ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಪ್ರಕರಣ; ಗುಜರಾತ್ನ ಐವರ ಬಂಧನ
ಮೈಸೂರಿನ ಯಾಂದಳ್ಳಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದಾಗ 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿತ್ತು.

Published : February 25, 2026 at 3:57 PM IST
ಮೈಸೂರು: ನಗರದ ಹೊರವಲಯದ ಮನೆಯೊಂದರಲ್ಲಿ ಅಕ್ರಮವಾಗಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು, ಜಾಲದಲ್ಲಿದ್ದ ಐವರನ್ನು ಬಂಧಿಸಿದ್ದಾರೆ. ಬಂಧಿತರು ಗುಜರಾತ್ನವರಾಗಿದ್ದು, ತನಿಖೆ ನಡೆಯುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಇತ್ತೀಚಿಗೆ ಕಾರ್ಯಾಚರಣೆ ನಡೆಸಲಾಗಿತ್ತು. ದಾಳಿಯ ವೇಳೆ ಮನೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಹಾಗೂ 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿತ್ತು. ಇವುಗಳ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಎಫ್ಎಸ್ಎಲ್ ವರದಿ ಪೊಲೀಸರ ಕೈಸೇರಿದೆ. ಯಾಂದಳ್ಳಿ ಮನೆಯಲ್ಲಿ ದೊರೆತ ರಾಸಾಯನಿಕ ವಸ್ತುಗಳು ಡ್ರಗ್ಸ್ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ. ಆ ಮನೆಯಲ್ಲಿ ದೊರೆತ ಒಂದು ಕೆ.ಜಿ. ಮಾದಕ ವಸ್ತು ಹಾಗೂ ಡ್ರಗ್ಸ್ ತಯಾರಿಕೆಗೆ ಅವಶ್ಯವಿರುವ ಕಚ್ಚಾ ರಾಸಾಯನಿಕವು ಡ್ರಗ್ಸ್ ತಯಾರಿಗೆ ಬಳಸುವ ವಸ್ತುಗಳೇ ಎಂದು ದೃಢಪಟ್ಟಿದೆ.
ಇದಕ್ಕೂ ಮುನ್ನ ಬೆಲವತ್ತ ಬಳಿ ಡ್ರಗ್ಸ್ ಫ್ಯಾಕ್ಟರಿ ಮತ್ತು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ನೆರೆ ರಾಜ್ಯದ ಪೊಲೀಸರು ಪತ್ತೆ ಮಾಡಿದ್ದರು. ಈಗ ಮೈಸೂರು ನಗರದ ಹೊರ ವಲಯದಲ್ಲಿಯೇ ಮತ್ತೊಂದು ಫ್ಯಾಕ್ಟರಿ ಪತ್ತೆಯಾಗಿರುವುದು ಪೊಲೀಸರಿಗೆ ಸವಾಲಾಗಿದೆ.
