್ ಪಕ್ಷದ ಯೋಜಿತ ಯಾತ್ರೆಯು ಪಕ್ಷದ ಕಾರ್ಯಕರ್ತರಿಗೆ ಚೈತನ್ಯ ತುಂಬಲಿದೆ. ಅಷ್ಟೇ ಅಲ್ಲ ಈ ಯಾತ್ರೆ ಮತದಾರರನ್ನು ಪಕ್ಷಕ್ಕೆ ಮರಳಿ ಕರೆತರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾವು ಬೀದಿಗಿಳಿದರೆ ಬದಲಾವಣೆ ಬಂದೇ ಬರುತ್ತದೆ ಎಂಬ ಅದಮ್ಯ ವಿಶ್ವಾಸವನ್ನೂ ಇದೇ ವೇಳೆ ಬಿ ಕೆ ಹರಿಪ್ರಸಾದ್ ವ್ಯಕ್ತಪಡಿಸಿದರು.
2004 ರ ಯಶಸ್ಸಿಗೆ ಈ ಅಂಶವೇ ಮೂಲ ಕಾರಣ:2004 ರಲ್ಲಿ ಯುಪಿಎ ಅಧಿಕಾರ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮತ್ತೊಂದು ಅಂಶ ಎಂದರೆ, ಸೋನಿಯಾ ಗಾಂಧಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಪ್ರಮುಖ ಕಾರಣವಾಗಿತ್ತು. ಆದರೆ, ಈ ಬಾರಿ ಪ್ರಮುಖ ವ್ಯತ್ಯಾಸವಿದೆ ಎನ್ನುತ್ತಾರೆ ಕಾಂಗ್ರೆಸ್ನ ಕೆಲ ಮುಖಂಡರು.
ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಿದೆ. ಪಕ್ಷವನ್ನು ಪುನರುಜ್ಜೀವನ ಗೊಳಿಸುವಲ್ಲಿ ವಿಫಲರಾಗುತ್ತಿದ್ದೇವೆ, ಕಾರ್ಯಕರ್ತರು ಹತಾಶಗೊಂಡಿದ್ದಾರೆ. ಹೀಗಾಗಿ ಕಾರ್ಯಕರ್ತರನ್ನ ಮೊದಲಿಗೆ ಹುರಿದುಂಬಿಸಬೇಕಿದೆ. ಆ ಪ್ರಯತ್ನವನ್ನ ಈ ಭಾರತ - ಜೋಡೋ ಯಾತ್ರೆ ಮಾಡಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೊಂದಿದ್ದಾರೆ. ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುವ ಹುಮ್ಮಸ್ಸಿನಲ್ಲಿರುವ ರಾಹುಲ್ ಗಾಂಧಿ, ಕೇಸರಿ ಪಡೆಯನ್ನು ಸೈದ್ಧಾಂತಿಕವಾಗಿಯೇ ಎದುರಿಸಬೇಕು ಎಂಬ ನಿಲುವಿಗೆ ಬಂದಂತಿದೆ.
ಒಗ್ಗಟ್ಟಿನಿಂದ ಹೋರಾಡಿ ಎಂಬ ಸಲಹೆ:ಇತ್ತೀಚೆಗಷ್ಟೇ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ರಾಹುಲ್ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯ ಸವಾಲನ್ನು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಎದುರಿಸಲು ಸಾಧ್ಯವಿಲ್ಲ, ಹೀಗಾಗಿ ಆಡಳಿತ ಪಕ್ಷವನ್ನು ನಾವೆಲ್ಲ ಸೇರಿ ಹೋರಾಟ ಮಾಡಿ ಎದುರಿಸಬೇಕಿದೆ ಎಂದಿದ್ದರು. ಕಾಂಗ್ರೆಸ್ ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶದ ಮೂಲೆ ಮೂಲೆಗಳಲ್ಲೂ ಪಕ್ಷದ ಕಾರ್ಯಕರ್ತರಿದ್ದಾರೆ. ಸಾಕಷ್ಟು ಬೆಂಬಲಿಗರು, ಮೂಲ ನೆಲಸಿಗರು ಎಲ್ಲ ಕಡೆ ಸಿಗುತ್ತಾರೆ. ಅವರನ್ನೆಲ್ಲ ಪಕ್ಷ ಸಂಪರ್ಕಿಸಿ ಪಕ್ಷವನ್ನ ಬಲ ಪಡಿಸಬೇಕಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಇದನ್ನು ಓದಿ:ಬಿಜೆಪಿ ಸರ್ಕಾರ ಭಾರತದ ಅರ್ಥವ್ಯವಸ್ಥೆಯನ್ನೇ ಹಾಳು ಮಾಡಿದೆ: ರಾಹುಲ್ ಗಾಂಧಿ