ತರಬೇತಿ ವೇಳೆ ಮಿಸ್ ಫೈರ್ ಆಗಿ ಹಾವೇರಿ ಯೋಧ ಸಾವು: ಸ್ವಗ್ರಾಮಕ್ಕೆ ಆಗಮಿಸಿದ ಪಾರ್ಥೀವ ಶರೀರ
10 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾಗಿರುವ ಯಶೋಧರ ಅವರಿಗೆ ಇನ್ನು ಎರಡು ತಿಂಗಳಲ್ಲಿ ಮದುವೆ ದಿನಾಂಕ ನಿಶ್ಚಯವಾಗಿತ್ತು.

Published : July 4, 2026 at 12:08 PM IST
ಹಾವೇರಿ: ನೌಕಾದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಉಪ್ಪುಣಸಿ ಗ್ರಾಮದ ಯೋಧ ತರಬೇತಿ ಅವಧಿಯಲ್ಲಿ ಮಿಸ್ ಫೈರ್ ಆಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 29 ವರ್ಷದ ಯಶೋಧರ ದುರಗಪ್ಪ ವಡ್ಡರ ಮೃತ ಸೈನಿಕ.
2016ರ ಬ್ಯಾಚ್ನ ನೌಕಾದಳ ಸೈನಿಕನಾಗಿ ಯಶೋಧರ ಅವರು ಸೇವೆ ಸಲ್ಲಿಸುತ್ತಿದ್ದರು. ಜುಲೈ 1 ರಂದು ಕೇರಳದ ಕೊಚ್ಚಿಯಲ್ಲಿ ತರಬೇತಿ ಅವಧಿಯಲ್ಲಿ ಮಿಸ್ ಫೈಯರ್ ಆಗಿ ಯಶೋಧರ ಅವರು ಮೃತರಾಗಿದ್ದಾರೆ. ಇನ್ನು ಎರಡು ತಿಂಗಳಲ್ಲಿ ಯಶೋಧರಾ ಅವರ ಮದುವೆ ದಿನಾಂಕ ನಿಶ್ಚಯವಾಗಿತ್ತು.
ಶನಿವಾರ ಯಶೋಧರ ಅವರ ಪಾರ್ಥೀವ ಶರೀರ ಉಪ್ಪುಣಸಿ ಗ್ರಾಮಕ್ಕೆ ತರಲಾಗಿದೆ. ಯೋಧನ ಅಂತ್ಯಕ್ರಿಯೆಯನ್ನು ಸಕಲ ಸೇನಾ ಗೌರವ ಹಾಗೂ ಸ್ಥಳೀಯ ಸರ್ಕಾರದ ಗೌರವದೊಂದಿಗೆ ಸ್ವಗ್ರಾಮದಲ್ಲಿ ನಡೆಸಲಾಗುತ್ತದೆ. ಅಂತ್ಯಕ್ರಿಯೆ ನಡೆಯುವ ಸ್ಥಳ ಗುರುತಿಸಿ, ಅಂತಿಮ ಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ದೇಶ ಸೇವೆಗೆ ಹೋದ ಗ್ರಾಮದ ಮಗನನ್ನು ಕಳೆದುಕೊಂಡ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ದುಃಖದ ಮಡುವಿನಲ್ಲಿದ್ದಾರೆ. ಉಪ್ಪಣಸಿ ಗ್ರಾಮದಲ್ಲಿ ಇಂದು ಅಂತಿಮ ಸಂಸ್ಕಾರ ಜರುಗಲಿದೆ. 10 ವರ್ಷಗಳ ಕಾಲ ಯಶೋಧರ ಸೈನ್ಯದಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ದೇಹಕ್ಕೆ ಮೂರು ಗುಂಡು ಹೊಕ್ಕ ನಂತರವೂ ಭಯೋತ್ಪಾದಕನ ಹೊಡೆದುರುಳಿಸಿದ್ದ ಯೋಧ: ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ

