ಪೋಸ್ಟ್ ಮಾರ್ಟಂ ಟೈಮ್ನಲ್ಲೂ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು: ಮಾಜಿ ಸಚಿವ ಶ್ರೀರಾಮುಲು ಆರೋಪ
ಮಾಜಿ ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ಕಾರ್ಯಕರ್ತನ ಪೋಸ್ಟ್ ಮಾರ್ಟಂ ಕುರಿತು ಮಾತನಾಡಿದ್ದಾರೆ.

Published : January 5, 2026 at 3:35 PM IST
|Updated : January 5, 2026 at 4:09 PM IST
ಬಳ್ಳಾರಿ: ರಾಜಶೇಖರ್ ಎಂಬ ಹುಡುಗನ ಪೋಸ್ಟ್ ಮಾರ್ಟಂ ಒಂದೇ ಬಾರಿ ಮಾಡಲಿಲ್ಲ. ಮೂರರಿಂದ ನಾಲ್ಕು ಬಾರಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ. ಒಮ್ಮೆ ಪೋಸ್ಟ್ ಮಾರ್ಟಂ ಮಾಡುವಾಗ ಷಡ್ಯಂತ್ರ ಮಾಡಿ ಅದನ್ನು ಹಾಗೆಯೇ ಮುಚ್ಚಿಹಾಕಬೇಕು ಎಂದು ಪ್ರಯತ್ನಿಸಿದ್ದಾರೆ. ಆ ಗುಂಡನ್ನು ಹೊರತೆಗೆಯಲಾರದಂತೆ ಅವರ ಮೇಲೆಯೇ ಹಾಕಬಹುದು ಎಂದು ಪ್ರಯತ್ನವನ್ನೂ ಕೂಡಾ ಮಾಡಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಪೋಸ್ಟ್ ಮಾರ್ಟಂ ಮಾಡಿದ ವೇಳೆ ಆ ಗುಂಡು ಸಿಕ್ಕಿಲ್ಲ. ಆಗ ಹಾಗೆಯೇ ಹೋಗಿ ಅಂತ್ಯ ಸಂಸ್ಕಾರ ಮಾಡುವ ಪ್ರಯತ್ನ ನಡೆಸಿದ್ದಾರೆ. ಬಹಳ ಪೋರ್ಸ್ ಆಗಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ. ಆದರೆ, ಅವರ ಪೋರ್ಸ್ನ್ನು ಅವರ ಪಾರ್ಟಿಯಲ್ಲಿರುವ ಬಹಳಷ್ಟು ಹಿರಿಯ ನಾಯಕರು ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ಇದನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ ಸಮಯದಲ್ಲಿ ಇದು ಆಗಲ್ಲ ಎಂದು ಎಲ್ಲ ಹಿರಿಯ ಅಧಿಕಾರಿಗಳು, ಐಜಿ ಸಾಹೇಬರು, ಇಂಟಲಿಜೆನ್ಸ್ನವರು ಹಾಗೂ ನಮ್ಮ ಪೊಲೀಸರು ಸೇರಿಕೊಂಡು ಮತ್ತೆ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ.
ಬಹಳಷ್ಟು ರಾಜಕಾರಣಿಗಳು ಸೇರಿಕೊಂಡು ಆ ಗುಂಡನ್ನು ಹೊರತೆಗೆಯದಂತೆ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅವರ ಸರ್ಕಾರದಲ್ಲಿ ಶಾಸಕರಿರುವುದರಿಂದ ಸಕಾರದ ಮೇಲೆಯೇ ನಾವು ಆರೋಪ ಮಾಡಬೇಕಾಗುತ್ತದೆ. ಭರತ್ ರೆಡ್ಡಿಯವರೇ ಈ ಗೊಂದಲವನ್ನು ಪ್ರಾರಂಭ ಮಾಡಿರುವುದು. ಅವರ ಅಂಗರಕ್ಷಕರಿಂದ ಗುಂಡು ಹಾರಿರುವುದು. ಅದರಿಂದಾಗಿ ಆ ಅಮಾಯಕ ಹುಡುಗ ತೀರಿಕೊಂಡಿದ್ದಾನೆ ಎಂದಿದ್ದಾರೆ.
