ETV Bharat / state

ತುಂಗಭದ್ರಾ ಡ್ಯಾಂನಲ್ಲಿ ಹೂಳಿನ ಜಾತ್ರೆ ಆರಂಭ: 105 ಟ್ರ್ಯಾಕ್ಟರ್‌ಗಳೊಂದಿಗೆ ರೈತರ ಹೋರಾಟ

ತುಂಗಭದ್ರಾ ರೈತ ಸಂಘದ ವತಿಯಿಂದ ಮಂಗಳವಾರ ಎರಡು ದಿನಗಳ ಸಾಂಕೇತಿಕ ‘ಹೂಳಿನ ಜಾತ್ರೆ'ಗೆ ಚಾಲನೆ ನೀಡಲಾಯಿತು.

TUNGABHADRA SILT REMOVAL
ಜಲಾಶಯದ ಹೂಳು ತೆರವಿಗೆ ಆಗ್ರಹಿಸಿ ರೈತರ ಸಾಂಕೇತಿಕ ಹೋರಾಟ (ETV Bharat)
author img

By ETV Bharat Karnataka Team

Published : June 2, 2026 at 3:54 PM IST

2 Min Read
Choose ETV Bharat

ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ಹೂಳನ್ನು ತುರ್ತಾಗಿ ತೆರವುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ತುಂಗಭದ್ರಾ ರೈತ ಸಂಘದ ವತಿಯಿಂದ ಮಂಗಳವಾರ ಎರಡು ದಿನಗಳ ಸಾಂಕೇತಿಕ ‘ಹೂಳಿನ ಜಾತ್ರೆ’ಗೆ ಚಾಲನೆ ನೀಡಲಾಯಿತು.

ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಹೂಳು ತುಂಬಿಕೊಂಡಿರುವ ಕಾರಣ ಕಡಿಮೆಯಾಗುತ್ತಿದೆ ಎಂದು ಆರೋಪಿಸಿರುವ ರೈತರು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ವಿಶೇಷ ಹೋರಾಟ ಹಮ್ಮಿಕೊಂಡಿದ್ದಾರೆ.

ತುಂಗಭದ್ರಾ ಡ್ಯಾಂನಲ್ಲಿ ಹೂಳಿನ ಜಾತ್ರೆ (ETV Bharat)

ಬಸವನಲಿಂಗ ಸ್ವಾಮೀಜಿ, ನಿರಂಜನ ಪ್ರಭುದೇವ ಸ್ವಾಮೀಜಿ, ನಾಗನಾಥ ಸ್ವಾಮೀಜಿ ಹಾಗೂ ಕೊಟ್ಟೂರು ಸ್ವಾಮೀಜಿ ಜಾತ್ರೆಗೆ ಚಾಲನೆ ನೀಡಿದರು. ಸ್ವಾಮೀಜಿಗಳು ಜಲಾಶಯದ ನೀರಿನಲ್ಲಿ ಗಂಗೆ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಧಾರ್ಮಿಕ ಸ್ಪರ್ಶ ನೀಡಿದರು. ಬಳಿಕ ರೈತರು ಹಾಗೂ ಸಂಘದ ಪದಾಧಿಕಾರಿಗಳು ಹೂಳು ತೆರವು ಕಾರ್ಯ ಆರಂಭಿಸಿದರು.

ತುಂಗಭದ್ರಾ ರೈತ ಸಂಘದ ರಾಜ್ಯಾಧ್ಯಕ್ಷ ಪುರುಷೋತ್ತಮ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಸುಮಾರು 105 ಟ್ರ್ಯಾಕ್ಟರ್‌ಗಳನ್ನು ಬಳಸಿ ಜಲಾಶಯದ ಹೂಳು ಸಾಗಿಸುವ ಕಾರ್ಯ ನಡೆಯಿತು. ಜೆಸಿಬಿ ಯಂತ್ರಗಳ ನೆರವಿನಿಂದ ಹೂಳನ್ನು ಟ್ರ್ಯಾಕ್ಟರ್‌ಗಳಿಗೆ ತುಂಬಿಸಿ ಸಾಗಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಪುರುಷೋತ್ತಮ ಗೌಡ ಅವರು, "ಜಲಾಶಯದಲ್ಲಿ ಲಕ್ಷಾಂತರ ಟನ್ ಹೂಳು ಸಂಗ್ರಹವಾಗಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರಿಗೆ ನೀರಿನ ಕೊರತೆ ಎದುರಾಗುವ ಆತಂಕವಿದೆ" ಎಂದು ತಿಳಿಸಿದರು.

"ಹೂಳು ತೆರವುಗೊಳಿಸುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ಸಮಸ್ಯೆಯ ಗಂಭೀರತೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಸಾಂಕೇತಿಕ ಹೂಳಿನ ಜಾತ್ರೆ ಆಯೋಜಿಸಲಾಗಿದೆ" ಎಂದು ಹೇಳಿದರು.

"ತುಂಗಭದ್ರಾ ಡ್ಯಾಂ ರಾಜ್ಯದ ಪ್ರಮುಖ ನೀರಾವರಿ ಮೂಲವಾಗಿದ್ದು, ಅದರ ಸಂಗ್ರಹ ಸಾಮರ್ಥ್ಯ ಉಳಿಸಿಕೊಳ್ಳುವುದು ಅತ್ಯಗತ್ಯ. ಹೀಗಾಗಿ ಹೂಳು ತೆರವು ಕಾರ್ಯವನ್ನು ಸರ್ಕಾರ ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು" ಎಂದು ರೈತ ಮುಖಂಡರು ಒತ್ತಾಯಿಸಿದರು.

ಜಾತ್ರೆಯ ಮೊದಲ ದಿನವೇ ರೈತರು ಉತ್ಸಾಹದಿಂದ ಭಾಗವಹಿಸಿದ್ದು, ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಸಂಘದ ಮುಖಂಡರು ನೀಡಿದ್ದಾರೆ.

ಇವುಗಳನ್ನೂ ಓದಿ: