ಬಳ್ಳಾರಿ ನೂತನ ಎಸ್ಪಿಯಾಗಿ ಸುಮನ್ ಪನ್ನೇಕರ್ ಅಧಿಕಾರ ಸ್ವೀಕಾರ
ಬಳ್ಳಾರಿಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಸುಮನ್ ಪನ್ನೇಕರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Published : January 8, 2026 at 1:17 PM IST
ಬಳ್ಳಾರಿ: ನಿನ್ನೆ (ಬುಧವಾರ) ಬಳ್ಳಾರಿ ವಲಯ ನೂತನ ಐಜಿಯಾಗಿ ಡಾ.ಹರ್ಷ ಪಿ.ಎಸ್. ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಬಳ್ಳಾರಿ ಜಿಲ್ಲೆಗೆ ಹೊಸ ಎಸ್ಪಿಯಾಗಿ ಸುಮನ್ ಪನ್ನೇಕರ್ ಆಗಮಿಸಿದ್ದಾರೆ.
ನೂತನ ಎಸ್ಪಿಗೆ ಪೊಲೀಸ್ ಸಿಬ್ಬಂದಿ ಶುಭಾಶಯ ತಿಳಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
ಬಿಜೆಪಿ ನಾಯಕರಿಗೆ ನೋಟಿಸ್: ಬಳ್ಳಾರಿಯಲ್ಲಿ ಬ್ಯಾನರ್, ಶೂಟೌಟ್ ಗಲಭೆ ಪ್ರಕರಣ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ ಸೇರಿದಂತೆ 33 ಜನರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಗಲಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಯ 26 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಮತ್ತೆ ಬಿಜೆಪಿಯ 33 ಜನರಿಗೆ ನೋಟಿಸ್ ನೀಡಲಾಗಿದೆ. ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು, ರೆಡ್ಡಿ ಅವರ ಆಪ್ತ ಅಲಿಖಾನ್ ಸೇರಿದಂತೆ 33 ಜನರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಘಟನೆಯ ಹಿನ್ನೆಲೆ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಇತ್ತೀಚೆಗೆ ಗಲಾಟೆ ನಡೆದಿತ್ತು. ಗುಂಡು ತಗುಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದರು. ಜನಾರ್ದನ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ದೂರು-ಪ್ರತಿದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಕಲ್ಲು ತೂರಾಟ ಮತ್ತು ಗುಂಡೇಟಿನಿಂದ ಓರ್ವ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕರ್ತವ್ಯ ಲೋಪ ಆರೋಪದಡಿ ಐಪಿಎಸ್ ಅಧಿಕಾರಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜುರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿತ್ತು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜುರು ಅಮಾನತಿನ ಬಳಿಕ ಬಳ್ಳಾರಿ ವಲಯದ ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದ್ದು, ಬಳ್ಳಾರಿ ವಲಯದ ನೂತನ ಐಜಿಪಿಯಾಗಿ ಡಾ. ಪಿಎಸ್ ಹರ್ಷ ಅವರನ್ನು ನೇಮಕ ಮಾಡಲಾಗಿತ್ತು.
ಇದನ್ನೂ ಓದಿ: ಬಳ್ಳಾರಿ ಘರ್ಷಣೆ: ಭದ್ರತೆಗೆ ಪಕ್ಕದ ಜಿಲ್ಲೆಗಳಿಂದ ಪೊಲೀಸರ ಆಗಮನ, ಬಿಗಿ ಬಂದೋಬಸ್ತ್