ಘಟನೆಯ ನಂತರ ಅವರು ಮೊದಲು ಏನೆಂದು ಹೇಳಿಕೆ ಕೊಟ್ಟರು?. ನಮಗೂ ಅದಕ್ಕೂ ಸಂಬಂಧವಿಲ್ಲ. ಬಿಜೆಪಿಯವರೇ ಗುಂಡು ಹಾರಿಸಿದ್ದಾರೆ ಎಂದಿದ್ದಾರೆ. ಅಲ್ಲದೇ, ಪೋಸ್ಟ್ ಮಾರ್ಟಂ ಟೈಮ್ನಲ್ಲೂ ಇದನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಆಗ ಅಲ್ಲಿದ್ದ ಪ್ರಾಮಾಣಿಕ ಅಧಿಕಾರಿಗಳು ಇದಕ್ಕೆ ಒಪ್ಪದೇ ಪುನಃ ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಿ ಗುಂಡನ್ನು ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ಕಡೆಯವರು ಕಟ್ಟಿಗೆ ಹಾಗೂ ಕಲ್ಲುಗಳನ್ನು ತಂದು ಇರಿಸಿಕೊಂಡಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮನುಷ್ಯ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾನೆ ಎಂದರೆ ನಾವು ಏನು ಮಾಡಲು ಸಾಧ್ಯ ಆಗುತ್ತೆ. ಜನಾರ್ದನ ರೆಡ್ಡಿಯವರು ನಮ್ಮ ಮನೆ ಬಳಿ ಬರುವರೆಗೂ ನಮಗೆ ಯಾವುದೇ ಸೂಚನೆ ಇರಲ್ಲಿಲ್ಲ ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿಯವರ ಮನೆ ಬಳಿ ಅಷ್ಟೊಂದು ಕಟ್ಟಿಗೆಗಳು ಹೇಗೆ ಬಂದವು? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಸೆಕ್ಯೂರಿಟಿಯವರ ಸಮೇತ, ಡಿಎಸ್ಪಿ ಸಾಹೇಬರ ಸಮ್ಮುಖದಲ್ಲಿ ಅವರು ಎಲ್ಲರೂ ಇಲ್ಲಿ ಸೇರಿಕೊಂಡಿದ್ದರು. ಈ ಸ್ಪಾಟ್ನಲ್ಲಿ ಅವರು ಇದ್ದರು. ಅವರ ಕೈಯಲ್ಲಿ ಬಡಿಗೆ, ಪೆಟ್ರೋಲ್ ಬಾಂಬ್ಸ್ ಇದ್ದವು. ಮಚ್ಚು ಇದ್ದವು. ಸಾಕಷ್ಟು ಗುಂಡಾಗಳನ್ನು ಕರೆಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬಳ್ಳಾರಿ ದೊಂಬಿ : ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ : ಬಳ್ಳಾರಿಯಲ್ಲಿ ಗುಂಡಿನ ಘರ್ಷಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಸೋಮವಾರ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ, ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಿಂದ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದೆ. ಘಟನೆಯ ದಿನ ಸ್ಥಳದಲ್ಲಿ ಹಾರಿದ ಗುಂಡು, ಅದರ ಲೋಹ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಜನವರಿ 1 ರಂದು ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರೇ ದೊಂಬಿ ನಡೆದಿತ್ತು. ಅದರಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದರು.
ಇದನ್ನೂ ಓದಿ : ಹತ್ಯೆ ಸಂಚು ಆರೋಪ: 'Z' ಶ್ರೇಣಿಯ ಭದ್ರತೆ ಕೋರಿ ಜನಾರ್ದನ್ ರೆಡ್ಡಿಯಿಂದ ಸಿಎಂ, ಅಮಿತ್ ಶಾ, ಪರಮೇಶ್ವರ್, ಡಿಜಿಐಜಿಪಿಗೆ ಪತ್ರ

