ಎಸ್ಎಸ್ಎಲ್ಸಿ ಪರೀಕ್ಷೆ ಓದಿಗಾಗಿ ನಿರಂತರ ವಿದ್ಯುತ್ ಒದಗಿಸಿ: ಸಿಎಂಗೆ ಪತ್ರ ಬರೆದ ಹೊಯ್ಸಳ ಶೌರ್ಯ ಪ್ರಶಸ್ತಿ ವಿಜೇತ ವಿದ್ಯಾರ್ಥಿ
ಎಸ್ಎಸ್ಎಲ್ಸಿ ಪರೀಕ್ಷೆ ಓದಿಗಾಗಿ ನಿರಂತರ ವಿದ್ಯುತ್ ಒದಗಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಹೊಯ್ಸಳ ಶೌರ್ಯ ಪ್ರಶಸ್ತಿ ವಿಜೇತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಗಮನ ಸೆಳೆದಿದ್ದಾನೆ.

Published : January 20, 2026 at 6:03 PM IST
ಉಡುಪಿ: ಹೊಯ್ಸಳ ಶೌರ್ಯ ಪ್ರಶಸ್ತಿ ವಿಜೇತ, ಉಡುಪಿಯ ಮಾಸ್ಟರ್ ದೀಪೇಶ್ ದೀಪಕ್ ಶೆಣೈ, ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭ ನಿರಂತರ ವಿದ್ಯುತ್ ಸರಬರಾಜು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ದೀಪೇಶ್ ದೀಪಕ್ ಶೆಣೈ, ಉಡುಪಿಯ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದಾನೆ. ಕಳೆದ ವರ್ಷ ಈತನ ಧೈರ್ಯ ಮತ್ತು ಸಮಯಪ್ರಜ್ಞೆಗೆ ಕರ್ನಾಟಕ ಸರ್ಕಾರದಿಂದ ಅತ್ಯುನ್ನತ ಹೊಯ್ಸಳ ಶೌರ್ಯ ಪ್ರಶಸ್ತಿ ದೊರೆತಿದೆ.

ಸದ್ಯ ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಅನಿಯಮಿತ ಹಾಗೂ ಅಘೋಷಿತ ವಿದ್ಯುತ್ ಕಡಿತಗಳ ಕುರಿತು ಮಾಸ್ಟರ್ ದೀಪೇಶ್ ದೀಪಕ್ ಶೆಣೈ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದಿರುವುದು ವಿಶೇಷ.
"ಮಾರ್ಚ್–ಏಪ್ರಿಲ್ 2026ರಲ್ಲಿ ನಡೆಯಲಿರುವ SSLC ಪರೀಕ್ಷೆಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾನೆ ಮತ್ತು ರಾತ್ರಿ ಹಗಲಿನ ಸಮಯದಲ್ಲಿ ನಿರಂತರ ವಿದ್ಯುತ್ ಒದಗಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ತಾಂತ್ರಿಕ ಪರಿಶೀಲನೆ ಮತ್ತು ದುರಸ್ತಿ ಕ್ರಮಗಳನ್ನು ಕೈಗೊಳ್ಳುವಂತೆ" ವಿದ್ಯಾರ್ಥಿ ದೀಪೇಶ್ ತನ್ನ ಪತ್ರದಲ್ಲಿ ಮನವಿ ಮಾಡಿದ್ದಾನೆ.

ಇದಲ್ಲದೆ ಆನ್ಲೈನ್ ಅಧ್ಯಯನ, ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳು ಹಾಗೂ ಸಾಧನಗಳ ಚಾರ್ಜಿಂಗ್ಗೆ ವಿದ್ಯುತ್ ಕಡಿತದಿಂದ ಅಡಚಣೆ ಉಂಟುಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಲ್ಲಿ ಆತಂಕ ಹೆಚ್ಚುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.
"ನಾನು ಕೂಡ ವಿದ್ಯಾರ್ಥಿಯಾಗಿ ಮತ್ತು ಈ ಸಮುದಾಯದ ಸದಸ್ಯನಾಗಿರುವೆ. ನನಗೊಬ್ಬನಿಗಲ್ಲದೇ ಪರೀಕ್ಷೆಗೆ ತಯಾರಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯಕ್ಕಾಗಿ ಈ ಮನವಿ ಸಲ್ಲಿಸಿರುವೆ. ಸಿಎಂ ತಕ್ಷಣ ಕ್ರಮ ಕ್ರಮಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ" ಎಂದು ದೀಪೇಶ್ ಹೇಳಿದ್ದಾನೆ.

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ದೀಪೇಶ್ ಅವರ ತಂದೆ ದೀಪಕ್ ಶೆಣೈ, ಪ್ರಶಸ್ತಿ ದೊರಕುವುದು ಸಾಧನೆಯಲ್ಲ. ಪ್ರಶಸ್ತಿ ಸಿಕ್ಕಿದ ನಂತರ ನಿರಂತರವಾಗಿ ಹೇಗೆ ಜವಾಬ್ದಾರಿ, ಕರ್ತವ್ಯದ ಮೂಲಕ ಜನರ, ಸಮಾಜದ, ದೇಶದ, ಈ ಭೂಮಿಯ ಋಣ ನಿಭಾಯಿಸಿದ್ದೀರಿ ಎಂಬುದು ಮುಖ್ಯ. ಸಮಾಜದ ಬಗ್ಗೆಯೂ ಕಾಳಜಿಯುತ ಸೇವೆ ಸಲ್ಲಿಸಲು ಮಕ್ಕಳಿಗೆ ಕಲಿಸುವುದು ಪ್ರತಿಯೊಬ್ಬ ತಂದೆ-ತಾಯಿಯರ ಆದ್ಯ ಕರ್ತವ್ಯ. ನಮ್ಮ ಹಿರಿಯ ಸುಪುತ್ರ ನಾಳೆಯ ದಿನ ಏನೇ ಎಷ್ಟೇ ಕಲಿತರೂ ಸಹ, ಸಮಾಜ ಸೇವೆಗಾಗಿ ನಮ್ಮ ಕುಟುಂಬದ ಪದ್ಧತಿಯಂತೆ ತನು-ಮನ-ಧನವನ್ನು ಸಮಾಜಕ್ಕಾಗಿ ಮುಡಿಪಾಗಿರುಸುತ್ತಾನೆ ಎಂಬ ವಿಶ್ವಾಸವಿದೆ. ಮತ್ತು ಅವನ ಸಾಧನೆ ಬಗ್ಗೆ ಹೆಮ್ಮೆಯೂ ಇದೆ. ಕರ್ನಾಟಕ ಸರ್ಕಾರ ಮಕ್ಕಳಿಗಾಗಿ ಕೊಡಮಾಡಿದ ಅತ್ಯುನ್ನತ "ಹೊಯ್ಸಳ ಶೌರ್ಯ ಪ್ರಶಸ್ತಿ" ಅವನಲ್ಲಿ ಸಹಜವಾಗಿ ಶೌರ್ಯತೆಯನ್ನು ಹೆಚ್ಚು ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮನೆಮಂದಿಯ ಜೀವ ಕಾಪಾಡಿದ 10ನೇ ತರಗತಿ ವಿದ್ಯಾರ್ಥಿ! ಸಮಯಪ್ರಜ್ಞೆ, ಧೈರ್ಯಶಾಲಿಗೆ ಒಲಿದುಬಂತು ಹೊಯ್ಸಳ ಶೌರ್ಯ ಪ್ರಶಸ್ತಿ

