ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ: ಅಂತಿಮ ದರ್ಶನ ಪಡೆದ ಸಿಎಂ ಡಿಕೆಶಿ, ಹೆಚ್ಡಿಕೆ, ಖಂಡ್ರೆ
ಕನಕಪುರದಲ್ಲಿರುವ ಪುರಾಣ ಪ್ರಸಿದ್ಧ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

Published : June 23, 2026 at 2:43 PM IST
ರಾಮನಗರ: ಕನಕಪುರ ದೇಗುಲ ಮಠದ ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.
"ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಈ ಮಾತಿಗೆ ಅನ್ವರ್ಥದಂತೆ ಶರಣ ತತ್ವದ ಏಳಿಗೆಗೆ ದುಡಿದವರು ಮುಮ್ಮಡಿ ನಿರ್ವಾಣ ಮಹಾಸ್ವಾಮಿಯವರು. ಪರಮ ಪೂಜ್ಯರ ಅಗಲಿಕೆ ಅತ್ಯಂತ ನೋವಿನ ಸಂಗತಿ" ಎಂದು ಸಿಎಂ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದರು.
"ಜನನ, ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ. ಶರಣರ ಗುಣವನ್ನು ಮರಣದಲ್ಲಿ ಕಾಣಬೇಕು ಎಂದು ವಚನಕಾರರು ಹೇಳಿದ್ದಾರೆ. ಪೂಜ್ಯ ಮಹಾ ಸ್ವಾಮೀಜಿಯವರು ಕನಕಪುರದ ದೇಗುಲ ಮಠದ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗ ಹಾಗೂ ಕರ್ನಾಟಕದಾದ್ಯಂತ ಶರಣರ, ಬಸವಣ್ಣನವರ ತತ್ವ, ಆದರ್ಶಗಳನ್ನು ಪಸರಿಸಿದವರು. ಆಧ್ಯಾತ್ಮದ ಅರಿವು ಮೂಡಿಸಿದವರು" ಎಂದು ಕೊಂಡಾಡಿದರು.
"ಸುಮಾರು 700 ವರ್ಷಗಳ ಇತಿಹಾಸವಿರುವ ಶ್ರೀಮಠದ ಪೀಠಾಧ್ಯಕ್ಷರಾಗಿ ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಮಠದ ಭಕ್ತಾಧಿಗಳು ಹಾಗೂ ಎಲ್ಲಾ ಜನರಿಗೂ ಮನವರಿಕೆ ಮಾಡಿದವರು. ಮಠದಲ್ಲಿ ತ್ರಿವಿದ ದಾಸೋಹ ಆರಂಭಿಸಿ ಅನ್ನ, ಅಕ್ಷರ, ಆಶ್ರಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವುದರಲ್ಲಿ ಶ್ರೀಗಳ ಪಾತ್ರ ತುಂಬಾ ದೊಡ್ಡದು. ಆಯುಷ್ಯ ತೀರಲು ಮರಣ ಎನ್ನುವುದು ನಮ್ಮಂತಹ ಸಾಮಾನ್ಯ ಮನುಷ್ಯರಿಗೆ. ಶ್ರೀಗಳು ದೇಗುಲ ಮಠದ ಮೂಲಕ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಆ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ" ಎಂದು ಸ್ಮರಿಸಿದರು.
"ಬೆಂಗಳೂರು ದಕ್ಷಿಣ ಜಿಲ್ಲೆಯ ಬಹುದೊಡ್ಡ ಆಧ್ಯಾತ್ಮಿಕ ಕೊಂಡಿ ಕಳಚಿ ಹೋಗಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಶ್ರೀಗಳು ನೀಡುತ್ತಿದ್ದ ಅನೇಕ ಸಲಹೆಗಳು ನಮ್ಮ ಅರಿವನ್ನು ಜಾಗೃತಗೊಳಿಸಿದ್ದವು. ಇಂತಹ ಹಿರಿಯರ ಅಗಲಿಕೆ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಪರಮಪೂಜ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಮಠದ ಭಕ್ತಾದಿಗಳಿಗೆ ಆ ದೇವರು ನೀಡಲಿ. ಶ್ರೀಗಳ ಆತ್ಮಕ್ಕೆ ಶಾಂತಿ ಲಭಿಸಲಿ" ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: ಮನುಷ್ಯನ ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ: ಡಾ.ವೀರಸೋಮೇಶ್ವರ ಸ್ವಾಮೀಜಿ

