ಬೆಂಗಳೂರು: ಹೊರಮಾವು ಅಗರದಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ
ಕೆ.ಆರ್.ಪುರಂ ಕ್ಷೇತ್ರದ ಹೊರಮಾವು ಅಗರ ವಸತಿ ಪ್ರದೇಶದ 2 ಎಕರೆ 5 ಗುಂಟೆಯಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಪಾಲಿಕೆಯ ಜಂಟಿ ಆಯುಕ್ತೆ ನೋಟಿಸ್ ನೀಡಿದ್ದಾರೆ.

Published : January 8, 2026 at 2:01 PM IST
|Updated : January 8, 2026 at 3:34 PM IST
ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವು ಅಗರ ಗ್ರಾಮದಲ್ಲಿನ ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಜಂಟಿ ಆಯುಕ್ತೆ ಸುಧಾ ಆದೇಶಿಸಿದ್ದಾರೆ.
ಕೆ.ಆರ್.ಪುರಂ ಕ್ಷೇತ್ರದ ಹೊರಮಾವು ಅಗರ ವಸತಿ ಪ್ರದೇಶದ ಸರ್ವೇ ನಂಬರ್ 11/1, 11/2, 11/3, 11/4, 11/5 ಒಟ್ಟು 2 ಎಕರೆ 5 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಅವರು ನೋಟಿಸ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಜಂಟಿ ಆಯುಕ್ತೆ ಸುಧಾ, "ನವೆಂಬರ್ ತಿಂಗಳಲ್ಲಿ ಕೆಲಸ ನಿಲ್ಲಿಸಲು ಆದೇಶ ನೀಡಲಾಗಿತ್ತು. ಇವತ್ತು ನೋಟಿಸ್ ನೀಡಲಾಗಿದೆ. ಅದನ್ನು ಅಲ್ಲಿನ ನಿವಾಸಿಗಳು ನಿರಾಕರಿಸಿದ್ದಾರೆ. ಆದ್ದರಿಂದ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುತ್ತಿದೆ. ಅನಧಿಕೃತವಾಗಿ ನಿರ್ಮಾಣವಾಗಿರುವ 39 ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆ. ಇಲ್ಲಿರುವ ಕಟ್ಟಡಗಳು ರಾತ್ರೋರಾತ್ರಿ ಕಟ್ಟಿರುವ ಕಟ್ಟಡಗಳಲ್ಲ. ಈ ಹಿಂದಿನ ಅಧಿಕಾರಿಗಳು ಯಾವ ಕಾರಣಕ್ಕೆ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಕೊಟ್ಟರೋ ಗೊತ್ತಿಲ್ಲ. ತನಿಖೆ ನಡೆಸಲಾಗುತ್ತದೆ. ಜಿಬಿಎ ವತಿಯಿಂದ ಬೋರ್ಡ್ಗಳನ್ನು ಹಾಕಲು ಹೇಳಿದ್ದೇನೆ" ಎಂದರು.
ಬೆಂಗಳೂರು ಪೂರ್ವ ಪಾಲಿಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೋಗಿಲು ಲೇಔಟ್ ಒತ್ತುವರಿ ಪ್ರಕರಣ; ನಾಲ್ವರ ವಿರುದ್ಧ ಎಫ್ಐಆರ್
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಕೋಗಿಲು ಲೇಔಟ್ ಸರ್ಕಾರಿ ಭೂ ಒತ್ತುವರಿ ಪ್ರಕರಣ ರಾಜಕೀಯ ಚರ್ಚೆ ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಕಾರಣವಾಗಿದೆ. ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿರುವ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಆ ಜಾಗದಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳನೀರು ಚಿಪ್ಪು ಸಂಸ್ಕರಣೆ ಹಾಗೂ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು 2023ರಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ಆ ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ನಿರ್ಮಿಸಲಾಗಿದ್ದ ಸುಮಾರು 160ಕ್ಕೂ ಹೆಚ್ಚು ಮನೆಗಳನ್ನು ಡಿಸೆಂಬರ್ 20ರಂದು ಜಿಲ್ಲಾಡಳಿತ ಮತ್ತು ಬಿಎಸ್ಡಬ್ಲ್ಯೂಎಂಎಲ್ (ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್) ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದವು.
ಈ ಕ್ರಮದಿಂದ ಸದ್ಯ ನೂರಾರು ಕುಟುಂಬಗಳು ನಿರ್ಗತಿಕರಾಗಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮಾನವೀಯ ನೆಲೆಯಲ್ಲಿ ಅರ್ಹ ನಿರಾಶ್ರಿತರಿಗೆ ಪರ್ಯಾಯ ಮನೆಗಳನ್ನು ನೀಡಲು ನಿರ್ಧರಿಸಿದೆ. ಆದರೆ ಈ ಪರಿಹಾರದಲ್ಲಿ ಕೆಲವು ಮಾನದಂಡ ಹಾಗೂ ಅರ್ಹತೆಗಳನ್ನು ಉಲ್ಲೇಖಿಸಿದ್ದ, ಇದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಸದ್ಯ ಪರಿಹಾರಕ್ಕಾಗಿ ಅರ್ಹ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರೆದಿದೆ.