"ಮನೆಯಲ್ಲಿ ಮಾದಕ ವಸ್ತು ತಯಾರು ಮಾಡುತ್ತಿದ್ದ ಎಲ್ಲರೂ ಗುಜರಾತ್ ಮೂಲದವರಾಗಿದ್ದಾರೆ. ಈ ಸಂಬಂಧ ಗುಜರಾತ್ನಲ್ಲಿ ತನಿಖೆ ನಡೆಸುತ್ತಿರುವ ಮೈಸೂರು ಜಿಲ್ಲಾ ಪೊಲೀಸರ ತಂಡ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸ್ ತಂಡ ಇನ್ನೂ ಕೂಡ ಗುಜರಾತ್ನಲ್ಲೇ ಇದ್ದು, ಇನ್ನೂ ಹಲವು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಉಳಿದ ಆರೋಪಿಗಳ ಬಗ್ಗೆ ನಮ್ಮ ತಂಡಕ್ಕೆ ಸ್ಪಷ್ಟ ಸುಳಿವು ದೊರೆತಿದ್ದು, ಅವರನ್ನೂ ಕೂಡಲೇ ಬಂಧಿಸಲಾಗುವುದು" ಎಂದು ಎಸ್ಪಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ವರದಿಯಾದ ಪ್ರತ್ಯೇಕ ವಂಚನೆ ಪ್ರಕರಣಗಳು: ರೈಸ್ ಪುಲ್ಲಿಂಗ್ ಯಂತ್ರ ಮಾರಿದರೆ ಕೋಟ್ಯಂತರ ಹಣ ಗಳಿಸಬಹುದು ಎಂದು ನಂಬಿದ ವ್ಯಕ್ತಿಯೊಬ್ಬರು 98 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಡಿಕೇರಿಯ ಜಗದೀಶ್ ಹಣ ಕಳೆದುಕೊಂಡವರು. ಫ್ಲವರ್ ಡೆಕೋರೇಷನ್ ವೃತ್ತಿ ಮಾಡುವ ಜಗದೀಶ್, ತಮಗೆ ಮೈಸೂರು ನಗರದ ಶಿವಕುಮಾರ್, ಮಧು, ಬೆಂಗಳೂರಿನ ಇಕ್ಬಾಲ್, ಮಂಗಳೂರಿನ ರಫೀಕ್ ಹಾಗೂ ಚನ್ನೈನ ಹಂಜಾ ಪಿಲ್ಯಾಲಾಲ್ ಎಂಬವರು ವಂಚಿಸಿದ್ದಾರೆ ಎಂದು ಆರೋಪಿಸಿ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಇಕ್ಬಾಲ್ ನನಗೆ ಪರಿಚಯವಿದ್ದು, ಮೈಸೂರಿನ ಶಿವಕುಮಾರ್ ಹಾಗೂ ಮಧು ಎಂಬವರ ಬಳಿ ರೈಸ್ ಪುಲ್ಲಿಂಗ್ ಆರ್ಟಿಕಲ್ ಇರುವ ಬಗ್ಗೆ ತಿಳಿಸಿದ್ದರು. ಚೆನ್ನೈನ ಕಂಪೆನಿಯೊಂದು ರೈಸ್ ಪುಲ್ಲೀಂಗ್ ಆರ್ಟಿಕಲ್ ಖರೀದಿಸಲು ಮುಂದೆ ಬಂದಿದ್ದು, ಅವರನ್ನು ಕರೆತರುವ ಹಾಗೂ ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲು ಹಣ ಬೇಕಾಗುತ್ತದೆ ಎಂದು ತಿಳಿಸಿದ್ದರು. ಶಿವಕುಮಾರ್ ಅವರ ಬಳಿ ಇರುವ ರೈಸ್ ಪುಲ್ಲಿಂಗ್ ಯಂತ್ರ ಖರೀದಿಸಿದರೆ ಕೋಟ್ಯಂತರ ರೂ. ಹಣ ಸಂಪಾದಿಸಬಹುದು ಎಂದು ಆಸೆ ಹುಟ್ಟಿಸಿ ನನ್ನಿಂದ 98 ಲಕ್ಷ ರೂ. ಹಣ ಪಡೆದಿದ್ದಾರೆ. ನಂತರ ಎಷ್ಟು ದಿನ ಕಾದರೂ ರೈಸ್ ಪುಲ್ಲಿಂಗ್ ಆರ್ಟಿಕಲ್ ಖರೀದಿಸಲು ಯಾರೂ ಬಂದಿಲ್ಲ. ಹೀಗಾಗಿ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಿನ್ನಾಭರಣ ಬಿಡಿಸಿಕೊಡುವುದಾಗಿ ಹೇಳಿ ಮಹಿಳೆಗೆ ವಂಚನೆ: ಬ್ಯಾಂಕ್ನಲ್ಲಿ ಅಡವಿಟ್ಟ ಚಿನ್ನಾಭರಣ ಬಿಡಿಸಿ ಹೆಚ್ಚಿನ ಹಣ ನೀಡುತ್ತೇವೆ ಎಂದು ನಂಬಿಸಿ ಫೈನಾನ್ಸ್ ಕಂಪೆನಿಯೊಂದು ವಂಚಿಸಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪವಿತ್ರ ಎಂಬವರು ಕುವೆಂಪು ನಗರದಲ್ಲಿನ ಖಾಸಗಿ ಫೈನಾನ್ಸ್ ಕಂಪನಿಯ ಸಹನಾ, ಶಾಂತ, ಶಂಕರ್, ಅಭಿಲಾಷ್, ಕಿರಣ್, ಸುಂದರರಾಜನ್ ಹಾಗೂ ಮಹೇಂದ್ರ ಎಂಬವರ ವಿರುದ್ಧ ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಬಳಿ ಇದ್ದ 290 ಗ್ರಾಂ ಚಿನ್ನಾಭರಣ ಹಾಗೂ ಸ್ನೇಹಿತೆ ಬಿಂದು ಎಂಬವರ 323 ಗ್ರಾಂ ಚಿನ್ನಾಭರಣವನ್ನು ಬೆಂಗಳೂರಿನ ಬ್ಯಾಂಕ್ನಲ್ಲಿ ಅಡವಿಟ್ಟು ಹಣ ಪಡೆದಿದ್ದೆವು. ಚಿನ್ನವನ್ನು ಮಾರಿ ಹೆಚ್ಚಿನ ಹಣ ಪಡೆಯುವ ಉದ್ದೇಶದಿಂದ ಫೈನಾನ್ಸ್ ಕಂಪೆನಿಯನ್ನು ಸಂಪರ್ಕಿಸಿದಾಗ ಕಂಪೆನಿಯವರು ಪ್ರತಿ ಗ್ರಾಂ ಚಿನ್ನಕ್ಕೆ 17,200 ರೂ. ಕೊಡುವುದಾಗಿ ಭರವಸೆ ನೀಡಿದರು. ನಂತರ ಅವರನ್ನು ಕಾರಿನಲ್ಲಿ ಕರೆದುಕೊಂಡು ಮೈಸೂರಿನ ಕಚೇರಿಗೆ ಕರೆತಂದರು. ನಂತರ ಚಿನ್ನದ ಪ್ಯೂರಿಟಿ ಚೆಕ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕೆಲ ಸಮಯದ ನಂತರ ನಿಮ್ಮ ಚಿನ್ನ ಹೆಚ್ಚಿನ ಪ್ಯೂರಿಟಿ ಹೊಂದಿಲ್ಲ ಎಂದು ಹೇಳಿದ ಅವರು, ನಮ್ಮ ಚಿನ್ನಕ್ಕೆ ಉಳಿಕೆ ಹಣವಾಗಿ 5 ಲಕ್ಷ ರೂ. ನೀಡುವುದಾಗಿ ಹೇಳಿದರು. ಆದರೆ, ನಾವು ಅವರು ಹೇಳಿದ್ದನ್ನು ಒಪ್ಪಲಿಲ್ಲ. ಕೊನೆಗೆ ನಮಗೆ ನಮ್ಮ ಆಭರಣಗಳನ್ನು ವಾಪಸ್ ನೀಡಿ ಎಂದು ಕೇಳಿದರೆ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಕ್ಕುಪತ್ರ ಇದ್ದವರಿಗೆ ಮತ್ತೇ ಹಕ್ಕು ಪತ್ರ ನೀಡಲಾಗಿದೆ: ಕಾಂಗ್ರೆಸ್ನ ಸಮರ್ಪಣಾ ಸಮಾವೇಶದ ವಿರುದ್ಧ ಗಂಭೀರ ಆರೋಪ

