ಜೋಗ ಜಲಪಾತ ವೀಕ್ಷಣೆಗೆ ವಾಯವ್ಯ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ: ದರ, ಸಮಯದ ಮಾಹಿತಿ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ದಿನಗಳಂದು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿದ್ದು, ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.

Published : July 6, 2026 at 1:30 PM IST
ಹುಬ್ಬಳ್ಳಿ: "ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಾರಾಂತ್ಯ ಹಾಗೂ ಸಾರ್ವಜನಿಕ ರಜಾ ದಿನಗಳಂದು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ" ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಮುಂಗಾರು ಆರಂಭವಾಗಿದ್ದು ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ನದಿ, ಹಳ್ಳ-ಕೊಳ್ಳ ಇತ್ಯಾದಿಗಳಲ್ಲಿ ಜಲಧಾರೆ ಸೃಷ್ಟಿಯಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡು ಮತ್ತೆ ಜೀವಕಳೆಯಿಂದ ಕಣ್ಮನ ಸೆಳೆಯುತ್ತಿದೆ. ಅಪರೂಪದ ದೃಶ್ಯ ವೈಭವದ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಸಾರ್ವಜನಿಕರ ಬೇಡಿಕೆಯ ಮೇರೆಗೆ ಪ್ರವಾಸಿಗರ ಅನುಕೂಲಕ್ಕಾಗಿ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿಯಿಂದ ಜೋಗಫಾಲ್ಸ್ಗೆ ನೇರವಾಗಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತವೆ. ಹೋಗುವಾಗ ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗ್ ಫಾಲ್ಸ್ ನಲ್ಲಿ ಜಲಪಾತ ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಣೆ, ಊಟೋಪಚಾರ ಹಾಗೂ ವಿಶ್ರಾಂತಿಗಾಗಿ ಸಾಕಷ್ಟು ಸಮಯಾವಕಾಶ ಕಲ್ಪಿಸಲಾಗಿದೆ.
ವೇಳಾಪಟ್ಟಿ:
ವೋಲ್ವೋ ಎಸಿ ಬಸ್:
- ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ 8:00 ಗಂಟೆಗೆ ಹೊರಡುತ್ತದೆ.
- ಜೋಗಫಾಲ್ಸ್ಗೆ ಮಧ್ಯಾಹ್ನ 1:30ಕ್ಕೆ ತಲುಪುತ್ತದೆ.
- ಜೋಗಫಾಲ್ಸ್ನಿಂದ ಸಂಜೆ 4-00 ಗಂಟೆಗೆ ಹೊರಡುತ್ತದೆ.
- ಹುಬ್ಬಳ್ಳಿಗೆ ರಾತ್ರಿ 9-00ಕ್ಕೆ ಆಗಮಿಸುತ್ತದೆ.
ಪ್ರಯಾಣದರ: ಹೋಗುವ ಹಾಗೂ ಹಿಂದಿರುಗುವ ಪ್ರಯಾಣ ಸೇರಿದಂತೆ ಒಟ್ಟು ರೂ.700 ನಿಗದಿಪಡಿಸಲಾಗಿದೆ.
ವೇಗದೂತ ಬಸ್:
- ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಿಗ್ಗೆ 7:30ಕ್ಕೆ ಹೊರಡುತ್ತದೆ.
- ಜೋಗಫಾಲ್ಸ್ಗೆ ಮಧ್ಯಾಹ್ನ 1:30ಕ್ಕೆ ತಲುಪುತ್ತದೆ.
- ಜೋಗಫಾಲ್ಸ್ನಿಂದ ಸಂಜೆ 4:00 ಗಂಟೆಗೆ ಹೊರಡುತ್ತದೆ.
- ಹುಬ್ಬಳ್ಳಿಗೆ ರಾತ್ರಿ 9:30ಕ್ಕೆ ಆಗಮಿಸುತ್ತದೆ.
ಪ್ರಯಾಣದರ: ಹೋಗುವ ಹಾಗೂ ಹಿಂದಿರುಗುವ ಪ್ರಯಾಣ ಸೇರಿದಂತೆ ಒಟ್ಟು ರೂ.500 ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್: ರಿಯಾಯಿತಿ: www.ksrtc.in ವೆಬ್ ಸೈಟ್, KSRTC Mobile App ಮೂಲಕ ಹಾಗೂ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಒಂದೇ ಟಿಕೆಟ್ನಲ್ಲಿ 4 ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಇದನ್ನೂ ಓದಿ: ಗಂಗಾವತಿಯಲ್ಲಿ ಮೊದಲ ಸ್ಯಾಟಲೈಟ್ ಬಸ್ ನಿಲ್ದಾಣ, 'ಕಿಷ್ಕಿಂಧಾ' ಎಂದು ಹೆಸರಿಡಲು ತೀರ್ಮಾನ: ಶಾಸಕ ಜನಾರ್ದನರೆಡ್ಡಿ

