ಚಿತ್ರದುರ್ಗದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ನಾಲ್ವರು ಯುವಕರು ಸೇರಿ 6 ಸಾವು, ಕೊಲ್ಲಾಪುರ ಡಿವೈಎಸ್ಪಿ ಪಾರು
ಚಿತ್ರದುರ್ಗದಲ್ಲಿ ಕಳೆದ ರಾತ್ರಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಕೊಲ್ಲಾಪುರದ ಡಿವೈಎಸ್ಪಿ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

Published : January 11, 2026 at 10:32 AM IST
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಶನಿವಾರ ರಾತ್ರಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿದ್ದು, ಒಟ್ಟು ಆರು ಜನ ಅಸುನೀಗಿದ್ದಾರೆ.
ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ಇರುವ ಅಪಘಾತ ವಲಯವಾದ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.
ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದ ನಿವಾಸಿಗಳಾದ ವಿಶ್ವನಾಥ್(22), ನಂಜುಂಡಿ(23), ರಾಹುಲ್(23) ಮತ್ತು ಯಶವಂತ್ (22) ಎಂಬ ಯುವಕರು ಮೃತಪಟ್ಟಿದ್ದಾರೆ. ಮೃತಪಟ್ಟ ಯುವಕರ ಮೃತದೇಹಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದಿದೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾರಿಗೆ ಕಾರು ಡಿಕ್ಕಿ- ಕೊಲ್ಲಾಪುರ ಡಿವೈಎಸ್ಪಿಗೆ ಗಾಯ: ಮಹಾರಾಷ್ಟ್ರದಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಕೊಲ್ಲಾಪುರದ ಡಿವೈಎಸ್ಪಿ ವೈಷ್ಣವಿ ಅವರಿದ್ದ ಇನ್ನೋವಾ ಕಾರು ಲಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ನಡೆದಿದೆ.
ಡಿವೈಎಸ್ಪಿ ವೈಷ್ಣವಿ ಅವರಿಗೆ ಗಾಯಗಳಾಗಿದ್ದು, ಇವರ ತಾಯಿ ಕಮಲಾ ಹರಿಬಾಬು(65), ಚಾಲಕ ರಾಕೇಶ್ (40) ಮೃತರಾಗಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವೈಷ್ಣವಿ ಅವರನ್ನು ಚಿತ್ರದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿವೈಎಸ್ಪಿ ಕುಟುಂಬಸಮೇತ ತಮಿಳುನಾಡು ಪ್ರವಾಸ ಮುಗಿಸಿ ಕೊಲ್ಲಾಪುರಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತ ತಡೆಯಲು ಮಾಸ್ಟರ್ ಪ್ಲಾನ್; ಬರ್ತಿದೆ V2V ಕಮ್ಯುನಿಕೇಶನ್ ಸಿಸ್ಟಮ್: ಏನಿದು?

