ಚಿಕ್ಕಮಗಳೂರು: ರಾತ್ರಿ ಬಿಂಡಿಗಾ ದೇವಿರಮ್ಮ ಬೆಟ್ಟ ಹತ್ತಲು ಭಕ್ತರಿಗೆ ನಿರ್ಬಂಧ ಹೇರಿದ ದೇವಸ್ಥಾನ ಸಮಿತಿ
ಮಳೆ ಸಾಧ್ಯತೆ ಇದ್ದು, ರಾತ್ರಿ ಸಮಯ ಬೆಟ್ಟ ಹತ್ತುವುದು ಅಪಾಯ ಇರುವುದರಿಂದ ದೇವಿರಮ್ಮ ಬಿಡಿಂಗಾ ದೇವಸ್ಥಾನದ ಸಮಿತಿ ರಾತ್ರಿ ಬೆಟ್ಟ ಹತ್ತಲು ನಿರ್ಬಂಧಿಸಿದೆ.

Published : October 18, 2025 at 8:55 PM IST
ಚಿಕ್ಕಮಗಳೂರು: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮನನ್ನು ನೋಡಲು ಜನರು ಕಾತರದಿಂದ ಕಾಯುತ್ತಿದ್ದು, ಕೆಲವೇ ದಿನಗಳು ಬಾಕಿ ಇದೆ. ಈ ಬಾರಿ ಬೆಟ್ಟ ಏರಲು ಮಾರ್ಗಸೂಚಿಗಳ ಜತೆ ಎರಡು ದಿನ ಅವಕಾಶವನ್ನು ಜಿಲ್ಲಾಡಳಿತ ನೀಡಿದೆ. ಆದರೆ, ರಾತ್ರಿ ಬೆಟ್ಟವನ್ನ ಏರಲು ದೇವಸ್ಥಾನದ ಸಮಿತಿ ನಿರ್ಬಂಧ ಹೇರಿದೆ.
ಸಮುದ್ರ ಮಟ್ಟದಿಂದ ಸುಮಾರು 3,800 ಅಡಿಯಷ್ಟು ಎತ್ತರದಲ್ಲಿ ಪಿರಮಿಡ್ ಆಕಾರದಲ್ಲಿರುವ ಬೆಟ್ಟ. ವರ್ಷಪೂರ್ತಿ ಬಿಂಡಿಗಾ ಗ್ರಾಮದ ದೇಗುಲದಲ್ಲಿ ದರ್ಶನ ನೀಡುವ ದೇವೀರಮ್ಮ ದೀಪಾವಳಿ ಅಮಾವಾಸ್ಯೆಯಿಂದ ಹಿಂದಿನ ದಿನ ಗುಡ್ಡದ ತುದಿಯಲ್ಲಿರೋ ದೇಗುಲದಲ್ಲಿ ದರ್ಶನ ನೀಡುತ್ತಾಳೆ. ಆ ಬೆಟ್ಟವನ್ನೇರಿ ಕುಳಿತಿರುವ ದೇವಿರಮ್ಮನ ದರ್ಶನ ಪಡೆಯೋಕೆ ಭಕ್ತರಂತೂ ಕಾತರದಿಂದ ಕಾಯುತ್ತಿದ್ದಾರೆ. ಕಾರಣ ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತರು ಈ ಬೆಟ್ಟವನ್ನು ಹತ್ತಲು ಮಾತ್ರ ಅವಕಾಶ. ಈ ಬಾರಿ ಎರಡು ದಿನ ಅಂದರೆ ಅಕ್ಟೋಬರ್ 19 ಅಕ್ಟೋಬರ್ 20 ರಂದು ಬರಿಗಾಲಿನಲ್ಲಿ ಬೆಟ್ಟವನ್ನು ಏರಿ ಬೆಟ್ಟದ ತಾಯಿ ದೇವಿರಮ್ಮನ ದರ್ಶನ ಮಾಡಲು ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನ ಸಮಿತಿ ಜತೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ, ರಾತ್ರಿ ಸಮಯದಲ್ಲಿ ಬೆಟ್ಟವನ್ನು ಏರಲು ಭಕ್ತರಿಗೆ ನಿರ್ಬಂಧ ಹೇರಿದೆ.
ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಉದ್ದೇಶದಿಂದಲೇ ದೇವಿರಮ್ಮನ ಅಪ್ಪಣೆ ಕೇಳಿ ಎರಡು ದಿನ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ ಈ ವರ್ಷ ಪಶ್ಚಿಮ ಘಟ್ಟಗಳ ಸಾಲು ಮಳೆಯ ಅಬ್ಬರ ಹೆಚ್ಚಿದೆ. ಮಲ್ಲೇನಹಳ್ಳಿಯ ಬೆಂಡಿಗ ಬೆಟ್ಟಗಳ ಸಾಲುಗಳಲ್ಲೂ ಕೂಡ ಮಳೆಯಾಗುತ್ತಿದೆ. ಬೆಟ್ಟ ಪ್ರದೇಶದಲ್ಲಿ ಜಾರಿಕೆಯಿದ್ದು ರಾತ್ರಿ ಸಮಯ ಕಷ್ಟ ಆಗುತ್ತದೆ. ಹೀಗಾಗಿ ಭಕ್ತರಿಗೆ ರಾತ್ರಿ ಪ್ರವೇಶ ನಿರ್ಬಂಧಿಸಲಾಗಿದೆ. ಅಕ್ಟೋಬರ್ 19 ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ಹಾಗೂ 20 ರಂದು ಬೆಳಗ್ಗೆ 9 ರಿಂದ ಸಂಜೆ 3 ಗಂಟೆಯವರೆಗೂ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ ಅಲ್ಲಿನ ಸ್ಥಿತಿ ಅನುಗುಣವಾಗಿ ಕ್ರಮ ವಹಿಸಲಾಗಿದೆ. ಹಾಗೇ, 15 ವರ್ಷ ಒಳಗಿನವರು ಮತ್ತು 60 ವರ್ಷ ಮೇಲ್ಪಟ್ಟವರು ಬೆಟ್ಟ ಏರುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ. ಹಾಗೇ ಅಕ್ಟೋಬರ್ 19 ರಂದು ಬೆಳಗ್ಗೆ 7ರ ಸುಮಾರಿಗೆ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಬಸ್ ಹೊರಡಲಿದೆ. ಈ ಸೇವೆ ಸಂಜೆಯವರೆಗೂ ಇರುತ್ತದೆ.
ದೇವಿರಮ್ಮ ಮಲ್ಲೇನಹಳ್ಳಿ ಬಿಂಡಿಗ ದೇವಸ್ಥಾನದ ಅಧ್ಯಕ್ಷ ಕುಲಶೇಖರ್ ಅವರು ಮಾತನಾಡಿ, "ಸಕಲ ಸಿದ್ಧತೆ ನಡೆಯುತ್ತಿದೆ. ಮಾಧ್ಯಮ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ್ದೇವೆ. ಅ.19ಕ್ಕೆ ಭಾನುವಾರ 7 ಗಂಟೆಗೆ ಪೂಜೆಗಳು ಆರಂಭವಾಗುತ್ತದೆ. 8 ಗಂಟೆಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಅಷ್ಟೊತ್ತಿಗಾಗಲೇ ಚಿಕ್ಕಮಗಳೂರಿನಿಂದ ಭಕ್ತರಿಗೆ ದೇವಾಲಯಕ್ಕೆ ಬರಲು ಬಸ್ನ ವ್ಯವಸ್ಥೆ ಆಗಿರುತ್ತದೆ. ಮಲ್ಲೇನಹಳ್ಳಿಯಿಂದ ಸ್ವಂತ ವಾಹನದಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲಿಂದ ನಡೆದುಕೊಂಡು ಬರಬೇಕು. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಅದರ ನಂತರ ಬೆಟ್ಟ ಹತ್ತದಂತೆ ನಾವು ಭಕ್ತರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಕಾರಣ ಮಳೆ, ಗುಡುಗು ಆಗುತ್ತಿರುವುದರಿಂದ ಬೆಟ್ಟ ತುಂಬಾ ಜಾರುತ್ತಿದೆ. ದಾರಿ ಪೂರ್ತಿ ಪಾಚಿಗಟ್ಟಿರುವುದರಿಂದ ಹತ್ತುವುದು ಕಷ್ಟ. ಅದರಲ್ಲೂ ಸ್ತ್ರೀಯರಿಗೆ ತುಂಬಾ ಕಷ್ಟ. ಹೀಗಾಗಿ ರಾತ್ರಿ ಬೆಟ್ಟ ಹತ್ತುವುದಕ್ಕೆ ನಿರ್ಬಂಧ ಹೇರಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: 2 ದಿನ ಬಿಂಡಿಗಾ ದೇವಿರಮ್ಮ ಬೆಟ್ಟ ಹತ್ತಲು ಅವಕಾಶ ನೀಡಿದ ಜಿಲ್ಲಾಡಳಿತ

