ಮನೆ ಖಾಲಿ ಮಾಡುವ ವಿಚಾರಕ್ಕೆ ಗಲಾಟೆ, ಹತ್ಯೆ: ಅಂತ್ಯಕ್ರಿಯೆ ವೇಳೆ ಕೃತ್ಯ ಬಯಲು
ಮನೆ ಖಾಲಿ ಮಾಡುವ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Published : March 4, 2026 at 2:46 PM IST
ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಆರೋಪಿಯನ್ನು ವಿವೇಕ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಪಾಷಾ ಎಂಬಾತನನ್ನು ಹತ್ಯೆಗೈದಿದ್ದ ಆರೋಪದಡಿ ಮಸ್ರೂರ್ ಅಹಮದ್ ಎಂಬವನನ್ನು ಬಂಧಿಸಲಾಗಿದೆ. ಮಾರ್ಚ್ 1ರಂದು ರಾತ್ರಿ ಆಸ್ಟಿನ್ ಟೌನ್ನಲ್ಲಿ ಇನಾಯತ್ ಪಾಷಾನ ಹತ್ಯೆಯಾಗಿತ್ತು.
ಒಂಟಿಯಾಗಿದ್ದ ಇನಾಯತ್ ಪಾಷಾ, ಕಳೆದ ಹತ್ತು ವರ್ಷಗಳಿಂದಲೂ ಸಂಬಂಧಿಕರ ಮನೆಯೊಂದನ್ನು ಭೋಗ್ಯಕ್ಕೆ ಪಡೆದು ವಾಸವಿದ್ದ. ಆದರೆ ಮನೆ ಖಾಲಿ ಮಾಡುವ ವಿಚಾರಕ್ಕೆ ಮಾಲೀಕ ಹಾಗೂ ತನ್ನ ಸಹೋದರಿಯ ಜೊತೆ ಇನಾಯತ್ ಪಾಷಾಗೆ ಗಲಾಟೆಯಾಗಿತ್ತು. ಭಾನುವಾರ ರಾತ್ರಿ ಸಹ ಸಹೋದರಿಯ ಮಗ ಮಸ್ರೂರ್ ಅಹಮದ್ ಜೊತೆ ಇನಾಯತ್ ಪಾಷಾಗೆ ಗಲಾಟೆಯಾಗಿತ್ತು. ಕುಡಿದ ಅಮಲಿನಲ್ಲಿ ಇಬ್ಬರು ಪರಸ್ಪರ ನಿಂದಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಮಸ್ರೂರ್ ಅಹಮದ್ ಇನಾಯತ್ ಪಾಷಾನನ್ನು ಕೆಳಗೆ ತಳ್ಳಿ ಹಲ್ಲೆಗೈದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಇನಾಯತ್ ಪಾಷಾ ಮೃತಪಟ್ಟಿದ್ದ. ಬಳಿಕ ಇನಾಯತ್ ಪಾಷಾ ಮದ್ಯದ ಅಮಲಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಆರೋಪಿ ಎಲ್ಲರನ್ನೂ ನಂಬಿಸಿದ್ದ.
ಸ್ಥಳೀಯರೆಲ್ಲರೂ ಸೇರಿ ಇನಾಯತ್ ಅಂತ್ಯಕ್ರಿಯೆಗೆ ಮುಂದಾದಾಗಿದ್ದರು. ಇದೇ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ್ದ ವಿವೇಕನಗರ ಠಾಣೆ ಪೊಲೀಸರು ಮೃತದೇಹ ಪರಿಶೀಲಿಸಿದ ಬಳಿಕ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಆತನ ಹತ್ಯೆಗೆ ಕಾರಣ ಬಯಲಾಗಿದೆ. ತಕ್ಷಣ ಸಂಬಂಧಿಕರು, ಪರಿಚಿತರನ್ನು ವಿಚಾರಣೆ ನಡೆಸಿದಾಗ ಮಸ್ರೂರ್ ಅಹಮದ್ನ ಕೃತ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಪ್ರಿಯಕರನ ಕೊಂದ ಸಹನಟಿ(ಪ್ರತ್ಯೇಕ ಘಟನೆ): ಬೆಂಗಳೂರು ನಗರದ ಬಾಗಲಗುಂಟೆ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಬಡಾವಣೆಯಲ್ಲಿ ಇತ್ತೀಚಿಗೆ ನಡೆದಿದ್ದ ಮೋಹನ್ ಕೃಷ್ಣ (45) ಎಂಬವರ ನಿಗೂಢ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ಹೊಸ ಪ್ರಿಯಕರನೊಂದಿಗೆ ಸೇರಿ ತನ್ನ ಮಾಜಿ ಪ್ರಿಯಕರನನ್ನು ಸಹನಟಿಯೊಬ್ಬರು ಹತ್ಯೆಗೈದಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ನಟಿ ಬಿಂದು, ವಿನಯ್ ಹಾಗೂ ಧನುಷ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದರು.
ಸಣ್ಣಪುಟ್ಟ ಫೈನಾನ್ಸ್ ಮಾಡುತ್ತಿದ್ದ ಮೋಹನ್ ಕೃಷ್ಣ ತನ್ನ ಪತ್ನಿಯನ್ನು ಬಿಟ್ಟು ಬಿಂದು ಜೊತೆ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದ. ಬಿಂದು ಕೂಡ ಪತಿಯಿಂದ ದೂರವಾಗಿದ್ದಳು. ಭಜರಂಗಿ, ಪೊಲೀಸ್ ಕ್ವಾರ್ಟರ್ಸ್, ಕಾಲಭೈರವ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಬಿಂದು ನಟಿಸಿದ್ದಳು. ಎರಡು ತಿಂಗಳ ಹಿಂದಷ್ಟೇ ಬಿಂದು ಹಾಗೂ ಮೋಹನ್ ಕೃಷ್ಣ ಇಬ್ಬರೂ ಬಂದು ವಿಜಯಲಕ್ಷ್ಮಿ ಬಡಾವಣೆಯಲ್ಲಿರುವ ನಟರಾಜ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು.
ಇವುಗಳನ್ನೂ ಓದಿ:

