ETV Bharat / state

ಶಿವಮೊಗ್ಗ: ಭದ್ರಾವತಿ ಆಕಾಶವಾಣಿಗೆ 10 ಕಿಲೋ ವ್ಯಾಟ್​ ಸಾಮರ್ಥ್ಯದ FM ಪ್ರೇಷಕ ಅಳವಡಿಕೆ

ಭದ್ರಾವತಿ ಆಕಾಶವಾಣಿಗೆ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕವನ್ನು ಅಳವಡಿಸಲಾಗಿದೆ.

FM RADIO  SHIVAMOGGA  ಭದ್ರಾವತಿ ಆಕಾಶವಾಣಿ  ರಾಜ್ಯ ಸಚಿವ ಎಲ್ ಮುರುಗನ್
ಭದ್ರಾವತಿ ಆಕಾಶವಾಣಿ (ETV Bharat)
author img

By ETV Bharat Karnataka Team

Published : February 27, 2026 at 1:34 PM IST

3 Min Read
Choose ETV Bharat

ಶಿವಮೊಗ್ಗ: ರೇಡಿಯೋ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು ನೂತನವಾಗಿ ಭದ್ರಾವತಿ ಆಕಾಶವಾಣಿಗೆ ಎಫ್.ಎಂ ಅಳವಡಿಸುವ ಮೂಲಕ ಕಡೆಯ ವ್ಯಕ್ತಿಯನ್ನು ತಲುಪುವ ದೃಢ ಹೆಜ್ಜೆ ಇರಿಸಲಾಗಿದೆ ಎಂದು ಕೇಂದ್ರದ ಮಾಹಿತಿ ಹಾಗೂ ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾದ ಎಲ್. ಮುರುಗನ್ ತಿಳಿಸಿದರು.

ಶಿವಮೊಗ್ಗದ ವಿದ್ಯಾನಗರದಲ್ಲಿ ಭದ್ರಾವತಿ ಆಕಾಶವಾಣಿಗೆ ನೂತನವಾಗಿ ಅಳವಡಿಸಲಾದ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಭದ್ರಾವತಿ ಆಕಾಶವಾಣಿಗೆ ಇದೊಂದು ಉಡುಗೊರೆಯಾಗಿದ್ದು, ಜಿಲ್ಲೆಯ ಮೂಲೆ ಮೂಲೆ ಸೇರಿದಂತೆ 8 ಜಿಲ್ಲೆಗಳನ್ನು ತಲುಪಲಿದೆ. ರೇಡಿಯೋ ಒಂದು ಶಕ್ತಿಯುತವಾದ ಸಂವಹನ ಮಾಧ್ಯವಾಗಿದ್ದು, ಕೇಂದ್ರ ಸರ್ಕಾರವು ಡಿಜಿಟಲ್ ಮತ್ತು ಸಂವಹನ ಮಾಧ್ಯಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮತ್ತು ಗುಣಮಟ್ಟ ವೃದ್ದಿಗಾಗಿ ರೂ. 2000 ಕೋಟಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.

ಭದ್ರಾವತಿ ಆಕಾಶವಾಣಿ (ETV Bharat)

ರೇಡಿಯೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತಿ ಹೆಚ್ಚು ಜನರನ್ನು ತಲುಪುತ್ತಿದ್ದು ಶೇ.92 ಭಾಗವನ್ನು ತಲುಪುತ್ತಿರುವ ಬಹುದೊಡ್ಡ ಪ್ರಸಾರ ಮಾಧ್ಯಮವಾಗಿದೆ. ಕೇಂದ್ರವು ಕಲೆ, ಸಂಸ್ಕೃತಿ, ವಿನ್ಯಾಸ, ಚಲನಚಿತ್ರ, ಸಂಗೀತ, ಸಾಫ್ಟ್ವೇರ್ ಮತ್ತು ಗೇಮಿಂಗ್‌ನಂತಹ ಸೃಜನಶೀಲ ಉದ್ಯಮಗಳನ್ನು ಒಳಗೊಂಡಿರುವ ಆರ್ಥಿಕ ವ್ಯವಸ್ಥೆ ‘ಆರೆಂಜ್ ಎಕಾನಮಿಗೆ ಹೆಚ್ಚಿನ ಒತ್ತು ನೀಡುತ್ತಿದೆ. 25 ಸಾವಿರ ಶಾಲೆಗಳಿಗೆ ಕ್ರಿಯೇಟಿವ್ ಲ್ಯಾಬ್‌ ನೀಡುತ್ತಿದೆ ಎಂದರು.

ರೇಡಿಯೋ ಒಂದು ಶಕ್ತಿಯುತ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮ ಮಾತ್ರವಲ್ಲದೇ ನೈಜ, ಸತ್ಯ ಮತ್ತು ಸಮರ್ಪಕವಾದ ಸುದ್ದಿ, ವಿಷಯಗಳನ್ನು ನೀಡುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದೆ. ಜೊತೆಗೆ ಸ್ಥಳೀಯ ಕಲಾವಿದರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಒಂದು ವೇದಿಕೆ ನಿರ್ಮಾಣ ಮಾಡಿದೆ. ಹೊಸತನಕ್ಕೆ ಸ್ಪೂರ್ತಿಯಾಗಿದೆ.

