ಕರ್ನಾಟಕ

karnataka

ರಾಜಸ್ಥಾನ ಚುನಾವಣೆ: ಬಿಜೆಪಿ 83 ಅಭ್ಯರ್ಥಿಗಳ 2ನೇ ಪಟ್ಟಿ... ಕಾಂಗ್ರೆಸ್​ 33 ಕ್ಷೇತ್ರಗಳ ಟಿಕೆಟ್​ ಅಖೈರು.. ಮಾಜಿ ಸಿಎಂ ವಸುಂದರಾ ರಾಜೇ ಬೆಂಬಲಿಗರಿಗೆ ಕೊಕ್​

By ETV Bharat Karnataka Team

Published : Oct 21, 2023, 5:25 PM IST

Updated : Oct 21, 2023, 5:52 PM IST

ರಾಜಸ್ಥಾನ ವಿಧಾನಸಭೆಗೆ ನವೆಂಬರ್​ 23 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಪಟ್ಟಿಗಳನ್ನು ಬಿಡುಗಡೆ ಮಾಡಿತು.

ರಾಜಸ್ಥಾನ ಚುನಾವಣೆ
ರಾಜಸ್ಥಾನ ಚುನಾವಣೆ

ಜೈಪುರ (ರಾಜಸ್ಥಾನ) :ಕಾಂಗ್ರೆಸ್​ ಸೋಲಿಸಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತು. ಇದರಲ್ಲಿ 83 ಅಭ್ಯರ್ಥಿಗಳ ಹೆಸರನ್ನು ಪಕ್ಷ ಅಖೈರು ಮಾಡಿದ್ದು, ಮಾಜಿ ಸಿಎಂ ವಸುಂಧರಾ ರಾಜೇ ಅವರಿಗೆ ಝಲ್ರಾಪಟನ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇದೇ ವೇಳೆ ಮಾಜಿ ಸಿಎಂ ರಾಜೇ ಅವರ ಕೆಲ ಬೆಂಬಲರಿಗೆ ಕೊಕ್​ ನೀಡಲಾಗಿದೆ.

ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದೆಹಲಿಯಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು. ನಂತರ ಇಂದು ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಪಟ್ಟಿಯಲ್ಲಿ 56 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಇದರ ಜೊತೆಗೆ 2018 ರಲ್ಲಿ ಸೋತಿದ್ದ 27 ಅಭ್ಯರ್ಥಿಗಳಗೂ ಮಣೆ ಹಾಕಲಾಗಿದೆ. ಈ ಮೂಲಕ ಸೋತ ಕ್ಷೇತ್ರದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಯೋಜನೆ ರೂಪಿಸಲಾಗಿದೆ.

ಯಾರಿಗೆಲ್ಲಾ ಟಿಕೆಟ್​:ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಾಜಿ ಸಿಎಂ ವಸುಂದರಾ ರಾಜೇ ಅವರಿಗೆ ಝಲ್ರಾಪಟನ್ ಕ್ಷೇತ್ರ, ರೈಸಿಂಗ್‌ನಗರದಿಂದ ಬಲ್ಬೀರ್ ಸಿಂಗ್ ಲೂತ್ರಾ, ಅನುಪ್‌ಗಢದಿಂದ ಸಂತೋಷ್ ಬಾವ್ರಿ, ಸಂಗರಿಯಾದಿಂದ ಗುರುದೀಪ್ ಸಿಂಗ್ ಶಹಪಿನಿ, ಪಿಲಿಬಂಗಾದಿಂದ ಧರ್ಮೇಂದ್ರ ಮೋಚಿ, ನೋಹರ್‌ನಿಂದ ಅಭಿಷೇಕ್ ಮಟೋರಿಯಾ, ಬಿಕಾನೇರ್ ಪಶ್ಚಿಮದಿಂದ ಜೇತಾನಂದ ವ್ಯಾಸ್, ಬಿಕಾನೇರ್ ಪೂರ್ವದಿಂದ ಸಿದ್ಧಿ ಕುಮಾರಿ, ಲುಂಕರನ್‌ಸರ್‌ನಿಂದ ಸುಮಿತ್ ಗೋಡಾರಾ, ನೋಖಾದಿಂದ ಬಿಹಾರಿ ಲಾಲ್ ವಿಷ್ಣೋಯ್, ತಾರಾನಗರದಿಂದ ರಾಜೇಂದ್ರ ರಾಥೋಡ್, ಚುರುನಿಂದ ಹರ್ಲಾಲ್ ಸಹರಾನ್, ರತನ್‌ಗಡ್‌ನಿಂದ ಅಭಿನೇಶ್ ಮಹರ್ಷಿ, ಸೂರಜ್‌ಗಢದಿಂದ ಸಂತೋಷ್ ಅಹ್ಲಾವತ್ ಸೇರಿದಂತೆ 83 ಮಂದಿಗೆ ಟಿಕೆಟ್ ನೀಡಲಾಗಿದೆ.

ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್​:ಇಂದು ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವಾರು ಮಾಜಿ ಮತ್ತು ಹಾಲಿ ಶಾಸಕರಿಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಪಕ್ಷದ ನಿಷ್ಠ ಕಾರ್ಯಕರ್ತರಿಗೂ ಟಿಕೆಟ್ ನೀಡಲಾಗಿದೆ. ಇದನ್ನು ನೀವು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ. ಬಿಜೆಪಿ ಕಾರ್ಯಕರ್ತರ ಪಕ್ಷ ಎಂಬುದಕ್ಕೆ ಇದೇ ಉದಾಹರಣೆ. ನಾವು ಈ ಬಾರಿ ಪೂರ್ಣ ಬಹುಮತದಿಂದ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯಲಿದ್ದೇವೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಟೋಬರ್ 9 ರಂದು ಬಿಜೆಪಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 7 ಸಂಸದರು ಸೇರಿದಂತೆ 41 ಅಭ್ಯರ್ಥಿಗಳ ಹೆಸರನ್ನು ಅಖೈರು ಮಾಡಲಾಗಿತ್ತು. ಇಲ್ಲಿಯವರೆಗೆ ಒಟ್ಟು 124 ಸ್ಥಾನಗಳಲ್ಲಿ ಟಿಕೆಟ್ ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ:ಇತ್ತ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್​ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಸಿಎಂ ಅಶೋಕ್ ಗೆಹ್ಲೋಟ್(ಸರ್ದಾರ್‌ಪುರ ಕ್ಷೇತ್ರ), ಸಚಿನ್ ಪೈಲಟ್ (ಟೋಂಕ್ ಕ್ಷೇತ್ರ) ಸೇರಿದಂತೆ 33 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಅವರು ಲಚ್ಮಂಗಢದಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ಹಿರಿಯ ನಾಯಕ ಮತ್ತು ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರು ನಾಥದ್ವಾರದಿಂದ ಸ್ಪರ್ಧಿಸಲಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ 200 ಸದಸ್ಯ ಬಲದಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 73 ಸ್ಥಾನಗಳನ್ನು ಗೆದ್ದಿತು. ಸಿಎಂ ಅಶೋಕ್ ಗೆಹ್ಲೋಟ್ ಬಿಎಸ್​ಪಿ ಮತ್ತು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದರು. ನವೆಂಬರ್​ 23 ರಂದು ಮತದಾನ ನಡೆಯಲಿದ್ದು, ಡಿಸೆಂಬರ್​ 3 ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ :Five state assembly election : ಛತ್ತೀಸ್​ಗಢ, ಮಧ್ಯಪ್ರದೇಶ, ತೆಲಂಗಾಣ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Last Updated :Oct 21, 2023, 5:52 PM IST

ABOUT THE AUTHOR

...view details