ಜಮ್ಮು-ಕಾಶ್ಮೀರ ಚೊಚ್ಚಲ ರಣಜಿ ಟ್ರೋಫಿ ಗೆಲುವಿಗೆ ಕ್ಷಣಗಣನೆ; ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಓಮರ್ ಅಬ್ದುಲ್ಲಾ
ಜಮ್ಮು-ಕಾಶ್ಮೀರ ತಂಡ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದು, ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಲು ಸಿಎಂ ಓಮರ್ ಅಬ್ದುಲ್ಲಾ ಇಂದು ಹುಬ್ಬಳ್ಳಿಗೆ ಆಗಮಿಸಿದರು.

Published : February 27, 2026 at 10:12 PM IST
|Updated : February 27, 2026 at 10:27 PM IST
ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರ ರಣಜಿ ಟ್ರೋಫಿ ಫೈನಲ್ ತಲುಪಿರುವುದು ನಮಗೆ ಹೆಮ್ಮೆಯ ವಿಷಯ. ಇದು ಐತಿಹಾಸಿಕ. ಮೊದಲ ಪ್ರಶಸ್ತಿ ಜಮ್ಮು ಮತ್ತು ಕಾಶ್ಮೀರದ ಭವಿಷ್ಯವನ್ನು ಬದಲಾಯಿಸಬಹುದು ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಕ್ರಿಕೆಟರ್ಗಳು ಇದ್ದಾರೆ ಎಂಬ ಸತ್ಯವನ್ನು ಜನರು ಈಗ ಅರಿತುಕೊಳ್ಳಲಿದ್ದಾರೆ. ಆದರೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ನಮ್ಮ ಕ್ರಿಕೆಟರ್ಗಳ ಬಗ್ಗೆ ನೀವು ಹೆಚ್ಚು ಕೇಳಿರಲಿಲ್ಲ . ಈಗ ಸಮಯ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಒಬ್ಬ ಅಥವಾ ಇಬ್ಬರು ಆಟಗಾರರು ಭಾರತೀಯ ತಂಡದ ಜರ್ಸಿ ಧರಿಸಲು ನಿಜವಾಗಿಯೂ ಅರ್ಹರು ಎಂದರು.
ಇದು ಹುಬ್ಬಳ್ಳಿಗೆ ನನ್ನ ಮೊದಲ ಭೇಟಿ. ಇಲ್ಲಿಗೆ ಬರಲು ನಾನು ಆಸಕ್ತನಾಗಿದ್ದೆ. ಕ್ರಿಕೆಟ್ ಧರ್ಮದ ಬೇಧಗಳನ್ನು ಮೀರಿ ಜನರನ್ನು ಒಂದಾಗಿಸುತ್ತಿದೆ. ಇದು ರಂಜಾನ್ ಸಮಯ. ಈ ಒಳ್ಳೆಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಕಪ್ ಗೆದ್ದು ಮನೆಗೆ ತರುವುದನ್ನು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದರು.
ಅರವಿಂದ ಕೇಜ್ರಿವಾಲ್ಗೆ ಕೋರ್ಟ್ ಕ್ಲೀನ್ ಚಿಟ್ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅರವಿಂದ ಕೇಜ್ರಿವಾಲ್ ಹಾಗೂ ಇತರರಿಗೆ ಅಭಿನಂದನೆಗಳು. ಅವರು ನಿರಪರಾಧಿಗಳು. ಇದು ರಾಜಕೀಯ ಪ್ರಕರಣವಾಗಿತ್ತು. ನ್ಯಾಯಾಲಯ ಈ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿದೆ. ನಿರಪರಾಧಿತ್ವದ ತತ್ವವನ್ನು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ರಣಜಿ ಟ್ರೋಫಿ ಫೈನಲ್: ಚೊಚ್ಚಲ ಪ್ರಶಸ್ತಿಯ ಸನಿಹಕ್ಕೆ ಜಮ್ಮು ಕಾಶ್ಮೀರ, ಸಂಕಷ್ಟದಲ್ಲಿ ಕರ್ನಾಟಕ