ರೇಡಿಯೋ 23 ಭಾಷೆಗಳು ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ಗಡಿನಾಡು, ಗುಡ್ಡಗಾಡು, ಮತ್ತು ದೂರದ ಪ್ರದೇಶಗಳನ್ನು ತಲುಪುತ್ತಿದೆ. ಎಲ್ಲ ವರ್ಗ ಮತ್ತು ವಯೋಮಾನ ಹಾಗೂ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ಆಕಾಶವಾಣಿ ಪಾಡ್‌ಕಾಸ್ಟ್ ಸಹ ಶುರುವಾಗಿದ್ದು ಕಮ್ಯುನಿಟಿ ರೇಡಿಯೋ ಸಹ ಬಹು ದೊಡ್ಡ ಪಾತ್ರ ವಹಿಸುತ್ತಿದೆ. 550 ಕಮ್ಯುನಿಟಿ ರೇಡಿಯೋ ಕೆಲಸ ಮಾಡುತ್ತಿದೆ. ಭದ್ರಾವತಿ ಆಕಾಶವಾಣಿ ಎಫ್ ಎಂ 25ನೇ ಪ್ರೇಷಕವಾಗಿದ್ದು 3500 ಚ ಕಿ.ಮೀನ್ನು ಕವರ್ ಮಾಡುತ್ತದೆ ಎಂದರು. ಸಂಸದರು, ಶಾಸಕರು ಮನವಿ ಮಾಡಿದಂತೆ ನಗರದ ಪಾರ್ಕುಗಳಲ್ಲಿ ಬಾನುಲಿ ಕೇಳುವಂತಹ ವ್ಯವಸ್ಥೆ ಮಾಡಲು ಇಲ್ಲಿ ಪೈಲಟ್ ಯೋಜನೆಯಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಎಫ್.ಎಂ ಪ್ರೇಷಕ ಅಳವಡಿಕೆಗೆ 2024ರ ಜನವರಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಇದೀಗ ಅದು ಸಾಕಾರಗೊಂಡಿದ್ದು, ಆಕಾಶವಾಣಿ ಭದ್ರಾವತಿ ಕೇಂದ್ರ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ 101.4 ತರಂಗಾಂತರ ಎಫ್​ಎಂ ಪ್ರೇಷಕದ ಅಳವಡಿಕೆಯಿಂದಾಗಿ ಶಿವಮೊಗ್ಗದ ಸುತ್ತಲಿನ ಎಂಟು ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಸುಮಾರು 1 ಕೋಟಿ ಜನರಿಗೆ ಈ ಸೇವೆ ಲಭ್ಯವಾಗುತ್ತಿದ್ದು ಭದ್ರಾವತಿ ಆಕಾಶವಾಣಿಯ ವಜ್ರ ಮಹೋತ್ಸವದ ಉಡುಗೊರೆ ಇದಾಗಿದೆ ಎಂದರು.

ಆಕಾಶವಾಣಿಯು ಆರಂಭಿಕ ಹಂತದಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಡಿಜಿಟಲ್ ಮತ್ತು ಸಂವಹನ ಕ್ರಾಂತಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಸಂಪೂರ್ಣ ಕನ್ನಡಿಗರನ್ನು ತಲುಪುವ ಏಕೈಕ ಕೇಂದ್ರವಾಗಿ ಭದ್ರಾವತಿ ಆಕಾಶವಾಣಿ ಹೊರಹೊಮ್ಮಿದೆ. ವಿದ್ಯಾನಗರದ 150 ಮೀಟರ್ ದೂರದರ್ಶನ ಟವರ್​ನ್ನು ಬಳಕೆ ಮಾಡಿಕೊಂಡು 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ಪ್ರೇಷಕ ಅಳವಡಿಸಲಾಗಿದೆ. ಇನ್ನು ಮುಂದೆ ನಗರದ ಎಲ್ಲ ಪಾರ್ಕ್​ಗಳಲ್ಲಿ ರೇಡಿಯೋ ಸ್ಟೇಷನ್‌ಗಳನ್ನು ಅಳವಡಿಸಲು ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಒಪ್ಪಿಗೆ ನೀಡಿರುವುದು ಅಭಿನಂದನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಆಕಾಶವಾಣಿ ಮಹಾ ನಿರ್ದೇಶಕರಾದ ರಾಜೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, "ಆಕಾಶವಾಣಿ ಇದೀಗ ತಲುಪಲಾರದ ಪ್ರದೇಶಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಹಾಗೂ ಎಲ್ಲೆಡೆ ಮಾಹಿತಿ, ಶಿಕ್ಷಣ ಮತ್ತು ರಂಜನೆಯನ್ನು ಒದಗಿಸುತ್ತಾ ಬಂದಿದ್ದು, ರಾಷ್ಟ್ರೀಯ ಐಕ್ಯತೆಯ ಪ್ರತೀಕವಾಗಿದೆ ಮತ್ತು ವಿಶ್ವಾಸಾರ್ಹ ಧ್ವನಿಯಾಗಿ ಹೊರಹೊಮ್ಮಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ, ಮಾಜಿ ಶಾಸಕರಾದ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ದಕ್ಷಿಣ ವಲಯ (ಬ್ರಾಡ್‌ಕಾಸ್ಟ್ ಆಪರೇಷನ್ಸ್)ದ ಅಪರ ಮಹಾ ನಿರ್ದೇಶಕಿ ಗೀತಾ ರಾಣಿ, ಆಕಾಶವಾಣಿ ಭದ್ರಾವತಿಯ ಮುಖ್ಯಸ್ಥರಾದ ಎಸ್. ಆರ್ ಭಟ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಗೋಪಿನಾಥ್, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಸಿದ್ಧ: ಹಳ್ಳಿಗಳಲ್ಲೂ ರೈಲಿನ ಸದ್ದು! ಯೋಜನೆ ಬಗ್ಗೆ ಸೋಮಣ್ಣ ಹೇಳಿದ್ದಿಷ್ಟು