ETV Bharat / state

'ಗೌರಿ' ಧಾರವಾಹಿ ನಟಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

television-actress-dies-in-bengaluru
ಕಿರುತೆರೆ ನಟಿ ನಂದಿನಿ (Instagram Post)
author img

By ETV Bharat Karnataka Team

Published : December 30, 2025 at 7:35 AM IST

2 Min Read
Choose ETV Bharat

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಕಿರುತರೆ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.28ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ (26) ಆತ್ಮಹತ್ಯೆ ಮಾಡಿಕೊಂಡವರು.

ಮೈಲಸಂದ್ರದ ಇನ್ಸ್ಟಾ ಲಿವಿಂಗ್ ಪಿಜಿಯಲ್ಲಿ ಇವರು ವಾಸವಾಗಿದ್ದರು. ತಾಯಿ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಂದಿನಿ ಖಾಸಗಿ ಕನ್ನಡ ವಾಹಿನಿಯೊಂದರಲ್ಲಿ 'ಗೌರಿ' ಧಾರವಾಹಿ ಹಾಗೂ ನೆರೆಯ ತಮಿಳು ಭಾಷೆಯ ಸೀರಿಯಲ್​ನಲ್ಲಿ ನಟಿಸಿದ್ದರು‌.

ನಟನಾ ಕ್ಷೇತ್ರದಲ್ಲಿ ತೀವ್ರ ಒಲವಿದ್ದ ನಂದಿನಿ, ಸಾವಿಗೆ ಮುನ್ನ ಡೈರಿಯಲ್ಲಿ ಬರೆದ ಡೆತ್ ನೋಟ್ ಪತ್ತೆಯಾಗಿದೆ. "ನನಗೆ ಸರ್ಕಾರಿ ಕೆಲಸ ಮಾಡಲು ಇಷ್ಟವಿಲ್ಲ, ಆ್ಯಕ್ಟಿಂಗ್​ ಇಷ್ಟ. ಮನೆಯಲ್ಲಿ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ" ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಂದಿ‌ನಿಯ ತಂದೆ ಎಸ್.ಮಹಾಬಲೇಶ್ವರ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ 2021ರಲ್ಲಿ ಮೃತಪಟ್ಟಿದ್ದರು. 2023ರಲ್ಲಿ ಮಗಳು ನಂದಿನಿಗೆ ಅನುಕಂಪ ಆಧಾರದ ಮೇಲೆ ತಾಲೂಕು ಕಚೇರಿಯಲ್ಲಿ ಕೆಲಸ ನೀಡಲಾಗಿತ್ತು‌. ಆದರೆ ನಂದಿನಿ ಕೆಲಸಕ್ಕೆ ಹೋಗದೇ, ತನಗೆ ನಟನಾ ಕ್ಷೇತ್ರದಲ್ಲಿ ಆಸಕ್ತಿ ಇದೆ. ನನ್ನಿಷ್ಟದಂತೆ ಬದುಕುತ್ತೇನೆಂದು ಮನೆಯಲ್ಲಿ ಹಠ ಮಾಡಿ, ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸವಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2018ರಲ್ಲಿ ಬಳ್ಳಾರಿಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ನಂತರ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಆರ್.ಆರ್.ಇನ್ಸ್ಟಿಟ್ಯೂಟ್​​ನಲ್ಲಿ ಬಿ.ಇ ವಿದ್ಯಾಭ್ಯಾಸಕ್ಕೆ ಸೇರಿಕೊಂಡಿದ್ದರು. ನಂತರ ಆ್ಯಕ್ಟಿಂಗ್‌ನಲ್ಲಿ ಇಷ್ಟವಿದೆ ಎಂದು ಹೇಳಿ, ಕಾಲೇಜಿಗೆ ಸರಿಯಾಗಿ ಹೋಗದೆ ರಾಜರಾಜೇಶ್ವರಿ ನಗರದಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದಿದ್ದರು. 2019ರಿಂದ ಕನ್ನಡದ ವಿವಿಧ ಧಾರಾವಾಹಿಗಳಲ್ಲಿ ನಟಿಸಿದ್ದರು. ಈ ವೇಳೆ ರಾಜರಾಜೇಶ್ವರಿನಗರದ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. 2025ರ ಆಗಸ್ಟ್ ತಿಂಗಳಲ್ಲಿ ಕೆಂಗೇರಿಯ ಮೈಲಸಂದ್ರದ ಇನ್ಸ್ಟಾ ಲಿವಿಂಗ್ ಪಿಜಿಗೆ ಬಂದು ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಪರಿಹಾರವಲ್ಲ: ನೀವು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ, ಇಲ್ಲವೇ ನಿಮ್ಮ ಸ್ನೇಹಿತರಿಗೆ ಈ ಬಗ್ಗೆ ಸಮಸ್ಯೆಗಳಿದ್ದರೆ ಅಥವಾ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ನಿಮಗೆ ಸಲಹೆ ನೀಡಲು ಯಾವಾಗಲೂ, ಯಾರಾದರೂ ಇರುತ್ತಾರೆ. ಸ್ನೇಹ ಫೌಂಡೇಶನ್ - 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್​ ಐಕಾಲ್ ಸಹಾಯವಾಣಿ ಸಂಖ್ಯೆ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಲಭ್ಯವಿದೆ)ಕ್ಕೆ ಕರೆ ಮಾಡಿ. ಆತುರದ ನಿರ್ಧಾರ ತೆಗೆದುಕೊಂಡು ಜೀವ ಕಳೆದುಕೊಳ್ಳಬೇಡಿ.

ಇದನ್ನೂ ಓದಿ: ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ಮಹಾರಾಷ್ಟ್ರ ಪೊಲೀಸ್​ ದಾಳಿ ಪ್ರಕರಣ: ಮೂವರು ಇನ್ಸ್​​ಪೆಕ್ಟರ್​ಗಳು ಸಸ್ಪೆಂಡ್​