ಚಿಂತಾಮಣಿಯಲ್ಲಿ 60ಕ್ಕೂ ಹೆಚ್ಚು ಕುರಿಗಳ ಅನುಮಾನಾಸ್ಪದ ಸಾವು
ಯಾವುದಾದರೂ ರಾಸಾಯನಿಕವನ್ನು ಸಿಂಪಡಿಸಿದ್ದ ಹುಲ್ಲನ್ನು ತಿಂದಿರಬಹುದು ಅಥವಾ ನೀರನ್ನು ಕುಡಿದಿರಬಹುದು ಎಂದು ಕುರಿಗಳ ಮಾಲೀಕ ಅನುಮಾನ ವ್ಯಕ್ತಪಡಿಸಿದ್ದಾರೆ.

Published : January 3, 2026 at 12:24 PM IST
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಕಾಚಹಳ್ಳಿಯಲ್ಲಿ ಸುಮಾರು 60ಕ್ಕಿಂತ ಹೆಚ್ಚು ಕುರಿಗಳು ಶುಕ್ರವಾರ ಸಂಜೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಸಾವಿಗೆ ಕಾರಣ ಗೊತ್ತಾಗಿಲ್ಲ. ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ವೈದ್ಯರು ಸ್ಥಳಕ್ಕೆ ತೆರಳಿ ಎಲ್ಲಾ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಗ್ರಾಮದ ಜಾಫರ್ ಖಾನ್, ಖುರ್ಷಿದ್ ಮತ್ತು ಮಾಲಿಕ್ ಮೂರು ಜನರು ಸುಮಾರು 200 ಕುರಿಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ಹೊರಗಡೆ ಮೇಯಿಸಿಕೊಂಡು ಬಂದಿದ್ದಾರೆ. ಸಾಯಂಕಾಲ ಮನೆಗೆ ಬರುತ್ತಲೇ ಒಂದೊಂದಾಗಿ ಸುಮಾರು 50 ಕುರಿಗಳು ಸತ್ತಿವೆ. ಕೂಡಲೇ ಪಶುವೈದ್ಯಕೀಯ ಇಲಾಖೆಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯರು ಸ್ಥಳಕ್ಕೆ ಬಂದು ಉಳಿದ ಎಲ್ಲಾ ಕುರಿಗಳಿಗೆ ಚುಚ್ಚುಮದ್ದು ನೀಡಿದ್ದಾರೆ. ಸಾವಿಗೆ ಕಾರಣ ಗೊತ್ತಾಗಿಲ್ಲ. ಯಾವುದಾದರೂ ರಾಸಾಯನಿಕವನ್ನು ಸಿಂಪಡಿಸಿದ್ದ ಹುಲ್ಲನ್ನು ತಿಂದಿರಬಹುದು ಅಥವಾ ನೀರನ್ನು ಕುಡಿದಿರಬಹುದು ಎಂಬ ಅನುಮಾನವಿದೆ ಎಂದು ಮಾಲೀಕ ಜಾಫರ್ ಖಾನ್ ತಿಳಿಸಿದರು.
ಸುಮಾರು 25-30 ವರ್ಷಗಳಿಂದ ಕುರಿಗಳನ್ನು ಸಾಕುವುದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಈಗಾಗಲೇ 60ಕ್ಕಿಂತ ಹೆಚ್ಚು ಕುರಿಗಳು ಸತ್ತಿವೆ. ವೈದ್ಯರು ಬೆಳಗ್ಗೆ ಬಂದು ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. ಸರ್ಕಾರ ನೆರವಿಗೆ ಬಂದು ಪರಿಹಾರ ನೀಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಇಂದೋರ್: ವಿಷ ಆಹಾರ ಸೇವನೆಯಿಂದ 200 ಗಿಳಿಗಳ ಸಾವು

