ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ: ಶಾಸಕ ಕದಲೂರು ಉದಯ್ ಆರೋಪ
ಹೆಚ್.ಡಿ. ಕುಮಾರಸ್ವಾಮಿ ಅವರ ಮಗ ಗೆದ್ದಿಲ್ಲ ಅಂತ ಸಿಡಿ ಬಿಟ್ಟು, ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು ಎಂದು ಶಾಸಕ ಕದಲೂರು ಉದಯ್ ಆರೋಪಿಸಿದ್ದಾರೆ.

Published : March 3, 2026 at 2:48 PM IST
ಮಂಡ್ಯ: ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ. ಅವರ ಮಗ ಗೆದ್ದಿಲ್ಲ ಅಂತ ಸಿಡಿ ಬಿಟ್ಟು, ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು ಎಂದು ಶಾಸಕ ಕದಲೂರು ಉದಯ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ನಾನು ಬೆಳೆಯಬಾರದು ಅಂತ ಟಾರ್ಗೆಟ್ ಮಾಡ್ತಿದ್ದಾರೆ, ಅವರು ಅಣ್ಣನ ಮಕ್ಕಳನ್ನೇ ಸಹಿಸಲ್ಲ, ನನ್ನಂಥ ಬಡವರ ಮಕ್ಕಳನ್ನು ಸಹಿಸುತ್ತಾರಾ?. ಅವರು ಮಗ ಗೆದ್ದಿಲ್ಲ, ಜನ ತಿರಸ್ಕಾರ ಮಾಡಿದ್ರು ಎಂದು ಅವರ ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು, ಇವರೇ ಕ್ರಿಯೆಟ್ ಮಾಡಿ ಜೈಲಿಗೆ ಕಳುಹಿಸಿದ್ರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮನಸ್ಸು ಮಾಡಿದ್ರೆ ಬಿಡಿಸಿಕೊಂಡು ಬರಬಹುದಿತ್ತು. ಕೇಂದ್ರ ಸಚಿವರಾಗಿ ಕುಮಾರಸ್ವಾಮಿಗೆ ದೊಡ್ಡ ಜವಾಬ್ದಾರಿ ಇದೆ, ರಾಜಕೀಯ ಮಾಡಬಾರದು. ಇಲ್ಲಿ ಬಂದು ಜನರನ್ನ ಎತ್ತಿಕಟ್ಟುವುದಲ್ಲ ಎಂದು ಕಿಡಿಕಾರಿದ್ದಾರೆ.
ಹೋರಾಟಕ್ಕೆ ಕುಮಾರಸ್ವಾಮಿ ಒಬ್ಬರದೇ ಬೆಂಬಲ ಅಲ್ಲ. ನಮ್ಮ ಬೆಂಬಲ ಕೂಡ ಇರುತ್ತೆ. ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಮಾಡೋದು ಯಾವ ನ್ಯಾಯ?, ಕೆಆರ್ಎಸ್ನಲ್ಲಿ ಕಾವೇರಿ ಆರತಿ ಮಾಡಬೇಡಿ, ಅಮ್ಯೂಸ್ಮೆಂಟ್ ಪಾರ್ಕ್ಗೆ ವಿರೋಧ ಮಾಡ್ತಿರಿ. ಯಾಕೆ ರೈತರ ಮಕ್ಕಳು ಉದ್ಯೋಗ ಮಾಡೋದು ಬೇಡ್ವಾ?, ಕೆಆರ್ಎಸ್ ಅಭಿವೃದ್ಧಿ ಆದರೆ ಸಾವಿರಾರು ಯುವಕರಿಗೆ ಕೆಲಸ ಸಿಗುತ್ತೆ. ಸ್ಥಳೀಯ ಜನರು ಜೀವನ ಕಟ್ಟಿಕೊಳ್ತಾರೆ. ಅಭಿವೃದ್ಧಿಗೂ ಹೋರಾಟ ಮಾಡ್ತಿರಾ?. ಹೋರಾಟವನ್ನು ನಿಮ್ಮ ಇಷ್ಟ ಬಂದ ಹಾಗೆ ಮಾಡಬಹುದಾ?. ಕುಮಾರಸ್ವಾಮಿ ಪಾದಯಾತ್ರೆ ಮಾಡ್ತಾರಂತೆ. ಬೆಂಗಳೂರು ಬಹಳ ಹತ್ತಿರ ಇದೆ, ಡೆಲ್ಲಿಗೆ ಪಾದಯಾತ್ರೆ ಮಾಡಿ. ಕುಮಾರಸ್ವಾಮಿ ಅವರ ಉದ್ದೇಶ ರಾಜಕೀಯ. ರೈತ, ಬಡವ, ಒಕ್ಕಲಿಗರ ಮಕ್ಕಳು ಹೆಸರು ಮಾಡಬಾರದು. ಇವರ ಕುಟುಂಬ ಮಾತ್ರ ರಾಜಕೀಯವಾಗಿ ಇರಬೇಕಷ್ಟೆ. ಇವಾಗ ಹುಟ್ಟಿರುವ ಮೊಮ್ಮಗನಿಗೆ ಜಾಗ ಮಾಡೋಕೆ ವೇದಿಕೆ ರೆಡಿ ಮಾಡ್ತಿದ್ದಾರೆ ಎಂದರು.
