ಮಂಗಳೂರು - ಮಸ್ಕತ್ ನಡುವೆ ಮಾ.1ರಿಂದ ನೇರ ವಿಮಾನಯಾನ ಸೇವೆ ಪುನಾರಂಭ
ಮಂಗಳೂರು - ಮಸ್ಕತ್ ನಡುವೆ ಮಾರ್ಚ್ 1 ರಿಂದ ನೇರ ವಿಮಾನಯಾನ ಸೇವೆ ಪುನಾರಂಭ ಆಗಲಿದೆ.

Published : February 28, 2026 at 10:38 AM IST
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ನಡುವಿನ ನೇರ ವಿಮಾನಯಾನ ಸೇವೆಯು ಮಾರ್ಚ್ 1 ರಿಂದ ಅಧಿಕೃತವಾಗಿ ಪುನಾರಂಭಗೊಳ್ಳಲಿದೆ ಎಂದು ಸಂಸದ ಬ್ರಿಜೇಶ್ ಚೌಟ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವತಿಯಿಂದ ಮಂಗಳೂರು - ಮಸ್ಕತ್ ನಡುವೆ ವಿಮಾನ ಹಾರಾಟ ನಡೆಯಲಿದೆ. ಕರಾವಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಮಸ್ಕತ್ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ಸೇವೆಗೆ ಹೆಚ್ಚಿನ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು, ವಿಮಾನಯಾನ ಸೇವೆ ಪುನಾರಂಭಿಸುವಂತೆ ಮನವಿ ಸಲ್ಲಿಸಿದ್ದರು.
ವಾರದಲ್ಲಿ ಎರಡು ದಿನ ವಿಮಾನ: ಈಗಿನ ವೇಳಾಪಟ್ಟಿಯ ಪ್ರಕಾರ, ವಾರದಲ್ಲಿ ಎರಡು ದಿನ ಅಂದರೆ ಪ್ರತಿ ಭಾನುವಾರ ಮತ್ತು ಮಂಗಳವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಂಗಳೂರು - ಮಸ್ಕತ್ ನಡುವೆ ಹಾರಾಟ ನಡೆಸಲಿದೆ. ಈ ನೇರ ಸೇವೆಯಿಂದಾಗಿ ಪ್ರಯಾಣದ ಸಮಯ ಉಳಿತಾಯವಾಗುವುದಲ್ಲದೇ, ಅನಿವಾಸಿ ಭಾರತೀಯರಿಗೆ ತಮ್ಮ ಊರುಗಳಿಗೆ ನೇರವಾಗಿ ಪ್ರಯಾಣಿಸಲು ಬಹಳಷ್ಟು ಅನುಕೂಲವಾಗಲಿದೆ.
ಸಂಸದರ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, "ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆಯು ಅಚಾನಕ್ ಆಗಿ ಸ್ಥಗಿತಗೊಂಡ ಕಾರಣ ಮಸ್ಕತ್ನಲ್ಲಿ ನೆಲೆಸಿರುವ ನಮ್ಮ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಮಸ್ಕತ್ನಿಂದ ಮಂಗಳೂರಿಗೆ ಬರಬೇಕಾದವರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸುತ್ತಿ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಈ ಗಂಭೀರ ಸಮಸ್ಯೆಯನ್ನು ಮನಗಂಡು ನಾವು ನಡೆಸಿದ ನಿರಂತರ ಪ್ರಯತ್ನ ಹಾಗೂ ಮನವಿಗೆ ಸ್ಪಂದಿಸಿ, ಮಾರ್ಚ್ 1 ರಿಂದ ಈ ಸೇವೆಯನ್ನು ಪುನರಾರಂಭಿಸಲು ಕ್ರಮ ಕೈಗೊಂಡ ಕೇಂದ್ರ ಸರ್ಕಾರಕ್ಕೆ ಸಮಸ್ತ ಅನಿವಾಸಿ ಕರಾವಳಿಗರ ಪರವಾಗಿ ನಾನು ಹೃತ್ಪೂರ್ವಕ ವಂದನೆ ಅರ್ಪಿಸುತ್ತೇನೆ. ಈ ನೇರ ವಿಮಾನ ಸೇವೆಯು ನಮ್ಮ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ಮಂಗಳೂರು-ದೆಹಲಿ ನೇರ ವಿಮಾನ: ಮಂಗಳೂರು ಮತ್ತು ದೆಹಲಿ ನಡುವೆ ಫೆ.1 ರಿಂದ ನೇರ ವಿಮಾನಯಾನ ಸೇವೆ ಆರಂಭವಾಗಿದೆ.
ಇದನ್ನೂ ಓದಿ: ಬೆಂಗಳೂರು-ಬ್ಯಾಂಕಾಕ್ ನಡುವೆ ಪ್ರತಿದಿನ ನೇರ ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್: ದರಗಳು ಹೀಗಿವೆ

