ಹಾಸನ: ಅರ್ಜುನ ಆನೆಯ ಸ್ಮಾರಕ ಅನಾವರಣಗೊಳಿಸಿದ ಸಚಿವ ಖಂಡ್ರೆ
ಅರ್ಜುನ ಆನೆಯ 650 ಕೆ.ಜಿ. ತೂಕದ ಸುಂದರ ಸ್ಮಾರಕವನ್ನು ನಿನ್ನೆ ಸಂಜೆ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಉದ್ಘಾಟಿಸಿದರು.

Published : May 7, 2026 at 2:18 PM IST
ಹಾಸನ: ಮೈಸೂರು ದಸರಾ ಅಂಬಾರಿಯನ್ನು 8 ಬಾರಿ ಹೊತ್ತಿದ್ದ ಅರ್ಜುನ ನಮ್ಮ ಹೆಮ್ಮೆ. ಆತನನ್ನು ನೆನೆದಾಗ ನಮಗೆಲ್ಲ ದುಃಖವಾಗುತ್ತದೆ. ಸರ್ಕಾರಕ್ಕೆ ಸೇವೆ ಸಲ್ಲಿಸಿ, ರಾಜ್ಯದ 7 ಕೋಟಿ ಜನರ ಮನ ಗೆದ್ದಿದ್ದಾನೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಹೇಳಿದರು.
ಸಕಲೇಶಪುರ ತಾಲೂಕಿನ ಯಸಳೂರಿನ ದಬ್ಬಳಿಕಟ್ಟೆ ನೆಡುತೋಪಿನಲ್ಲಿ ನಿರ್ಮಿಸಿರುವ ಹುತಾತ್ಮ ಅರ್ಜುನ ಆನೆಯ 650 ಕೆ.ಜಿ ತೂಕದ ಸುಂದರ ಸ್ಮಾರಕವನ್ನು ಬುಧವಾರ ಸಂಜೆ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಪ್ರವಾಸಿಗರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹುತಾತ್ಮ ಅರ್ಜುನನ ಸ್ಮಾರಕ ಸ್ಥಳಕ್ಕೆ ಹೋಗಲು ಈಗ ನಿರ್ಮಿಸಿರುವ ಕಚ್ಚಾ ರಸ್ತೆಯಲ್ಲಿ ಪಕ್ಕಾ ರಸ್ತೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಸ್ಮಾರಕ ಪ್ರದೇಶ ಆನೆ ಸಂಚರಿಸುವ ಸ್ಥಳವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸುರಕ್ಷತೆಯೂ ನಮಗೆ ಪ್ರಥಮ ಆದ್ಯತೆಯಾಗಿದೆ ಎಂದರು.
ಸತತವಾಗಿ ಎಂಟು ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜ ಗಾಂಭೀರ್ಯದಿಂದ ಅಂಬಾರಿ ಹೊತ್ತ ಅರ್ಜುನ ಬಹಳ ಹೆಸರುವಾಸಿಯಾಗಿದ್ದ. ಆತನನ್ನು ನೆನೆದರೆ ದುಃಖವಾಗುತ್ತದೆ. ಬೌದ್ಧಿಕವಾಗಿ ಅರ್ಜುನ ನಮ್ಮೊಂದಿಗೆ ಇಲ್ಲ. ಆದರೆ, ಆತ ಎಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾನೆ. ಪುಂಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ವೀರ ಮರಣ ಹೊಂದಿದ್ದು ದುಃಖದ ಸಂಗತಿ ಎಂದು ತಿಳಿಸಿದರು.
ಅರ್ಜುನ ಆನೆಯ ನೆನಪು: ಅರ್ಜುನ ಅರಣ್ಯ ಇಲಾಖೆಯ ನೆಚ್ಚಿನ ಆನೆಯಾಗಿತ್ತು. ಯಾವುದೇ ಪುಂಡಾನೆ ಸೆರೆ ಕಾರ್ಯಾಚರಣೆ ಅಥವಾ ಹುಲಿ ಸೆರೆ ಕಾರ್ಯಾಚರಣೆ ಎಂದೊಡನೆ ಮೊದಲು ನೆನಪಿಗೆ ಬರುತ್ತಿದ್ದವನೇ ಅರ್ಜುನ. ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು. ಕಾರ್ಯಾಚರಣೆಯ ವೇಳೆ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವಾಗ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವ ಸಂದರ್ಭ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು. ಆಗ ಉಳಿದ ಮೂರು ಸಾಕಾನೆಗಳು ಓಡಿ ಹೋಗಿದ್ದವು. ಈ ಘಟನೆಯಲ್ಲಿ ಅರ್ಜುನ ಆನೆ ಒಂಟಿಸಲಗದ ಜೊತೆ ಒಂಟಿಯಾಗಿ ಹೋರಾಡಿತ್ತು. ಒಂಟಿಸಲಗ ದಂತದಿಂದ ತಿವಿದ ಕಾರಣ 2023ರ ಡಿಸೆಂಬರ್ 4ರಂದು ಅರ್ಜುನ ಸಾವನ್ನಪ್ಪಿತ್ತು.

ಅರ್ಜುನ ಆನೆ 1960ರಲ್ಲಿ ಜನಿಸಿತ್ತು. 1968ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು. ಆ ಆನೆ ಪಳಗಿದ ನಂತರ 1990ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಸಮಯದಲ್ಲಿ ಮೆರವಣಿಗೆಗಳನ್ನು ಒಳಗೊಂಡ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು. ದ್ರೋಣ, ಬಲರಾಮ ಆನೆಗಳು ಅನಾರೋಗ್ಯಕ್ಕೆ ಒಳಗಾದ ನಂತರ ಅರ್ಜುನನಿಗೆ ಅಂಬಾರಿ ಹೊರಲು ಅವಕಾಶ ನೀಡಲಾಗಿತ್ತು. 2012ರಿಂದ 2019ರವರೆಗೆ ಸುಮಾರು 8 ವರ್ಷಗಳ ಕಾಲ ಅರ್ಜುನ ಅಂಬಾರಿ ಹೊತ್ತಿದ್ದಾನೆ.
ಮೈಸೂರು ದಸರಾ 2023ರ ಜಂಬೂ ಸವಾರಿಯ ಆನೆಗಳ ತೂಕದಲ್ಲಿ ಅರ್ಜುನ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದು, 5,600 ಕೆ.ಜಿ. ತೂಕ ಇತ್ತು. ಸಾಕಷ್ಟು ಧೈರ್ಯ ಹಾಗೂ ತೂಕದಲ್ಲಿ ಹೆಚ್ಚಿದ್ದ ಈ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗಳಿಗೆ ಕರೆದೊಯ್ಯುತ್ತಿದ್ದರು. ಸಾಕಷ್ಟು ಪುಂಡಾನೆಗಳನ್ನು ಅರ್ಜುನ ಸೆರೆಹಿಡಿಯಲು ನೆರವಾಗುತ್ತಿದ್ದ.
ಅಭಿಮಾನಿಗಳ ಆಗ್ರಹಕ್ಕೆ ಮಣಿದ ಸರ್ಕಾರ: ಒಂಟಿ ಸಲಗದೊಂದಿಗೆ ಕಾದಾಡಿ ಮೃತಪಟ್ಟ ಅರ್ಜುನನ ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ಸ್ಥಳೀಯರು ಮತ್ತು ಅಭಿಮಾನಿಗಳು ಆಗ್ರಹಿಸಿದ್ದರು. ಅದರಂತೆ, 2024ರಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ಬಜೆಟ್ನಲ್ಲಿ ಘೋಷಿಸಲಾಗಿತ್ತು.
ಇದನ್ನೂ ಓದಿ:

