ರೋಹಿತ್ ವೇಮುಲಾ ಹಾಗೂ ಮರ್ಯಾದಾ ಹತ್ಯೆ ವಿಧೇಯಕಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ ಸಚಿವ ಸಂಪುಟ ಸಭೆ
ಪ್ರಸ್ತಾವಿತ ಶಾಸನಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ ಮತ್ತು ಕೆಲವು ಅಂಶಗಳಿಗೆ ಗೃಹ ಇಲಾಖೆಯೊಂದಿಗೆ ಹೆಚ್ಚುವರಿ ಸಮಾಲೋಚನೆ ಅಗತ್ಯವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದಾರೆ.

By PTI
Published : February 27, 2026 at 7:32 AM IST
ಬೆಂಗಳೂರು: ಪ್ರಸ್ತಾವಿತ ರೋಹಿತ್ ವೇಮುಲಾ ಮತ್ತು ಮರ್ಯಾದಾ ಹತ್ಯೆ ವಿಧೇಯಕಗಳು ಸೇರಿದಂತೆ ಪ್ರಮುಖ ಶಾಸನಗಳ ಕುರಿತು ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದೀರ್ಥ ಸಮಾಲೋಚನೆ ನಡೆಸಲಾಯಿತು. ಅವುಗಳ ಮಂಡನೆಗೂ ಮುನ್ನ ಆ ಬಗ್ಗೆ ಹೆಚ್ಚಿನ ಸಲಹೆ - ಸೂಚನೆಗಳನ್ನು ಪಡೆದುಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ಪ್ರಸ್ತಾವಿತ ಶಾಸನಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ ಮತ್ತು ಕೆಲವು ಅಂಶಗಳಿಗೆ ಗೃಹ ಇಲಾಖೆಯೊಂದಿಗೆ ಹೆಚ್ಚುವರಿ ಸಮಾಲೋಚನೆ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಮತ್ತು ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ವಿಧೇಯಕ 2026ವನ್ನು ಸಂಪುಟ ಸಭೆಯಲ್ಲಿ ವಿಶೇಷವಾಗಿ ಚರ್ಚಿಸಲಾಯಿತು. ಕೆಲವು ಅಂಶಗಳಿಗೆ ಗೃಹ ಇಲಾಖೆಯ ಅಭಿಪ್ರಾಯದ ಅಗತ್ಯ ಇರುವುದರಿಂದ ಅದನ್ನು ಹಿಂತಿರುಗಿಸಲಾಗಿದೆ ಮತ್ತು ಮುಂದಿನ ಸಚಿವ ಸಂಪುಟ ಸಭೆಯ ಮುಂದೆ ಈ ವಿಧೇಯಕರ ಕರಡನ್ನು ಇಡಲಾಗುವುದು. ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದೆ ವಿಚಾರವಾಗಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) ಶಿಕ್ಷಣ ಮತ್ತು ಘನತೆಯ ಹಕ್ಕು ಮಸೂದೆ 2026 ರ ಕರಡನ್ನು ಸಹ ಸಚಿವ ಸಂಪುಟ ಮುಂದಿಟ್ಟು ಚರ್ಚಿಸಲಾಗಿದೆ ಎಂದು ಅವರು ಹೇಳಿದರು. ರೋಹಿತ್ ವೇಮುಲ ಮಸೂದೆಯ ಕರಡನ್ನು ಇಂದು ಚರ್ಚಿಸಲಾಯಿತು. ಗೃಹ ಇಲಾಖೆಯಿಂದ ಕೆಲವು ಸಲಹೆ - ಸೂಚನೆಗಳನ್ನು ಪಡೆದ ನಂತರ ಅದನ್ನು ಅಂತಿಮಗೊಳಿಸಿ ಮುಂದಿನ ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ರೋಹಿತ್ ವೇಮುಲ ಮಸೂದೆಯು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಇತರ ಹಿಂದುಳಿದ ವರ್ಗಗಳನ್ನು ಸಹ ಸೇರಿಸುತ್ತದೆಯೇ ಎಂದು ಕೇಳಿದಾಗ, ಅದು ಅನುಮೋದಿತ ವಿಧೇಯಕವಾಗಿ ನಿಮ್ಮ ಬಳಿಗೆ ಬಂದಾಗ ನಾವು ಈ ವಿಷಯವನ್ನು ಚರ್ಚಿಸುತ್ತೇವೆ ಎಂದು ಪಾಟೀಲ್ ಹೇಳಿದರು.
ಗೃಹ ಇಲಾಖೆಯ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ರೋಹಿತ್ ವೇಮುಲ ಮತ್ತು ಮರ್ಯಾದಾ ಹತ್ಯೆ ವಿಧೇಯಕ ಎರಡನ್ನೂ ಮತ್ತೆ ಸಂಪುಟದ ಮುಂದೆ ತರಲಾಗುವುದು ಎಂದು ಪಾಟೀಲ್ ಪುನರುಚ್ಚರಿಸಿದರು. ಇದು ಸರ್ಕಾರವು ಸರಿಯಾದ ಸಮಾಲೋಚನೆಗಳನ್ನು ಪೂರ್ಣಗೊಳಿಸಿದ ನಂತರ ಮುಂದುವರಿಯಲು ಉದ್ದೇಶಿಸಿದೆ ಎಂಬುದನ್ನು ಸೂಚಿಸುತ್ತಿದೆ.
ಇವುಗಳನ್ನು ಓದಿ:
30 ದಿನಗಳಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ

