ETV Bharat / state

ಬೇಡ್ತಿ-ವರದಾ ನದಿ ಜೋಡಣೆಯಿಂದ ಯಾರಿಗೂ ತೊಂದರೆಯಿಲ್ಲ, ಎಲ್ಲರೂ ಸಹಕರಿಸಿ: ಬೊಮ್ಮಾಯಿ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ, ಕಾಂಗ್ರೆಸ್​ನ 'ವೋಟ್​​ ಚೋರಿ, ಗದ್ದಿ‌ ಛೋಡ್' ಅಭಿಯಾನದ ಕುರಿತಂತೆ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

no-problem-by-bedti-varada-river-linking-project-and-everyone-should-cooperate-says-basavaraj-bommai
ಸಂಸದ ಬಸವರಾಜ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : December 14, 2025 at 6:42 PM IST

2 Min Read
Choose ETV Bharat

ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕುರಿತಂತೆ ಆ ಭಾಗದ ಜನರು ಹಾಗೂ ಸೋಂದಾ ಮಠದ ಗುರುಗಳ ಭಾವನೆಯನ್ನು ಗೌರವಿಸುತ್ತೇವೆ. ಆದರೆ ತಪ್ಪು ಕಲ್ಪನೆಯಿಂದ ವಿರೋಧ ಮಾಡುವುದು ಬೇಡ. ಈ ಯೋಜನೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು‌ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿಯಲ್ಲಿಂದು ಮಾತನಾಡಿದ ಅವರು, ಯೋಜನೆ ಕುರಿತಂತೆ ಶನಿವಾರ ಸೋಂದಾ ಶ್ರೀಗಳ ಸಾನಿಧ್ಯದಲ್ಲಿ ಚರ್ಚೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಯೋಜನೆಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತಿದೆ. ಯೋಜನೆ ಘೋಷಣೆಯಾದಾಗ‌ ಈಗಿರುವ ರಾಜಕಾರಣಿಗಳು ಯಾರೂ ರಾಜಕಾರಣದಲ್ಲಿ ಇರಲಿಲ್ಲ. ಇದೊಂದು ನೀರಿನ ಸದ್ಬಳಕೆಗೆ ಮಾಡುತ್ತಿರುವ ಯೋಜನೆಯಾಗಿದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ (ETV Bharat)

ಪರಿಸರಕ್ಕೆ ಹಾನಿಯಾಗುವುದಿಲ್ಲ: ಅಲ್ಲದೆ, ಈ ಹಿಂದೆ ತೀರ್ಮಾನಿಸಲಾಗಿದ್ದ ಯೋಜನೆಯು ಈಗ ಪರಿಷ್ಕರಣೆಗೊಂಡಿದೆ. ಯಾವುದೇ ದೊಡ್ಡ ಡ್ಯಾಂ ನಿರ್ಮಾಣ ಮಾಡುವುದಿಲ್ಲ. ಸಣ್ಣ ಬ್ಯಾರೇಜ್ ನಿರ್ಮಿಸಿ, ನೀರನ್ನು ಲಿಫ್ಟ್​ ಮಾಡಲಾಗುತ್ತದೆ. ಯಾವುದೇ ಜಾಗದ ಮುಳುಗಡೆ ಹಾಗೂ ಪರಿಸರಕ್ಕೂ ಹಾನಿಯಾಗುವುದಿಲ್ಲ. ನದಿಯ ಒಟ್ಟು ಹರಿವು ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ. ಬೇಡ್ತಿ ನದಿಯ ಕೇವಲ 10% ನೀರನ್ನು ಮಾತ್ರ ತಗೆದುಕೊಳ್ಳಲಾಗುತ್ತಿದೆ. ಅಲ್ಲದೆ, ಅದು ಮಳೆಗಾಲದಲ್ಲಿ ಮಾತ್ರ. ಅದಲ್ಲದೆ, ಇನ್ನೂ ಕೂಡ ಡಿಪಿಆರ್​ ಆಗಬೇಕಿದೆ. ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ, ಶ್ರೀಗಳು ಹಾಗೂ ಆ ಭಾಗದ ಜನರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಾವೇರಿ ಸೇರಿದಂತೆ ಈ ಭಾಗದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಸಂಗ್ರಹಿಸಲಾಗುವ ಬೇಡ್ತಿ ನದಿಯ ನೀರನ್ನು ಬೇಸಿಗೆಯಲ್ಲಿ ಉಪಯೋಗಿಸುತ್ತೇವೆ. ನಮ್ಮದು ಬರಪೀಡಿತ ಪ್ರದೇಶ ಆಗಿರುವುದರಿಂದ ಯೋಜನೆಯಿಂದ ಅನುಕೂಲವಾಗಲಿದೆ. ನೀರಿನ ಸದ್ಬಳಕೆ ಆಗಬೇಕಿದೆ, ಒಬ್ಬರಿಗೊಬ್ಬರು ಸಹಕರಿಸಬೇಕು ಎಂದು ಬೊಮ್ಮಾಯಿ ತಿಳಿಸಿದರು.

ಕೇವಲ ಪ್ರತಿಷ್ಠೆಗಾಗಿ ಕಾಂಗ್ರೆಸ್ ಅಭಿಯಾನ: ಕಾಂಗ್ರೆಸ್​ನ 'ವೋಟ್​​ ಚೋರಿ, ಗದ್ದಿ‌ ಛೋಡ್' ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವೋಟ್ ಚೋರಿ‌ ಎಂದು ದೇಶದಲ್ಲಿ ಸುಳ್ಳನ್ನು ಸಾವಿರ ಬಾರಿ ಹೇಳಿ, ಸತ್ಯ ಮಾಡಲು ರಾಹುಲ್​ ಗಾಂಧಿ ಹೊರಟಿದ್ದಾರೆ. ಆದರೆ ಕಾಂಗ್ರೆಸ್​​ನವರಿಗೇ ಈ ಅಭಿಯಾನದ ಮೇಲೆ ನಂಬಿಕೆ ಇಲ್ಲ. ಕೇವಲ ಪ್ರತಿಷ್ಠೆಗಾಗಿ ಮಾಡುತ್ತಿದ್ದಾರೆ, ಇದರಿಂದ ಏನೂ‌ ಆಗಲ್ಲ. ಬಿಹಾರದಲ್ಲಿ ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡಿದರು. ಅಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆಯಿತು ಎಂದು ಟೀಕಿಸಿದರು.

ಆಳಂದ ಕ್ಷೇತ್ರದ ಮತಕಳ್ಳತನದ ಎಸ್​​ಐಟಿ ಚಾರ್ಜ್​ಶೀಟ್ ಸಲ್ಲಿಕೆ ಬಗ್ಗೆ, ಚಾರ್ಜ್​ಶೀಟ್ ಸಲ್ಲಿಸಿದ ತಕ್ಷಣ ಏನೂ ಆಗಲ್ಲ. ಎಸ್​​ಐಟಿ ಯಾವ ರೀತಿ ತನಿಖೆ ಮಾಡಿದೆ? ಕೋರ್ಟ್​​ನಲ್ಲಿ ಎಲ್ಲವೂ ಸಾಬೀತಾಗಬೇಕಿದೆ, ಸತ್ಯ ಹೊರಬರುತ್ತೆ ಎಂದು ತಿಳಿಸಿದರು.

ಬೀದಿಗಳಲ್ಲಿ ಮೆರವಣಿಗೆ ಮಾಡಿರುವುದು ಅನಾಗರಿಕತೆ: ಸವಣೂರು ಮೆರವಣಿಗೆ ಪ್ರಕರಣ ಸಂಬಂಧ ಮಾತನಾಡಿ, ಕಾನೂನು ಕೈಗೆತ್ತಿಕೊಂಡಿದ್ದಾರೆ. ತಪ್ಪು ಮಾಡಿದರೆ ಶಿಕ್ಷೆ ಆಗಬೇಕು. ಅದಕ್ಕಿಂತ ಮುಂಚೆ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿರುವುದು ಅನಾಗರಿಕತೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇಲ್ಲ. ಪೊಲೀಸರು ನಿಷ್ಕ್ರಿಯರಾಗಿದ್ದು, ಅವರ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಸರ್ಕಾರವು ಒಂದು ವರ್ಗವನ್ನು ಓಲೈಸುತ್ತಿರುವ ಪರಿಣಾಮ ಇದಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಇದನ್ನೂ ಓದಿ: ಸ್ವಯಂಕೃತವಾಗಿ ಮತಕಳ್ಳತನ ಮಾಡುವವರ ಮೇಲೆ ಪ್ರಧಾನಿ ಮೋದಿ ಅಂಕುಶ: ಕೇಂದ್ರ ಸಚಿವ ಸಿಂಧಿಯಾ