ಮೈಸೂರು: 15 ವರ್ಷಗಳಿಂದ ವಾಸವಾಗಿದ್ದೀವಿ ಸೂರು ಕೊಡಿ, ಅಲೆಮಾರಿಗಳ ಅಳಲು
ಕುಡಿಯುವ ನೀರಿನ ವ್ಯವಸ್ಥೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ಸೈಯದ್ ಫಾತಿಮಾ ಅವರು ಮಾಹಿತಿ ನೀಡಿದ್ದಾರೆ.


Published : January 10, 2026 at 8:57 PM IST
ಮೈಸೂರು: ಮೈಸೂರಿನ ಸಾತಗಳ್ಳಿ ಅಂಬೇಡ್ಕರ್ ಕಾಲೋನಿಗೆ ಶನಿವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ, ನರ್ಮ್ ಮನೆಗಳಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರ ಕುಂದು - ಕೊರತೆ ಆಲಿಸಿದರು.
ಸಾತಗಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ 560 ಗುಂಪು ಮನೆಗಳಿದ್ದು, ಕಳೆದ 15 ವರ್ಷಗಳಿಂದ ವಾಸವಾಗಿದ್ದೇವೆ. ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಹಾಗೂ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿನ ಅಂಬೇಡ್ಕರ್ ಸಮುದಾಯ ಭವನದಲ್ಲೇ ಸೂಕ್ತ ಸೌಲಭ್ಯಗಳು ಇಲ್ಲದೇ ಅಂಗನವಾಡಿ, ಸ್ಕೂಲ್ ನಡೆಸಲಾಗುತ್ತಿದೆ.

ಅಹವಾಲು ಹೇಳಿಕೊಂಡ ನಿವಾಸಿಗಳು: ಚಿಂತಾಜನಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇರುವುದು ಒಂದೇ ಬೋರ್ ವೆಲ್. ಅಷ್ಟೂ ಮನೆಗಳಿಗೂ ಒಂದೇ ಬೋರ್ವೆಲ್ನಲ್ಲಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಳೆದ ಹದಿನೈದು ವರ್ಷದಿಂದಲೂ ಹೀನಾಯವಾಗಿ ಬದುಕು ನಡೆಸುತ್ತಿದ್ದೇವೆ. ಮನೆಗಳ ಸುತ್ತಲೂ ಕಸ ತುಂಬಿರುತ್ತದೆ. ಸ್ವಚ್ಛತೆ ಇಲ್ಲ. ಎಷ್ಟೇ ಮನವಿ ಮಾಡಿದರೂ ಯಾರೋಬ್ಬ ಅಧಿಕಾರಿಗಳು ಬರುವುದಿಲ್ಲ. ಪುಂಡರ ಹಾವಳಿ, ರಸ್ತೆ ಅಭಿವೃದ್ಧಿಯಾಗಿಲ್ಲ. ಕಟ್ಟಡಗಳ ಛಾವಣಿ ಹಾಳಾಗಿದೆ. ಗಾಂಜ-ಡ್ರಗ್ಸ್ ಸೇವನೆ ಮಾಡುವವರು ಸ್ಥಳಿಯರ ಮೇಲೆ ಹಲ್ಲೆ ನಡೆಸುತ್ತಾರೆ. ಸಂಜೆ ವೇಳೆ ತಿರುಗಾಡುವುದ ಕಷ್ಟವಾಗಿದೆ ಎಂದು ನಿವಾಸಿಗಳು ಅಹವಾಲು ಸಲ್ಲಿಸಿದರು.

ಅನುದಾನ ಕೊರತೆ: ಅನುದಾನದ ಕೊರತೆಯಿಂದಾಗಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕಳೆದ ಐದು ವರ್ಷದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. ಕಸ ವಿಲೇವಾರಿ ಸಂಬಂಧ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ಸೈಯದ್ ಫಾತಿಮಾ ಅವರು ಮಾಹಿತಿ ನೀಡಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಚರ್ಚಿಸಿ, ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವಲ್ಲಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಲ್ಲಿ ಬಹುತೇಕ ಕುಟುಂಬಗಳು ಇನ್ನೂ ಸೂರಿಲ್ಲದೆ ಬೀದಿಯಲ್ಲಿವೆ. ಆದ್ದರಿಂದ ಸಂಘಗಳನ್ನು ಮಾಡಿಕೊಂಡು, ಬೇಡಿಕೆ ಮತ್ತು ಮನವಿಗಳನ್ನು ಕಾಲ ಕಾಲಕ್ಕೆ ಸಲ್ಲಿಸಬೇಕು. ಸರ್ಕಾರದಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಿಂದಲೂ ಸ್ವಚ್ಚತಾ ಕಾರ್ಯಗಳನ್ನು ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆದರು ಪೊಲೀಸರ ಗಮನಕ್ಕೆ ತನ್ನಿ, ಒಗ್ಗಟ್ಟಿನಿಂದ ಸಂಘಟಿತರಾಗಿ ಎಂದು ಸಲಹೆ ನೀಡಿದರು.
ಇವುಗಳನ್ನು ಓದಿ: ಪ್ರಧಾನಿ ಮಾತೇ ಸ್ಪೂರ್ತಿ: ಕೈತುಂಬಾ ಸಂಬಳದ ಕೆಲಸ ಬಿಟ್ಟು ಎತ್ತಿನ ಗಾಣದ ಎಣ್ಣೆ ಉದ್ಯಮ ಆರಂಭಿಸಿ ಯಶಸ್ವಿಯಾದ ಯುವಕರು!
ಬೆಂಗಳೂರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ: ಬಿಹಾರ ಮೂಲದ ಐವರಿಗೆ ಗಂಭೀರ ಗಾಯ

