ಗದಗ: ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ!
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ನಿಧಿ ಪತ್ತೆಯಾಗಿರುವ ಘಟನೆ ಗದಗದ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

Published : January 10, 2026 at 6:08 PM IST
ಗದಗ: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರ ನಿವಾಸಿ ಕಸ್ತೂರವ್ವ ರಿತ್ತಿ ಎಂಬವರ ಮನೆ ಜಾಗದಲ್ಲಿ ಶನಿವಾರ ನಿಧಿ ದೊರೆತಿದೆ. ಹಳೆಯ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕಾಗಿ ಕಾರ್ಮಿಕರು ಭೂಮಿ ಅಗೆಯುತ್ತಿದ್ದಾಗ ತಾಮ್ರದ ಚೆಂಬು ಸಿಕ್ಕಿದ್ದು, ಅದರೊಳಗೆ ಚಿನ್ನದ ಬಳೆಗಳು, ಚೈನ್ಗಳು, ಉಂಗುರಗಳು ಮತ್ತು ಇತರ ಆಭರಣಗಳು ದೊರೆತಿವೆ.
ಈ ಸುದ್ದಿ ತಿಳಿದ ತಕ್ಷಣ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕುತೂಹಲದಿಂದ ಸ್ಥಳಕ್ಕೆ ದೌಡಾಯಿಸಿದ್ದರು. ಇಡೀ ಪ್ರದೇಶವೇ ಜನಸಂದಣಿಯಿಂದ ತುಂಬಿಹೋಗಿತ್ತು.
ಅಪರ ಜಿಲ್ಲಾಧಿಕಾರಿ ದುರುಗೇಶ ರುದ್ರಾಕ್ಷಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಸಹಾಯಕ ಆಯುಕ್ತ ಗಂಗಪ್ಪ (ಅಥವಾ ರಂಗಪ್ಪ), ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಸಂಬಂಧಿತ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ನಿಧಿಯನ್ನು ವಶಕ್ಕೆ ಪಡೆದಿದ್ದಾರೆ.
ಅಪರ ಜಿಲ್ಲಾಧಿಕಾರಿ ದುರುಗೇಶ ರುದ್ರಾಕ್ಷಿ ಅವರು ಪ್ರತಿಕ್ರಿಯಿಸಿ, "ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯ ನಿರ್ದೇಶನದ ಮೇರೆಗೆ ನಿಧಿ ಸಿಕ್ಕ ಸ್ಥಳ ಪರಿಶೀಲನೆಗೆ ಬಂದಿದ್ದೇವೆ. ಕಸ್ತೂರವ್ವ ರಿತ್ತಿ ಹಾಗೂ ಮಗ ಪ್ರಜ್ವಲ್ ರಿತ್ತಿ ಅವರ ಮನೆಗೆ ಪಾಯ ಅಗೆಯುವಾಗ ಒಂದು ಮಡಿಕೆ ಸಿಕ್ಕಿದೆ. ಆ ಮಡಿಕೆಯಲ್ಲಿ ಪ್ರಾಚೀನ ಕಾಲದ ಕಿವಿಯೋಲೆಗಳು, ಉಂಗುರಗಳು, ಕಂಠಿಹಾರಗಳು, ನಾಗನಿಗೆ ಸಂಬಂಧಪಟ್ಟ ವಸ್ತುಗಳೆಲ್ಲವೂ ಸೇರಿ 470 ಗ್ರಾಂ ಚಿನ್ನ ಸಿಕ್ಕಿದೆ. ಈಗಾಗಲೇ ತಹಶೀಲ್ದಾರ್ ಹಾಗೂ ಸಿಪಿ, ಪಿಡಿಒ, ಗ್ರಾಮ ಲೆಕ್ಕಿಗ ಅವರ ನೇತೃತ್ವದಲ್ಲಿ ಪಂಚನಾಮೆ ಮಾಡಿದ್ದೇವೆ. ಇದನ್ನು ನಾವು ನಿಧಿ ನಿಯಮಗಳ ಪ್ರಕಾರ ಖಜಾನೆಗೆ ಒಪ್ಪಿಸುತ್ತೇವೆ. ನಂತರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸರ್ಕಾರಕ್ಕೆ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಈ ಆಭರಣಗಳು ಯಾವ ಕಾಲದ್ದು ಎನ್ನುವುದನ್ನು ಪುರಾತತ್ವ ಇಲಾಖೆಯವರು ಪರಿಶೀಲನೆ ಮಾಡುತ್ತಾರೆ. ಜಿಲ್ಲಾಧಿಕಾರಿ ನಿರ್ದೇಶನ ಹಾಗೂ ಕಾಯಿದೆಯಂತೆ ಕುಟುಂಬಕ್ಕೆ ಪರಿಹಾರ ನೀಡಲಾಗುವುದು" ಎಂದು ತಿಳಿಸಿದರು.
ಬಾಲಕನ ಪ್ರಾಮಾಣಿಕತೆಗೆ ಎಸ್ಪಿ ಮೆಚ್ಚುಗೆ: ಗದಗ ಎಸ್ಪಿ ರೋಹನ್ ಜಗದೀಶ್ ಅವರು ಮಾತನಾಡಿ, "ಬಾಲಕ ಪ್ರಜ್ವಲ್ ರಿತ್ತಿ ಪ್ರಾಮಾಣಿಕವಾಗಿ ನಿಧಿ ಸಿಕ್ಕಿರುವ ಬಗ್ಗೆ ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸ್ ಭದ್ರತೆ ಹಾಗೂ ಕಾನೂನು ಪ್ರಕಾರ ವಿಡಿಯೋ ರೆಕಾರ್ಡ್ ಮಾಡಿ, ದೇವಸ್ಥಾನದ ಬಾಗಿಲು ತೆಗೆದು ನಿಧಿಯನ್ನು ಹೊರತರಲಾಯಿತು. ಬಾಲಕನ ವಯಸ್ಸಿಗೆ ಮೀರಿದ ಪ್ರಾಮಾಣಿಕತೆಯನ್ನು ಮೆಚ್ಚಬೇಕು" ಎಂದರು.
ಲಕ್ಕುಂಡಿ ಕಲ್ಯಾಣ ಚಾಲುಕ್ಯರ ಕಾಲದ ಅದ್ಭುತ ದೇವಾಲಯಗಳು, ಮೆಟ್ಟಿಲು ಬಾವಿಗಳು, ಶಾಸನಗಳು ಮತ್ತು ಇತಿಹಾಸದ ಗುಪ್ತ ರತ್ನಗಳಿಂದ ಕೂಡಿದ ಸ್ಥಳ. ಇತ್ತೀಚೆಗೆ ಇಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹಣೆ, ಉತ್ಖನನ ಕಾರ್ಯಗಳು ನಡೆಯುತ್ತಿದ್ದು, ಇದರ ನಡುವೆ ನಿಧಿ ಸಿಕ್ಕಿರುವುದು ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:

