ಬಳ್ಳಾರಿ ಗಲಭೆ: ತನಿಖೆ ಸರಿಯಾಗಿ ನಡೆಯುತ್ತಿದೆ, ಆತಂಕಪಡುವ ಅವಶ್ಯಕತೆ ಇಲ್ಲ- ಸತೀಶ್ ಜಾರಕಿಹೊಳಿ
ಬಳ್ಳಾರಿ ಗಲಭೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.

Published : January 5, 2026 at 1:47 PM IST
ಮೈಸೂರು: ಬಳ್ಳಾರಿ ಗಲಭೆಯ ಬಗ್ಗೆ ತನಿಖೆ ಆಗಲಿ. ಪ್ರಥಮ ವರದಿ ಬರಲಿ. ಆ ನಂತರ ಮಾತನಾಡೋಣ. ತನಿಖೆ ಸರಿಯಾಗಿ ನಡೆಯುತ್ತಿದೆ. ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್ ನಂತರ ಸಿಎಂ ಬದಲಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ತಾವು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಲ್ಲಾ ಎಂಬ ಪ್ರಶ್ನೆಗೆ, ನಾನು ಆ ರೀತಿ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ, ನಾನು ಸಿಎಂ ರೇಸ್ನಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಹಂಚಿಕೆ ಬಗ್ಗೆ ಏನಾದರೂ ಚರ್ಚೆ ನಡೆಯುತ್ತಿದೆಯೇ? ಎಂಬುದಕ್ಕೆ, ಇಲ್ಲ, ನಾವು ಆ ಮಟ್ಟದಲ್ಲಿ ಇಲ್ಲ. ಅಧಿಕಾರ ಹಂಚಿಕೆ ಆಗಿದೆಯೇ? ಯಾರು ಯಾವಾಗ ಬರುತ್ತಾರೆ ಅಂತ ಗೊತ್ತಿಲ್ಲ. ನಿರ್ಧಾರ ತೆಗೆದುಕೊಳ್ಳುವ ಜಾಗದಲ್ಲಿ ನಾವು ಇಲ್ಲವಲ್ಲ. ನಿರ್ಧಾರ ಏನಿದ್ದರೂ ದೆಹಲಿಯಲ್ಲಿ ತೆಗೆದುಕೊಳ್ಳುತ್ತಾರೆ. ನಮ್ಮ ಮಟ್ಟದಲ್ಲಿ ಯಾವುದೂ ಇರುವುದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯನವರ ಸಾಧನಾ ಸಮಾವೇಶದ ಸಿದ್ಧತೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಇನ್ನೂ ನಿರ್ಧಾರ ಆಗಬೇಕು. ಎಲ್ಲಿ ಸಮಾವೇಶ ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಬೇಕು. ಅಂತಿಮವಾಗಿ ಸಿಎಂ ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ದಾಖಲೆ ಇನ್ನೂ ಎಷ್ಟು ದಿನ ಹೋಗಬಹುದು? ಎಂಬುದಕ್ಕೆ, ಸಿಎಂ ಅವರನ್ನೇ ಕೇಳಬೇಕು. ಸಿದ್ದರಾಮಯ್ಯ 5 ವರ್ಷಕ್ಕೆ ಸಿಎಂ ಆಗಿದ್ದಾರೆ. ನಾವು ಅದನ್ನೇ ಸಾಕಷ್ಟು ಬಾರಿ ಹೇಳಿದ್ದೇವೆ ಎಂದು ಹೇಳಿದರು.
ಆದರೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇರುವುದಕ್ಕೆ, ಆ ಚರ್ಚೆ ನಿಲ್ಲಬೇಕು ಎಂಬ ಬಗ್ಗೆ ನಮ್ಮ ಅಭಿಪ್ರಾಯವೂ ಇದೆ ಎಂದರು. ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರಾ? ಎಂದು ಕೇಳಿದಾಗ, ನಾವೆಲ್ಲ ಇರುತ್ತಾರೆ ಎಂದು ಹೇಳಿದ್ದೇವೆ. ಅವರೂ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ಇನ್ನೇನು?. ಅಧಿವೇಶನದಲ್ಲೇ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಬಳ್ಳಾರಿ ಗೋಲಿ ಗಲಭೆಯ ತನಿಖೆ ತೀವ್ರ: 26 ಆರೋಪಿಗಳ ಬಂಧನ, 6 ಎಫ್ಐಆರ್ ದಾಖಲು

