ETV Bharat / state

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಯುವಕರ ಗುಂಪಿನಿಂದ ಕಲ್ಲು ತೂರಾಟ ಆರೋಪ

ಬೆಂಗಳೂರಿನ ಜೆ.ಜೆ.ನಗರದಲ್ಲಿ ಭಾನುವಾರ ತಡರಾತ್ರಿ ದೇವಿಯ ತೇರು ಎಳೆಯುವಾಗ ಯುವಕರ ಗುಂಪು ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ.

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅನ್ಯ ಕೋಮಿನ ಯುವಕರಿಂದ ಕಲ್ಲು ತೂರಾಟ, ಪ್ರಕರಣ ದಾಖಲು
ಗಾಯಗೊಂಡ ಹುಡುಗಿ ಮತ್ತು ಜೆ.ಜೆ.ನಗರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : January 5, 2026 at 8:00 AM IST

2 Min Read
Choose ETV Bharat

ಬೆಂಗಳೂರು: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕೆಲವು ಯುವಕರು ಕಲ್ಲೆಸೆದಿರುವ ಘಟನೆ ತಡರಾತ್ರಿ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಎಸ್.ಗಾರ್ಡನ್​ನಲ್ಲಿ ನಡೆದಿದೆ.

ಕಿಡಿಗೇಡಿಗಳ ಕೃತ್ಯದಿಂದ ಓಂ ಶಕ್ತಿ ಮಾಲಾಧಾರಿ ಓರ್ವ ಹುಡುಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರ ಹೇಳಿಕೆಗಳು (ETV Bharat)

ದೇವರ ಉತ್ಸವದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು, ಜೆ.ಜೆ.ನಗರ ಠಾಣೆ ಮಂದೆ ಸೇರಿ ಕಲ್ಲು ತೂರಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಓಂ ಶಕ್ತಿ ದೇವಿಯ ಉತ್ಸವ ನಡೆಯುತ್ತಿದ್ದು, ದೇವಿಯ ತೇರು ಎಳೆಯುವಾಗ ಯುವಕರು ಕಲ್ಲು ತೂರಿದ್ದಾರೆ. ಈ ಹಿಂದೆಯೂ ಬೆಂಕಿ ಹಚ್ಚುವಂಥ ಕೃತ್ಯಗಳು ನಡೆದಿದ್ದವು ಎಂದು ಓಂ ಶಕ್ತಿ ಮಾಲಾಧಾರಿಗಳು ಹೇಳಿದ್ದಾರೆ.

ಘಟನೆ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಸಿಗುತ್ತಿದ್ದಂತೆ ಜೆ.ಜೆ.ನಗರ ಪೊಲೀಸ್ ಠಾಣೆಗೆ ಎಸಿಪಿ ಭರತ್ ರೆಡ್ಡಿ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಶಶಿಕುಮಾರ್ ಎನ್​. ಅವರು ಪ್ರತಿಕ್ರಿಯಿಸಿ, "ಕಳೆದ ಸುಮಾರು 23 ವರ್ಷಗಳಿಂದ ಇಲ್ಲಿ ಓಂಶಕ್ತಿ ಮಾಲೆ ಮತ್ತು ಇರುಮುಡಿ ಕಟ್ಟಿಕೊಂಡು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಲಾಗುತ್ತಿದೆ. ನಿನ್ನೆ ರಾತ್ರಿ ಸುಮಾರು 08:15 ಗಂಟೆಯಿಂದ 09:00 ಗಂಟೆಯ ಸುಮಾರಿಗೆ ಪಂಚಮುಖಿ ನಾಗದೇವತಾ ದೇವಾಸ್ಥಾನದ ಬಳಿ ಭಕ್ತರು ಮೆರವಣಿಗೆ ಹೋಗುತ್ತಿದ್ದಾಗ ಅನ್ಯಕೋಮಿನ ಮುರ್ನಾಲ್ಕು ಯುವಕರು ಕಲ್ಲು ತೂರಾಟ ಮಾಡಿದ್ದಾರೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಒಬ್ಬ ಹೆಣ್ಣು ಮಗಳ ತಲೆಗೆ ಕಲ್ಲು ಬಿದ್ದು ಬಲವಾದ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದೇವೆ. ಈ ರೀತಿಯ ಘಟನೆಗಳು ಈ ಹಿಂದಿನಿಂದಲೂ ನಡೆಯತ್ತಿವೆ. ಈ ಹಿಂದೆ ಇದೇ ರೀತಿ ಎರಡು ಮೂರು ಬಾರಿ ಧಾರ್ಮಿಕ ಆಚರಣೆಯ ವೇಳೆ ಬೆಂಕಿ ಹಾಕಿದ್ದಾರೆ. ಇಲ್ಲಿ ದಲಿತರು ಹೆಚ್ಚು ಇರುವ ಕಾರಣ ದೌರ್ಜನ್ಯ ನಡೆಯುತ್ತಿದೆ. ಹಿಂದೂ ಭಾವನೆಗಳಿಗೆ ಹಾಗೂ ದಲಿತರಿಗೆ ದೌರ್ಜನ್ಯ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಓಂ ಶಕ್ತಿ ಭಕ್ತಾಧಿಕಗಳು, ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಮನವಿ ಮಾಡಿಕೊಳ್ಳುತ್ತಿದ್ದೇವೆ" ಎಂದು ತಿಳಿಸಿದರು.

ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮೂವರು ಅಪ್ರಾಪ್ತರು ವಶಕ್ಕೆ: ಕಲ್ಲು ತೂರಾಟ ನಡೆಸಿದ್ದ ಮೂವರು ಅಪ್ರಾಪ್ತರನ್ನು ಜೆ.ಜೆ.ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು,ವಿಚಾರಣೆ ನಡೆಯುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ತಿಳಿಸಿದ್ದಾರೆ.

ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಕಲ್ಲೆಸೆದಿರುವುದನ್ನು ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಖಂಡಿಸಿದ್ದಾರೆ. "ಆರೋಪಿಗಳ ಕೃತ್ಯದ ಬಳಿಕ ನಿನ್ನೆ ಹಿಂದೂಗಳು ತಾಳ್ಮೆಯಿಂದ ವರ್ತಿಸಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿತ್ತು. ರಾತ್ರಿಯೇ ಡಿಸಿಪಿ, ಹಾಗೂ ಇನ್ಸ್‌ಪೆಕ್ಟರ್ ಜತೆ ಮಾತನಾಡಿದ್ದೆ‌. ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಚಾಮರಾಜಪೇಟೆ, ಜೆ.ಜೆ.ನಗರ ಪ್ರದೇಶಗಳು ನಗರದ ಹೃದಯಭಾಗದಲ್ಲಿದ್ದರೂ ಸಹ ಅಭಿವೃದ್ಧಿಯಾಗಿಲ್ಲ. ಮೊದಲನೆಯದಾಗಿ ಈ ಪ್ರದೇಶಗಳನ್ನು ಅಪರಾಧ ಮುಕ್ತವಾಗಿಸಬೇಕು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇದನ್ನೂ ಓದಿ: ಬಳ್ಳಾರಿ ಗೋಲಿ ಗಲಭೆಯ ತನಿಖೆ ತೀವ್ರ: 26 ಆರೋಪಿಗಳ ಬಂಧನ, 6 ಎಫ್‌ಐಆರ್ ದಾಖಲು