ಕುಮಾರಸ್ವಾಮಿ ಕುಟುಂಬ ಯಾರನ್ನೂ ಬೆಳೆಯೋದಕ್ಕೆ ಬಿಟ್ಟಿಲ್ಲ. ನನಗೆ ರಾಜಕೀಯ ಬದುಕಲ್ಲ, ಮಂತ್ರಿಗಿರಿ, ಎಂಎಲ್ಎ ಅವಶ್ಯಕತೆ ಇಲ್ಲ. ನೀವೇ ಜನರ ಅತ್ರ ಹೋಗಿ ಸರ್ವೆ ಮಾಡಿ. ದುಡ್ಡಿನ ದುರಂಹಂಕಾರ ಎಂದರೆ ಏನು ಅರ್ಥ?, ಜನರ ಅಭಿಪ್ರಾಯದಿಂದಲೇ ನಗರಸಭೆ ಮಾಡಿದ್ದು, ನನ್ನ ವಯಕ್ತಿಕ ಲಾಭಕ್ಕೆ ಮಾಡಿಕೊಂಡಿಲ್ಲ, ಜನರಿಗಾಗಿ ಮಾಡಿದ್ದು. ನಾನು ಹಳ್ಳಿಯಲ್ಲಿ ಇರೋನು. ಇವರು ಪಾದಯಾತ್ರೆ ಮಾಡೋದಲ್ಲ, ಬನ್ನಿ ಚರ್ಚೆಗೆ. ಇವರ ಕೊಡುಗೆ ಏನು ಜನರ ಮುಂದೆ ಬಿಚ್ಚಿಡೋಣ. ಇವರಿಗೆ ರೈತರ ಮಕ್ಕಳು ಬೆಳೆಯಬಾರದು ಅನ್ನೋ ಉದ್ದೇಶ. ಇವರು ಯಾರನ್ನ ಬೆಳೆಯೋದಕ್ಕೆ ಬಿಟ್ಟಿಲ್ಲ.
ಬಚ್ಚೇಗೌಡ, ನಾಗೇಗೌಡ, ಚಂದ್ರೇಗೌಡ, ವರದೇಗೌಡ, ಸಿದ್ದರಾಜು ಅವರನ್ನ ಮನೆಯಲ್ಲಿ ಕೂರಿಸಿದ್ರು. 2008ರಲ್ಲಿ ಮ್ಯಾಚ್ ಪಿಕ್ಸ್ ಮಾಡಿಕೊಂಡ್ರು. ರಾಜಕೀಯವಾಗಿ ಯಾರನ್ನು ಬೆಳೆಯೊದಕ್ಕೆ ಬಿಟ್ಟಿದ್ದಾರೆ? ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಜಾಗ ಕೊಡೋಕೆ ನಾವು ರೆಡಿ, ಕೈಗಾರಿಕೆ ತಗೊಂಡ್ ಬನ್ನಿ ಎಂದು ಕೇಂದ್ರ ಸಚಿವ ಹೆಚ್ಡಿಕೆಗೆ ಶಾಸಕ ಕದಲೂರು ಉದಯ್ ಸವಾಲೆಸೆದರು.
ಕಾರ್ಖಾನೆ ತರಲಾಗದಿದ್ದರೆ ಯಾಕೆ ಕೈಗಾರಿಕಾ ಸಚಿವರಾಗಿದ್ದೀರಿ?, ಕುಮಾರಸ್ವಾಮಿ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆಗೆ ಬನ್ನಿ. ಅಭಿವೃದ್ಧಿ ಮಾಡೋಕು ರೈತರ ಕಷ್ಟ ತಿಳಿದುಕೊಳ್ಳಬೇಕು. ನಗರಸಭೆ ಮಾಡಿ ರೈತರ ಆಸ್ತಿ ಬರೆಸಿಕೊಂಡಿದ್ದಿವಾ?,
ಅಭಿವೃದ್ಧಿಗಾಗಿ ನಗರಸಭೆ ಮಾಡಿದ್ದೇವೆ ಎಂದು ಕಿಡಿಕಾರಿದರು.
ಇವುಗಳನ್ನೂ ಓದಿ:

