6 ತಿಂಗಳಲ್ಲಿ 13 ಪ್ರಕರಣ ಭೇದಿಸಿದ ಯಾದಗಿರಿ ಪೊಲೀಸರು: ನಗದು ಸೇರಿ 15 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳು ಜಪ್ತಿ
ವಿವಿಧ 13 ಪ್ರಕರಣಗಳನ್ನು ಭೇದಿಸಿರುವ ಯಾದಗಿರಿ ಪೊಲೀಸರು, 15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 10 ಆರೋಪಿಗಳನ್ನು ಬಂಧಿಸಿದ್ದಾರೆ.

Published : January 10, 2026 at 1:38 PM IST
ಯಾದಗಿರಿ: ಕಳೆದ ಆರು ತಿಂಗಳಲ್ಲಿ ನಡೆದಿರುವ 13 ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ, ನಗದು ಸೇರಿದಂತೆ ಸುಮಾರು 15 ಲಕ್ಷ ರೂ ಮೌಲ್ಯದ ವಸ್ತುಗಳು ವಶಪಡಿಸಿಕೊಂಡು 10 ಆರೋಪಿಗಳನ್ನು ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನ ಅಲ್ಲೂರ್ (ಬಿ) ಗ್ರಾಮದ ಮಹಾದೇವ ದ್ಯಾವಣ್ಣನೋರ ಎಂಬ ಬೈಕ್ ಕಳ್ಳನನ್ನು ಬಂಧಿಸಿ ಆತನಿಂದ 1.70 ಲಕ್ಷ ರೂ.ಮೌಲ್ಯದ ಐದು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ಯಾದಗಿರಿ ನಗರ ಠಾಣೆ ಮತ್ತು ಇನ್ನೊಂದು ಬೆಂಗಳೂರಿನ ಕೊಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಬೈಕ್ಗಳು ಸೇರಿವೆ ಎಂದರು.
ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿ ಅಶೋಕ ಮುಷ್ಯನನ್ನು ಬಂಧಿಸಿ ಆತನಿಂದ 1.49 ಲಕ್ಷ ರೂ. ಮೌಲ್ಯದ ವಿವಿಧ ಬಂಗಾರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿಯಾಗಿ ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆಂಧ್ರಪ್ರದೇಶದ ಅನಂತಪುರಂನ ಮಹೇಶ ಮೊಗ ಎಂಬಾತನನ್ನು ಬಂಧಿಸಿ ನಗದು 4.80 ಲಕ್ಷ ರೂ., ಹಳ್ಳೆಪ್ಪ ಗೊಂದಲಗೇರಾ ಎಂಬಾತನಿಂದ 1,01,300 ಲಕ್ಷ ರೂ ಹಾಗೂ ಬಂಧಿತ ಪ್ರಶಾಂಶ ಮತ್ತು ಶಿವಕುಮಾರ ಅವರಿಂದ 1.40 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನ, 80 ಮೌಲ್ಯದ 10 ಗ್ರಾಂ ಚಿನ್ನದ ಬೆಂಡೋಲಿ 15 ಸಾವಿರ ರೂ. ಮೌಲ್ಯದ 20 ಸಾವಿರ ರೂ. ಮೌಲ್ಯದ 20 ಶೋಲೆ ಬೆಳ್ಳಿ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.

ರಾಯಚೂರಿನ ಆಂಜನೇಯ ಎಂಬ ಆರೋಪಿಯನ್ನು ಬಂಧಿಸಿ, ಆತನಿಂದ 82 ಸಾವಿರ ರೂ. ಮೌಲ್ಯದ ಒಂದು ಬೈಕ್ ಮತ್ತು 10 ಗ್ರಾಂ ಬಂಗಾರ, ಶಿವಪ್ಪ ಬೇವಿನಹಳ್ಳಿ ಎಂಬ ಆರೋಪಿಯನ್ನು ಬಂಧಿಸಿ ಆತನಿಂದ 95 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಮತ್ತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1,10 ಲಕ್ಷ ರೂ. ಮೌಲ್ಯದ 11 ಕುರಿಗಳನ್ನು ಕಳ್ಳತನ ಮಾಡಿದ್ದ ದಶರಥ ಕಟ್ಟಿಮನಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಎಸ್ಪಿ ಧರಣೇಶ, ಡಿಎಸ್ಪಿಗಳಾದ ಜಾವಿದ್ ಇನಾಂದಾರ, ಸುರೇಶ ನಾಯಕ್, ಸಿಪಿಐ ಸುನೀಲ್ ಮೂಲಿಮನಿ ಇದ್ದರು.
ಜಾಲ ಬೀಸಿ ಪತ್ತೆ ಹಚ್ಚಿದ ಅಧಿಕಾರಿ, ಸಿಬ್ಬಂದಿ: ತಮ್ಮ ಹಾಗೂ ಹೆಚ್ಚುವರಿ ಎಸ್ಪಿ ಧರಣೇಶ, ಡಿಎಸ್ಪಿ ಸುರೇಶ ನಾಯಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್ಐಗಳಾದ ಮಹಬೂಬ್, ಮಂಜನಗೌಡ, ಹಣಮಂತ ಬಂಕಲಗಿ. ನಾಬರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ, ವಿಷ್ಣುವರ್ಧನ, ಸೈದಪ್ಪ, ಸೈಯದ್ಲಿ, ಸಾಬರೆಡ್ಡಿ, ಈರಪ್ಪ, ಅಬ್ದುಲ್ ಭಾಷಾ, ದಾವಲಸಾಬ್, ಗೋವಿಂದ, ವೆಂಕಟೇಶ, ಸಂಗನಗೌಡ. ಲಾಲ ಅಹ್ಮದ್, ವೆಂಕೋಬಾ, ಶರೀಫ್ನಾಬ್, ಹರಿನಾಥರೆಡ್ಡಿ, ರಾಘವೇಂದ್ರರೆಡ್ಡಿ, ರಮೇಶ ಮತ್ತು ಕರುಣೇಶ ಅವರುಗಳು ಜಾಲ ಬೀಸಿ ಈ ಎಲ್ಲ ಪ್ರಕರಣಗಳನ್ನು ಭೇದಿಸಿದ್ದಾರೆ. ಇದಕ್ಕಾಗಿ ಇವರಿಗೆಲ್ಲ ಇಲಾಖೆಯಿಂದ ಪ್ರಶಂಸನಾ ಪತ್ರ ನೀಡಲಾಗುವುದೆಂದು ಎಸ್ಪಿ ಪೃಥ್ವಿಕ್ ಶಂಕರ್ ಹೇಳಿದರು.
166 ರಸ್ತೆ ಅಪಘಾತ: ನಗರ ಸೇರಿದಂತೆಯೇ ಜಿಲ್ಲೆಯ ಎಲ್ಲಡೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕುವ ಪ್ರಕ್ರಿಯೆ ಮುಂದುವರಿದಿದೆ. 2024ರಲ್ಲಿ ಜಿಲ್ಲೆಯಲ್ಲಿ 157 ಮತ್ತು 2025ರಲ್ಲಿ 166 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 85 ಬೈಕ್ ಸವಾರರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಸವಾರರು ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು. ಮೂರು ಜನ ಕುಳಿತುಕೊಂಡು ವಾಹನ ನಡೆಸಬಾರದು ಮತ್ತು ಮೊಬೈಲ್ ಬಳಕೆ ಮಾಡಬಾರದು. ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದ್ದು, ಜನರು ಸಹ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಎಸ್ಪಿ ಮನವಿ ಮಾಡಿದರು.
ಇವುಗಳನ್ನೂ ಓದಿ:

