ಖುಷಿ ಸಮಾಚಾರ: KSRTC ಪ್ರೀಮಿಯಂ ಬಸ್ಗಳ ಟಿಕೆಟ್ ದರಗಳಲ್ಲಿ ಶೇ5 ರಿಂದ 15ರಷ್ಟು ಕಡಿತ; ಸ್ವಾಗತಿಸಿದ ಪ್ರಯಾಣಿಕರು
ಜನವರಿ 5ರಿಂದ ಜಾರಿಗೆ ಬಂದ ಟಿಕೆಟ್ ದರ ಕಡಿತವು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.


Published : January 6, 2026 at 10:10 PM IST
ಬೆಂಗಳೂರು: KSRTC ಆಯ್ದ ಪ್ರೀಮಿಯಂ ಬಸ್ ಸೇವೆಗಳಲ್ಲಿ ಟಿಕೆಟ್ ದರಗಳನ್ನು ಶೇಕಡಾ5 ರಿಂದ 15 ವರೆಗೆ ಕಡಿತಗೊಳಿಸಿದೆ. ಇದು ಜನವರಿ 5, 2026ರಿಂದ ಜಾರಿಗೆ ಬಂದಿದೆ. ಕೆಎಸ್ಆರ್ ಟಿಸಿಯ ಈ ನಿರ್ಧಾರ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಯಾಣಿಕರನ್ನು ಖುಷಿಯಾಗುವಂತೆ ಮಾಡಿದೆ. ವಿಶೇಷವಾಗಿ ಬೆಂಗಳೂರಿನಿಂದ ಕರಾವಳಿ ಮತ್ತು ಇತರ ರಾಜ್ಯಗಳಿಗೆ ಹೋಗುವ ಪ್ರಯಾಣಿಕರ ಪ್ರಯಾಣ ವೆಚ್ಚ ಕಡಿಮೆಯಾಗಿದೆ. ಇದು ಸ್ಪಲ್ಪ ನಿರಾಳರಾಗುವಂತೆ ಮಾಡಿದೆ.
ಈ ದರ ಕಡಿತವು ರಾಜಹಂಸ, ನಾನ್-ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಮತ್ತು ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಸೇವೆಗಳಿಗೆ ಅನ್ವಯವಾಗುತ್ತದೆ. ಇದು ಆಯ್ದ ಮಾರ್ಗಗಳಲ್ಲಿ ಮಾತ್ರ ಜಾರಿಯಲ್ಲಿದ್ದು, ಜನವರಿ - ಮಾರ್ಚ್ ಅವಧಿಯ (ಆಫ್-ಸೀಸನ್) ಕಡಿಮೆ ದಟ್ಟಣೆ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

KSRTC ನಿರ್ಧಾರ ಸ್ವಾಗತಿಸಿದ ಪ್ರಯಾಣಿಕರು: ಸಂಸ್ಥೆ ನಿರ್ಧಾರವನ್ನು ಸ್ವಾಗತಿಸಿರುವ ಪ್ರಯಾಣಿಕರು, ಹಬ್ಬದ ಸಮಯದಲ್ಲಿ ದರ ಏರಿಕೆಯ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ಗಳನ್ನು ಕೆಲಸಕ್ಕಾಗಿ ನಿಯಮಿತವಾಗಿ ಬಳಸುವ ಅನೇಕ ಪ್ರಯಾಣಿಕರು ಈ ಬಗ್ಗೆ ಮಾತನಾಡಿದ್ದು, ಹೊಸ ದರಗಳು ವೆಚ್ಚ ನಿರ್ವಹಣೆಗೆ ಸಹಾಯಕವಾಗಿವೆ ಎಂದಿದ್ದಾರೆ.
ಮಂಗಳೂರು - ಬೆಂಗಳೂರು ನಡುವೆ ಪ್ರಯಾಣಿಸುವ ಇಬ್ರಾಹಿಂ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಕರಾವಳಿ ಜಿಲ್ಲೆಗಳಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಹಲವು ಜನರು ಪ್ರಯಾಣಿಸುತ್ತಾರೆ. ಈ ಹಿಂದೆ ನಮ್ಮ ಆದಾಯದ ಬಹುಭಾಗ ಬಸ್ ದರಕ್ಕೆ ಹೋಗುತ್ತಿತ್ತು. ಈ ಕಡಿತ ಅನೇಕ ಕುಟುಂಬಗಳಿಗೆ ಹಣ ಉಳಿಸುತ್ತದೆ ಎಂದು ತುಸು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಬ್ಬಗಳಲ್ಲಿ ರೌಂಡ್ ಟ್ರಿಪ್ ದರ ₹1,200 ರಿಂದ ₹1,300ಕ್ಕೆ ಏರುತ್ತದೆ. ಇದು ಪ್ರಯಾಣ ಕಷ್ಟವಾಗುತ್ತದೆ. ವರ್ಷಪೂರ್ತಿ ದರಗಳು ಸ್ಥಿರವಾಗಿದ್ದರೆ ಪ್ರಯಾಣಿಕರಿಗೆ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಇಬ್ರಾಹಿಂ ಅವರ ಮಾತಾಗಿದೆ.
ದರ ಕಡಿತ ಒಳ್ಳೆಯ ಸುದ್ದಿ ಆದರೆ ಮುಂದಿನ ತಿಂಗಳು ಹೆಚ್ಚಾಗಬಾರದು: ಹೈದರಾಬಾದ್ - ಬೆಂಗಳೂರು ಪ್ರಯಾಣಿಸುವ ಗಂಗಾಧರ್ ಎಂಬುವರು ಮಾತನಾಡಿ, ದರ ಕಡಿತ ಒಳ್ಳೆಯ ಸುದ್ದಿ, ಆದರೆ ಮುಂದಿನ ತಿಂಗಳುಗಳಲ್ಲಿ ಏರಿಕೆ ಆಗಬಾರದು. ಏರುವ ಪ್ರಯಾಣ ವೆಚ್ಚ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ದರಗಳು ಸ್ಥಿರವಾಗಿದ್ದರೆ ಪ್ರಯಾಣಿಕರಲ್ಲಿ ನಂಬಿಕೆ ಬರುತ್ತದೆ. ಇದು KSRTCಯ ಮೇಲೆ ಹೆಚ್ಚು ಅವಲಂಬನೆಗೆ ಕಾರಣವಾಗುತ್ತದೆ ಅಂತಾರೆ ಚೆನ್ನೈ-ಬೆಂಗಳೂರು ಪ್ರಯಾಣಿಕ ಶಂಕರ್
“KSRTC ಬಸ್ಗಳು ವಿಶ್ವಾಸಾರ್ಹವಾಗಿವೆ. ಕೈಗೆಟುಕುವ ದರಗಳು ಹೆಚ್ಚಿನ ಪ್ರಯಾಣಿಕರನ್ನು ಸಾರ್ವಜನಿಕ ಸಾರಿಗೆಗೆ ಮರಳಿ ತರುತ್ತವೆ ಎಂದು ಶಿವಮೊಗ್ಗ-ಬೆಂಗಳೂರು ಪ್ರಯಾಣಿಕ ಪರ್ವೇಜ್ ಹೇಳಿದ್ದಾರೆ.

ಪ್ರಯಾಣಿಕರು ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದು, ದರ ಕಡಿತವು ಆಫ್-ಸೀಸನ್ ಮೀರಿ ಮುಂದುವರೆಯಬೇಕು ಮತ್ತು KSRTC ಸೇವೆಗಳಲ್ಲಿ ಹೆಚ್ಚು ಸ್ಥಿರ ಮತ್ತು ಊಹಿಸಬಹುದಾದ ಬೆಲೆ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಶಿಸುತ್ತಿದ್ದಾರೆ.
ಇದನ್ನು ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಯವ್ಯ ಸಾರಿಗೆಯ ಪ್ರತಿಷ್ಠಿತ ಸಾರಿಗೆ ಬಸ್ಗಳ ಪ್ರಯಾಣ ದರ ಇಳಿಕೆ..!

